ನಾಡಿನೆಲ್ಲೆಡೆ ಆಯುಧಪೂಜೆ, ವಿಜಯದಶಮಿ ಸಂಭ್ರಮ: ಮುಖ್ಯಮಂತ್ರಿ ಸೇರಿದಂತೆ ಗಣ್ಯರಿಂದ ಶುಭಾಶಯ

ಕೋವಿಡ್-19 ಸಾಂಕ್ರಾಮಿಕ ರೋಗದ ಆತಂಕ ಕಡಿಮೆಯಾಗಿರುವುದರಿಂದ ನಾಡಿನೆಲ್ಲೆಡೆ ದಸರಾ ಹಬ್ಬದ ಪ್ರಮುಖ ದಿನಗಳಾದ ಕೊನೆಯ ಎರಡು ದಿನ ಸಂಭ್ರಮ ಕಳೆಕಟ್ಟಿದೆ. 
ಆಯುಧಪೂಜೆ ಹಿನ್ನೆಲೆಯಲ್ಲಿ ತುಮಕೂರಿನ ಮಾರುಕಟ್ಟೆಗೆ ಭಾರೀ ಪ್ರಮಾಣದಲ್ಲಿ ಬಂದ ಹೂವುಗಳು, ಮಾರಾಟ-ಖರೀದಿ ಭರಾಟೆ ಜೋರಾಗಿದೆ
ಆಯುಧಪೂಜೆ ಹಿನ್ನೆಲೆಯಲ್ಲಿ ತುಮಕೂರಿನ ಮಾರುಕಟ್ಟೆಗೆ ಭಾರೀ ಪ್ರಮಾಣದಲ್ಲಿ ಬಂದ ಹೂವುಗಳು, ಮಾರಾಟ-ಖರೀದಿ ಭರಾಟೆ ಜೋರಾಗಿದೆ
Updated on

ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕ ರೋಗದ ಆತಂಕ ಕಡಿಮೆಯಾಗಿರುವುದರಿಂದ ನಾಡಿನೆಲ್ಲೆಡೆ ದಸರಾ ಹಬ್ಬದ ಪ್ರಮುಖ ದಿನಗಳಾದ ಕೊನೆಯ ಎರಡು ದಿನ ಸಂಭ್ರಮ ಕಳೆಕಟ್ಟಿದೆ. 

ಇಂದು ಆಯುಧಪೂಜೆ ಮತ್ತು ನಾಳೆ ವಿಜಯದಶಮಿ ಅಂಗವಾಗಿ ಜನರು ಹಬ್ಬದ ಸಡಗರದಲ್ಲಿ ತೊಡಗಿದ್ದಾರೆ. ಬೆಂಗಳೂರು ಮಾರುಕಟ್ಟೆಗಳಲ್ಲಿ ನಿನ್ನೆಯಿಂದ ಆಯುಧಪೂಜೆ ಹಬ್ಬದ ಖರೀದಿ ಜೋರಾಗಿದೆ. ಮಾರುಕಟ್ಟೆಗಳಲ್ಲಿ ಜನಜಂಗುಳಿ ಕಂಡುಬಂದಿದೆ. ಆಯುಧ ಪೂಜೆಗೆ ಹೂವು, ಹಣ್ಣು, ಬಾಳೆದಿಂಡು ಖರೀದಿಯಲ್ಲಿ ಜನ ತಾಮುಂದು-ನಾಮುಂದು ಎಂದು ತೊಡಗಿದ್ದಾರೆ. 

ಹಬ್ಬದ ಹಿನ್ನೆಲೆಯಲ್ಲಿ ಹೂವು-ಹಣ್ಣು-ತರಕಾರಿಗಳ ಬೆಲೆ ಏರಿಕೆಯಾಗಿದ್ದರೂ ಕೂಡ ಜನ ಲೆಕ್ಕಿಸದೆ ಹಬ್ಬವನ್ನು ಆಚರಿಸಬೇಕೆಂದು ಹೊಸ ಹುಮ್ಮಸ್ಸಿನಲ್ಲಿ ಬ್ಯುಸಿಯಾಗಿದ್ದಾರೆ. ಬೆಂಗಳೂರಿನ ಕೆ ಆರ್ ಮಾರ್ಕೆಟ್, ಮಡಿವಾಳ ಮಾರುಕಟ್ಟೆಯಲ್ಲಂತೂ ಜನಜಂಗುಳಿ.

ಕಳೆದ ವರ್ಷ ಕೊರೊನಾ ಸೊಂಕು ವ್ಯಾಪಾರಸ್ಥರ ಬದುಕಿನಲ್ಲಿ ಸಾಕಷ್ಟು ಪ್ರಭಾವ ಬೀರಿತ್ತು. ಸ್ವಲ್ಪ ಮಟ್ಟಿಗೆ ಕೊರೊನಾ ನಿಯಂತ್ರಣಕ್ಕೆ ಬಂದಿರುವ ಹಿನ್ನೆಲೆಯಲ್ಲಿ ವ್ಯಾಪಾರ - ವಹಿವಾಟು, ಜನಜೀವನ ದೈನಂದಿನ ಚಟುವಟಿಕೆ ಸಹಜ ಸ್ಥಿತಿಗೆ ಬಂದಿದ್ದು, ವ್ಯಾಪಾರದಲ್ಲಿ ಚೇತರಿಕೆ ಕಂಡು ಮಾರುಕಟ್ಟೆಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಆಯುಧಪೂಜೆಗೆ ಅಗತ್ಯವಾದ ಪೂಜೆ ಸಾಮಗ್ರಿ, ಹಣ್ಣು - ಹಂಪಲು, ಬಾಳೆ ದಿಂಡು,ಬಾಳೆಕಂದು ಮಾವಿನ ಸೊಪ್ಪನ್ನು ಕೊಳ್ಳಲು ಗ್ರಾಹಕರು ಮುಗಿ ಬೀಳುತ್ತಿದ್ದಾರೆ.ಬೂದುಕುಂಬಳಕಾಯಿ ಬೆಲೆ ಕೂಡ ಏರಿಕೆಯಾಗಿದೆ.

ಇಂದು ಆಯುಧಪೂಜೆ ಹಾಗೂ ನಾಳೆ ವಿಜಯದಶಮಿ ಹಿನ್ನೆಲೆಯಲ್ಲಿ ಬುಧವಾರದಿಂದ ಹಬ್ಬದ ಸಡಗರ, ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಸಾವಿರಾರು ಜನ ಮಾರುಕಟ್ಟೆಯಲ್ಲಿ ಹಬ್ಬದ ಸಾಮಗ್ರಿ, ಸಿಹಿ ತಿಂಡಿಗಳು, ಕಾರ್ಮಿಕರಿಗೆ ಉಡುಗೊರೆ ಪದಾರ್ಥ ಖರೀದಿಯಲ್ಲಿ ತೊಡಗಿದ್ದು ಕಂಡುಬಂದಿದೆ.

ಈ ಬಾರಿ ಆಯುಧಪೂಜೆ, ವಿಜಯದಶಮಿ ವಾರಾಂತ್ಯಗಳಲ್ಲಿ ಬಂದಿರುವುದರಿಂದ ಸುದೀರ್ಘವಾಗಿ ರಜೆ ತೆಗೆದುಕೊಂಡು ಊರಿಗೆ ಹೋಗುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿ ನಿನ್ನೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ಮೆಜೆಸ್ಟಿಕ್ ಸುತ್ತಮುತ್ತ ಭಾರೀ ಜನದಟ್ಟಣೆ, ಸಂಚಾರ ದಟ್ಟಣೆ ಕಂಡುಬಂತು. 

ಸಾಂಸ್ಕೃತಿಕ ಮೈಸೂರಿನಲ್ಲಿ ಆಯುಧಪೂಜೆ ಸಂಭ್ರಮ,ರಾಜಬೀದಿಯಲ್ಲಿ ವೈಭವ: ನಾಡಹಬ್ಬ ದಸರಾ ಅಂಗವಾಗಿ ಮೈಸೂರು ಅರಮನೆಯ ಮುಂಭಾಗದಲ್ಲಿ ದಸರಾ, ಆಯುಧ ಪೂಜೆ ವೈಭವ ಕಳೆಕಟ್ಟಿದೆ. ಅರಮನೆಯಲ್ಲಿ ಆಯುಧಗಳಿಗೆ ಯುದುವೀರ್ ಒಡೆಯರ್ ಇಂದು ಬೆಳಗ್ಗೆ ಪೂಜೆ ಸಲ್ಲಿಸಿದ್ದಾರೆ. ಪೂರ್ವಿಕರು ಬಳಸುತ್ತಿದ್ದ ಕತ್ತಿ, ಗುರಾಣಿ, ಗುದ್ದಲಿ, ಆಯುಧಗಳಿಗೆ ಪೂಜೆ ಸಲ್ಲಿಸಿದ್ದು, ಮುಜಾನೆ 5.30ಕ್ಕೆ ಪೂಜಾ ವಿಧಿ ವಿಧಾನಗಳು ಆರಂಭವಾಗಿದೆ. ಇಂದು ಬೆಳಗ್ಗೆ ರಾಜಪರಿವಾರದ ಆನೆ, ಪಲ್ಲಕ್ಕಿ, ಕುದುರೆ, ವಾಹನಗಳಿಗೆ ಯುದುವೀರ್ ಒಡೆಯರ್ ಸೋಮನಾಥ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದ್ದಾರೆ. 

ಅರಮನೆಯಲ್ಲಿ ಆಯುಧಗಳಿಗೆ ಯುದುವೀರ್ ಒಡೆಯರ್ ಇಂದು ಬೆಳಗ್ಗೆ 11 ಗಂಟೆ 20 ನಿಮಿಷ ಸುಮಾರಿಗೆ ಪೂಜೆ ಸಲ್ಲಿಸಲಿದ್ದಾರೆ. ಪೂರ್ವಿಕರು ಬಳಸುತ್ತಿದ್ದ ಕತ್ತಿ, ಗುರಾಣಿ, ಗುದ್ದಲಿ, ಆಯುಧಗಳಿಗೆ ಪೂಜೆ ಸಲ್ಲಿಸಲಿದ್ದು ಅದನ್ನು ನಾಡಿನ ಜನತೆ ನೇರದೃಶ್ಯಗಳ ಮೂಲಕ ಸೋಷಿಯಲ್ ಮೀಡಿಯಾಗಳಲ್ಲಿ, ಮಾಧ್ಯಮಗಳಲ್ಲಿ ಕಣ್ತುಂಬಿಕೊಳ್ಳಬಹುದು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ನಾಡಿನ ಗಣ್ಯರು ಜನತೆಗೆ ಆಯುಧಪೂಜೆ ಮತ್ತು ನಾಳೆ ವಿಜಯದಶಮಿ ಅಂಗವಾಗಿ ಶುಭಕೋರಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com