ಬೆಂಗಳೂರು ರಿಂಗ್ ರಸ್ತೆ ಯೋಜನೆ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸುತ್ತದೆ: ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ 

ಉದ್ದೇಶಿತ ಬೆಂಗಳೂರು ವರ್ತುಲ ರಸ್ತೆ ಯೋಜನೆ ಬೆಂಗಳೂರು ಸುತ್ತಮುತ್ತ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಲಿದೆ ಎಂದು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ
ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ
Updated on

ಬೆಂಗಳೂರು: ಉದ್ದೇಶಿತ ಬೆಂಗಳೂರು ವರ್ತುಲ ರಸ್ತೆ ಯೋಜನೆ ಬೆಂಗಳೂರು ಸುತ್ತಮುತ್ತ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಲಿದೆ ಎಂದು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ನಿನ್ನೆ ಅವರು ಬೆಂಗಳೂರು ಚೇಂಬರ್ಸ್ ಆಫ್ ಇಂಡಸ್ಟ್ರಿ ಅಂಡ್ ಕಾಮರ್ಸ್(ಬಿಸಿಐಸಿ)ಯ ಸದಸ್ಯರನ್ನುದ್ದೇಶಿಸಿ ಮಾತನಾಡಿ, 17 ಸಾವಿರ ಕೋಟಿ ರೂಪಾಯಿಗಳ ವಿಸ್ತ್ರೃತ ಯೋಜನಾ ವರದಿಯನ್ನು ಸಿದ್ದಪಡಿಸಲಾಗಿದ್ದು ಭೂ ಸ್ವಾಧೀನ ವೆಚ್ಚದ ಶೇಕಡಾ 25ರಷ್ಟನ್ನು ನೀಡುವುದಾಗಿ ಮತ್ತು ಸ್ಟೀಲ್, ಸಿಮೆಂಟ್ ಮತ್ತು ಯೋಜನೆಗೆ ಬಳಕೆಯಾಗುವ ಇತರ ವಸ್ತುಗಳ ಮೇಲೆ ಜಿಎಸ್ಟಿ ವಿನಾಯ್ತಿ ನೀಡುವುದಾಗಿ ಭರವಸೆ ನೀಡಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಹೇಳಿಕೆ ಹೊರಡಿಸಿರುವ ಬಿಸಿಸಿಐ, ಕೈಗಾರಿಕಾ ಸಮೂಹಗಳು, ಸ್ಮಾರ್ಟ್ ಹಳ್ಳಿಗಳು ಮತ್ತು ಅದರ ಸುತ್ತಲೂ ಸ್ಮಾರ್ಟ್ ಸಿಟಿಯನ್ನು ಹೊಂದುವ ಮೂಲಕ ಬೆಂಗಳೂರಿನ ಹೊರ ವರ್ತುಲ ರಸ್ತೆಯ ಅಭಿವೃದ್ಧಿ ಬಗ್ಗೆ ಕೇಂದ್ರ ಸಚಿವ ಗಡ್ಕರಿ ಮಾತನಾಡಿದ್ದಾರೆ ಎಂದು ಹೇಳಿದೆ.

ಕೈಗಾರಿಕಾ ಸಮೂಹಗಳ ಅಭಿವೃದ್ಧಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜೊತೆ ಕೈಗಾರಿಕೆಗಳು ಕೈಜೋಡಿಸಿದರೆ ಬೆಳವಣಿಗೆ ಸಾಧ್ಯವಾಗುತ್ತದೆ. ಗ್ರೀನ್ ಎಕ್ಸ್ ಪ್ರೆಸ್ ಹೆದ್ದಾರಿಯುದ್ದಕ್ಕೂ ಹಲವು ಕೈಗಾರಿಕಾ ಸಮೂಹಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಗಡ್ಕರಿ ಹೇಳಿದ್ದಾರೆ.

ದೇಶದ ಅಭಿವೃದ್ಧಿಯಲ್ಲಿ ಬೆಂಗಳೂರಿನ ಕೊಡುಗೆ ಸಾಕಷ್ಟಿದೆ ಎಂದು ಒತ್ತಿ ಹೇಳಿರುವ ಗಡ್ಕರಿ ಅವರು, ಬೆಂಗಳೂರು ದೇಶದ ಜ್ಞಾನ ನಗರಿಯಾಗಿದ್ದು, ಹಲವು ಐಟಿ-ಬಿಟಿ ಕಂಪೆನಿಗಳು ಸಾಕಷ್ಟು ಉತ್ತಮ ಕೆಲಸ ಮಾಡುತ್ತಿವೆ. ನಮ್ಮಲ್ಲಿ ಸಾಕಷ್ಟು ಪ್ರತಿಭಾವಂತ ಮಾನವ ಸಂಪನ್ಮೂಲವಿದೆ. ಅದ್ಭುತವನ್ನು ಸಾಧಿಸುವಂತಹ ಸಂಪನ್ಮೂಲವಿದೆ. ನಿಮ್ಮಂತ ಜನರು ಆತ್ಮನಿರ್ಭರ ಭಾರತಕ್ಕೆ ಕೊಡುಗೆ ನೀಡಬೇಕು ಎಂದು ಸಚಿವರು ಹೇಳಿದ್ದಾರೆ.

ಭಾರತದ ಮೂಲಭೂತ ಸೌಕರ್ಯಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸಲು 22 ಹಸಿರು ಎಕ್ಸ್ ಪ್ರೆಸ್ ವೇ ಪ್ರಾಜೆಕ್ಟ್ ನೊಂದಿಗೆ ಹಲವು ಯೋಜನೆಗಳನ್ನು ಸರ್ಕಾರ ಕೈಗೆತ್ತಿಕೊಂಡಿದೆ ಎಂದು ಬಿಸಿಸಿಐ ಹೇಳಿದೆ.

ಬೆಂಗಳೂರು ಮತ್ತು ಚೆನ್ನೈ ನಡುವೆ ಹೊಸ ಹೆದ್ದಾರಿ ಕಾಮಗಾರಿ ಈಗಾಗಲೇ ಆರಂಭವಾಗಿದ್ದು, ಬೆಂಗಳೂರು-ಮೈಸೂರು ರಸ್ತೆ ಕಾಮಗಾರಿ ನಡೆಯುತ್ತಿದೆ. ಮೈಸೂರು ಭಾಗದಲ್ಲಿ ಕೈಗಾರಿಕಾ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ಇದು ಮುಖ್ಯವಾಗುತ್ತದೆ. ವೇಗವಾಗಿ ಕಾಮಗಾರಿ ನಡೆಯುತ್ತಿದ್ದು 2022ರ ಸೆಪ್ಟೆಂಬರ್ ಗೆ ಮುಗಿಯಲಿದೆ ಎಂದು ತಿಳಿಸಿದ್ದಾರೆ.

ಮಂಗಳೂರು-ಬೆಂಗಳೂರು ಮಧ್ಯೆ ಶಿರಾಡಿ ಘಾಟ್ ಸುರಂಗ ಯೋಜನೆಗೆ ಸಂಬಂಧಪಟ್ಟ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಸಚಿವ ಗಡ್ಕರಿ ಹೇಳಿದ್ದಾರೆ. ದೇಶದ ಎಲ್ಲಾ ರಾಜ್ಯಗಳಲ್ಲಿ ತೆರಿಗೆ ವಿನಾಯ್ತಿಯಲ್ಲಿ ಏಕರೂಪ ನೀತಿಗಳನ್ನು ತರಬೇಕೆಂದು ಇದೇ ಸಂದರ್ಭದಲ್ಲಿ ವೊಲ್ವೊ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಕಮಲ್ ಬಾಲಿ ಮೋಟಾರು ವಾಹನಗಳ ಬಿಡಿಭಾಗಗಳ ನೀತಿಯನ್ನು ಜಾರಿಗೆ ತರುವಾಗ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com