ಚಿಕ್ಕಬಳ್ಳಾಪುರ: ಬರ್ತ್ ಡೇ ಪಾರ್ಟಿ ಆಗಮಿಸಿದ ಬೆಂಗಳೂರು ಮೂಲದ ಟೆಕ್ಕಿ ಓರ್ವ ಚಿಕ್ಕಬಳ್ಳಾಪುರ ತಾಲೂಕಿನ ಜಕ್ಕಲಮಡಗು ಜಲಾಶಯದ ಹಿನ್ನೀರಿನಲ್ಲಿ ಜಲಸಮಾಧಿಯಾಗಿದ್ದಾರೆ.
ಮೃತಪಟ್ಟ ಯುವಕ ಬೆಂಗಳೂರಿನ ಸುಂಕದಕಟ್ಟೆಯ ನಿವಾಸಿ ರೋಹಿತ್ (24) ಎಂದು ಗುರುತಿಸಲಾಗಿದೆ.
ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ರೋಹಿತ್ ಚಿಕ್ಕಬಳ್ಳಾಪುರದಲ್ಲಿರುವ ಸ್ನೇಹಿತ ಸಂತೋಷನ ಬರ್ತ್ ಡೇ ಪಾರ್ಟಿ ಆಚರಣೆಗೆ ಐವರು ಸ್ನೇಹಿತರೊಂದಿಗೆ ಜಕ್ಕಲಮಡಗು ಜಲಾಶಯಕ್ಕೆ ಬಂದಿದ್ದರು. ಈಜು ಬಾರದಿದ್ದರೂ ನೀರಿಗೆ ಇಳಿದಿದ್ದ ಸ್ನೇಹಿತರು, ಜಲಾಶಯದ ಹಿನ್ನೀರಿನಲ್ಲಿರುವ ಮರದ ಮೇಲೆ ಹತ್ತಿ ಸೆಲ್ಫಿ ಫೋಟೋ-ವಿಡಿಯೋ ಮಾಡಿಕೊಳ್ಳುತ್ತಿದ್ದರು. ಈ ವೇಳೆ ಕೆಳಗೆಬಿದ್ದ ರೋಹಿತ್ ನೀರಿನಲ್ಲಿ ಮುುಳುಗಿ ಸಾವನ್ನಪ್ಪಿದ್ದಾರೆ.
ಕುಡಿದ ಅಮಲಿನಲ್ಲಿ ಮರದ ಮೇಲೆ ಹತ್ತಿದ ರೋಹಿತ್ ಆಯತಪ್ಪಿ ನೀರಿಗೆ ಬಿದ್ದಿದ್ದಾರೆ ಎಂದು ನಂದಿಗಿರಿಧಾಮ ಠಾಣೆ ಪೊಲೀಸರು ತಿಳಿಸಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸಿ, ರೋಹಿತನ ಶವವನ್ನು ನೀರಿಂದ ಹೊರಗೆ ತೆಗೆದಿದ್ದಾರೆ. ಸ್ಥಳದಲ್ಲಿ ಮೃತನ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಜೊತೆಗಿದ್ದ ಸ್ನೇಹಿತರ ವಿರುದ್ಧವೂ ಪೋಷಕರು ಆಕ್ರೋಶಗೊಂಡಿದ್ದಾರೆ.
Advertisement