ಕರ್ನಾಟಕ ಯುವ ನೀತಿ ಪರಿಷ್ಕರಣೆ ಸಮಿತಿ ರಚನೆ: ಬಿಜೆಪಿಯ ಪ್ರಬಲ ಬೆಂಬಲಿಗರಿಗೆ ಸ್ಥಾನ

2021ರ ಕರ್ನಾಟಕ ಯುವ ನೀತಿ ರೂಪಿಸಲು ರಾಜ್ಯ ಸರ್ಕಾರವು 13 ಸದಸ್ಯರ ತಜ್ಞರ ಸಮಿತಿಯನ್ನು ರಚಿಸಿದೆ. ಈ ಸಮಿತಿಯಲ್ಲಿ ಹೆಚ್ಚಿನ ಸದಸ್ಯರು ಬಿಜೆಪಿಯೊಂದಿಗೆ ಸಂಪರ್ಕ ಹೊಂದಿರುವವರು ಮತ್ತು ಕೆಲವರು ಮಾಜಿ ಸಚಿವರ ಮಕ್ಕಳಾಗಿದ್ದಾರೆ.
ಚಕ್ರವರ್ತಿ ಸೂಲಿಬೆಲೆ ಮತ್ತು ಸಂಕಲ್ಪ ಶೆಟ್ಟರ್
ಚಕ್ರವರ್ತಿ ಸೂಲಿಬೆಲೆ ಮತ್ತು ಸಂಕಲ್ಪ ಶೆಟ್ಟರ್

ಬೆಂಗಳೂರು:  2021ರ ಕರ್ನಾಟಕ ಯುವ ನೀತಿ ರೂಪಿಸಲು ರಾಜ್ಯ ಸರ್ಕಾರವು 13 ಸದಸ್ಯರ ತಜ್ಞರ ಸಮಿತಿಯನ್ನು ರಚಿಸಿದೆ. ಈ ಸಮಿತಿಯಲ್ಲಿ ಹೆಚ್ಚಿನ ಸದಸ್ಯರು ಬಿಜೆಪಿಯೊಂದಿಗೆ ಸಂಪರ್ಕ ಹೊಂದಿರುವವರು ಮತ್ತು ಕೆಲವರು ಮಾಜಿ ಸಚಿವರ ಮಕ್ಕಳಾಗಿದ್ದಾರೆ.

ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪಕಾರ್ಯದರ್ಶಿ ಗುರುವಾರ ಹೊರಡಿಸಿದ ಸರ್ಕಾರಿ ಆದೇಶದ ಪ್ರಕಾರ, ಸ್ವಾಮಿ ವಿವೇಕಾನಂದ ಯುವ ಚಳವಳಿಯ ಸಂಸ್ಥಾಪಕ, ಸಮಿತಿಯ ನೇತೃತ್ವ ವಹಿಸಲಿದ್ದಾರೆ. 

ಶಾಲಿನಿ ರಜನೀಶ್ (ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ), ಆಯುಕ್ತರು (ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ), ಪ್ರತಾಪ್ ಲಿಂಗಯ್ಯ (ಎನ್ಎಸ್ಎಸ್ ಅಧಿಕಾರಿ) ಮತ್ತು ಎಂಎನ್ ನಟರಾಜ್ (ನಿರ್ದೇಶಕರು, ನೆಹರು ಯುವ ಕೇಂದ್ರ) ಸರ್ಕಾರದ ಪ್ರತಿನಿಧಿಗಳಾಗಲಿದ್ದಾರೆ.

ಉಳಿದ ಸದಸ್ಯರಲ್ಲಿಪ್ರಬಲ ಬಿಜೆಪಿ ಬೆಂಬಲಿಗ ಮತ್ತು ಬಲಪಂಥೀಯ ವಾಗ್ಮಿ, ಯುವ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ,   ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಪುತ್ರ ಸಂಕಲ್ಪ ಶೆಟ್ಟರ್, ದಿವಂಗತ ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಪುತ್ರಿಐಶ್ವರ್ಯ ದಿವೇಶ್ ಸದಸ್ಯರಾಗಿದ್ದಾರೆ.

ಚನ್ನಮಲ್ಲಿಕಾರ್ಜುನ ಬಿ ಪಾಟೀಲ್ ಬಿಜೆಪಿ ಕರ್ನಾಟಕ ಸಾಮಾಜಿಕ ಮಾಧ್ಯಮ ತಂಡದ ಸಂಚಾಲಕ ಮತ್ತು ವಿನೋದ್ ಕೃಷ್ಣಮೂರ್ತಿ ಪ್ರಸ್ತುತ ಸಾಮಾಜಿಕ ಮಾಧ್ಯಮ ಸಂಚಾಲಕರಾಗಿದ್ದಾರೆ, ಕೆ ನಾಗಣ್ಣ ಗೌಡ ಅವರು ಈ ಹಿಂದೆ ಮಂಡ್ಯ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು ಹಾಗೂ ಕ್ರೀಡಾ ಸಚಿವ ನಾರಾಯಣ ಗೌಡ ಕೂಡ ಮಂಡ್ಯದವರಾಗಿದ್ದಾರೆ. ಈ ಪಟ್ಟಿಯನ್ನು ಪಕ್ಷದ ಕಚೇರಿಯಿಂದ ಕಳುಹಿಸಲಾಗಿದೆ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ.

ಪಕ್ಷದ ಕಾರ್ಯಕರ್ತರು ಅಥವಾ ಮಂತ್ರಿಗಳ ಮಕ್ಕಳನ್ನು ಸಮಿತಿಗೆ ಸೇರಿಸುವ ಬದಲು, ಶಿಕ್ಷಣ, ಮಹಿಳಾ ಸಬಲೀಕರಣ, ನೀರು, ಸ್ಟಾರ್ಟ್ಅಪ್ ಮತ್ತು ಇತರ ಕ್ಷೇತ್ರಗಳಲ್ಲಿ ಅಸಾಧಾರಣವಾಗಿ ಉತ್ತಮ ಕೆಲಸ ಮಾಡುತ್ತಿರುವ ಅನೇಕ ಯುವಕರು ಇದ್ದಾರೆ. ಅವರನ್ನೊಳಗೊಂಡಿದ್ದರೆ ಸಮಿತಿಗೆ ಹೆಚ್ಚಿನ ಅರ್ಥವನ್ನು ನೀಡುತ್ತಿತ್ತು  ಎಂದು ಮೂಲಗಳು ತಿಳಿಸಿವೆ.

ಸಮಿತಿಯು ಎರಡು ತಿಂಗಳಲ್ಲಿ ಅಧ್ಯಯನ ನಡೆಸಿ ವರದಿ ಸಲ್ಲಿಸಲಿದೆ ಎಂದು ನಾರಾಯಣ ಗೌಡ ಹೇಳಿಕೆಯಲ್ಲಿ ತಿಳಿಸಿದ್ದಾರೆ. 2012 ರಲ್ಲಿ, ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ರಾಜ್ಯ ಸರ್ಕಾರ ಯುವ ನೀತಿಯನ್ನು ರೂಪಿಸಿತ್ತು. ಒಟ್ಟಾರೆ ಅಭಿವೃದ್ಧಿಯಲ್ಲಿ ಯುವಕರನ್ನು ಸೇರಿಸುವುದು ಮತ್ತು ಸದೃಢ ರಾಜ್ಯವನ್ನು ನಿರ್ಮಿಸುವುದು ನೀತಿಯ ಉದ್ದೇಶವಾಗಿದೆ. ಬಹಳ ದಿನಗಳಿಂದ ನೀತಿಯನ್ನು ಪರಿಷ್ಕರಿಸಲಾಗಿಲ್ಲ ಎಂದು ಸಚಿವರು ಹೇಳಿದರು. 

"ಸಮಯಕ್ಕೆ ತಕ್ಕಂತೆ ಬದಲಾಗುವ ಅವಶ್ಯಕತೆಯಿದೆ, ಅದಕ್ಕಾಗಿಯೇ ತಜ್ಞರ ಸಮಿತಿಯನ್ನು ರಚಿಸಲಾಗಿದೆ. ಯುವಕರು ಡ್ರಗ್ಸ್ ಮತ್ತು ಇತರ ಅಭ್ಯಾಸಗಳಿಗೆ ಬಲಿಯಾಗುತ್ತಿದ್ದಾರೆ. ಅವರನ್ನು ಕ್ರೀಡೆ ಮತ್ತು ಕೌಶಲ್ಯ ಅಭಿವೃದ್ಧಿಯಲ್ಲಿ ಸೇರಿಸುವುದು ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುವುದು ನೀತಿಯ ಉದ್ದೇಶವಾಗಿದೆ ಎಂದು ನಾರಾಯಣಗೌಡ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com