ಶಾಸಕ ಶ್ರೀಮಂತ ಪಾಟೀಲ್ ಮತ್ತವರ ಇಬ್ಬರು ಮಕ್ಕಳ ವಿರುದ್ಧ ಕೇಸ್ ದಾಖಲು
ಬೆಳಗಾವಿ: ಶಾಸಕ ಶ್ರೀಮಂತ ಪಾಟೀಲ್ ಮತ್ತು ಅವರ ಮಗ ಶ್ರೀನಿವಾಸ ಯೋಗೇಶ್ ಪಾಟೀಲ್ ಸೇರಿದಂತೆ ಒಟ್ಟು 8 ಮಂದಿಯ ವಿರುದ್ಧ ಕಾಗವಾಡ ಪೊಲೀಸ್ ಠಾಣೆಯಲ್ಲಿ ಜೀವ ಬೆದರಿಕೆ ಪ್ರಕರಣ ದಾಖಲಾಗಿದೆ.
ಕಾಗವಾಡ ತಾಲ್ಲೂಕಿನ ನವಿಲೇಹಾಳ ಗ್ರಾಮದ ನಿವಾಸಿ ದೇವದಾಸ ದೊಂಡಿಬಾ ಶೇರಖಾನೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
‘ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದೆ. ಶಾಸಕ ಶ್ರೀಮಂತ ಪಾಟೀಲ ಅವರಿಂದ ಜೀವ ಬೇದರಿಕೆ ಇದೆ. ಜನಸಾಮಾನ್ಯರ ಜಮೀನು ಕಸಿದುಕೊಳ್ಳಲು ಅವರು ಮುಂದಾಗಿದ್ದಾರೆ. ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಶಾಸಕರು ಮತ್ತವರ ಪುತ್ರರ ಸೂಚನೆ ಮೇರೆಗೆ ಆಶೀಶ ಗಜಾನನ ಪಾಟೀಲ ನೇತೃತ್ವದಲ್ಲಿ ಬಂದ ಕೆಲವರು ನಮ್ಮ ಜಾಗದಲ್ಲಿ ಅತಿಕ್ರಮ ಪ್ರವೇಶ ಮಾಡಿದ್ದಲ್ಲದೇ ಜಾತಿ ಪ್ರಸ್ತಾಪಿಸಿ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿದ್ದಾರೆ. ಜಮೀನು ಬಿಟ್ಟು ಹೋಗದಿದ್ದರೆ ಕೊಲೆ ಮಾಡುತ್ತೇವೆ ಎಂದು ಜೀವ ಬೆದರಿಕೆ ಒಡ್ಡಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
‘ಜಮೀನಿನ ವಿಚಾರದಲ್ಲಿ ನ್ಯಾಯಾಲಯದಲ್ಲಿ ಸಿವಿಲ್ ದಾವೆ ನಡೆಯುತ್ತಿದೆ. ಈ ನಡುವೆ, ಶಾಸಕರು ಬೆಂಬಲಿಗರ ಮೂಲಕ ನಮಗೆ ತೊಂದರೆ ಕೊಡುತ್ತಿದ್ದಾರೆ. ಆ ಜಮೀನು ನನಗೆ ಸೇರಿದ್ದಾಗಿದೆ. ಅಲ್ಲಿ ಶಾಸಕರು ಗೊಬ್ಬರ ಕಾರ್ಖಾನೆ ನಿರ್ಮಿಸಲು ಮುಂದಾಗಿದ್ದಾರೆ. ನಮ್ಮ ಜಮೀನಿನ ಬಗ್ಗೆ ಕೇಳಲೂ ಹೋದರೆ ಬೆಂಬಲಿಗರ ಮೂಲಕ ಹಲ್ಲೆ ಮಾಡಿಸುತ್ತಿದ್ದಾರೆ’ ಎಂದು ದೇವದಾಸ ಆರೋಪಿಸಿದ್ದಾರೆ. ಈ ಸಂಬಂಧ ಕಾಗವಾಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.