ಉಡುಪಿ: ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ನಡೆಸಿದ ರಾಷ್ಟ್ರಮಟ್ಟದ ‘ಸಿಎಸ್ಐಆರ್ ಇನ್ನೊ ವೇಷನ್ ಅವಾರ್ಡ್ ಫಾರ್ ಸ್ಕೂಲ್ ಚಿಲ್ಡ್ರನ್- 2021’ ಸ್ಪರ್ಧೆಯಲ್ಲಿ ಅಲ್ಬಾಡಿ - ಆರ್ಡಿಯ ಚಾರಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆ ಇಬ್ಬರು ವಿದ್ಯಾರ್ಥಿನಿಯರಿಗೆ ರಾಷ್ಟ್ರಮಟ್ಟದ ಪ್ರಶಸ್ತಿ ಲಭಿಸಿದೆ.
ಅಲ್ಬಾಡಿ ಆರ್ಡಿಯ 10 ನೇ ತರಗತಿ ವಿದ್ಯಾರ್ಥಿನಿಯರಾದ ಅನುಷಾ ಹಾಗೂ ರಕ್ಷಿತಾ ನಾಯ್ಕ ಮಂಡಿಸಿದ ‘ಗ್ಯಾಸ್ ಸೇವಿಂಗ್ ಕಿಟ್’ (ಜಿಎಸ್ ಕೆ) ಅವಿಷ್ಕಾರದ ಸಾಧನ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿದೆ. ದೇಶದಲ್ಲಿ ಆಯ್ಕೆಯಾದ 14 ಶಾಲೆಗಳಲ್ಲಿ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆ ಅಲ್ಬಾಡಿ ಆರ್ಡಿ ಕೂಡ ಒಂದು.
ವಿಜೇತ ಶಾಲೆಗಳಲ್ಲಿ ದೇಶದಲ್ಲಿ ಸರ್ಕಾರಿ ಪ್ರೌಢಶಾಲೆ ಇದಾಗಿದೆ. ರಾಜ್ಯದಿಂದ ಆಯ್ಕೆ ಆಗಿರುವ ಏಕೈಕ ಶಾಲೆ ಹೆಗ್ಗಳಿಕೆ ಇದೆ. ದೆಹಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಹದಿನಾಲ್ಕು ಶಾಲೆಯ ವಿದ್ಯಾರ್ಥಿಗಳಿಗೆ ಈ ಪ್ರಶಸ್ತಿ ನೀಡಲಿದ್ದಾರೆ.
ಜಿಎಸ್ಕೆ ಉಪಕರಣವನ್ನು ಗ್ಯಾಸ್ ಸ್ಟೌವ್ಗೆ ಅಳವಡಿಸಿದರೆ ಒಲೆಯ ಮೇಲೆ ಅಡುಗೆ ಆಗುತ್ತಿರುವಾಗಲೆ ಕುಟುಂಬಕ್ಕೆ ಬೇಕಾಗುವಷ್ಟು ಬಿಸಿ ನೀರು ಕಾಯಿಸಿಕೊಳ್ಳಬಹುದು. ದೇಶದಾದ್ಯಂತ ಎಲ್ಲ ಮನೆ, ಹೋಟೆಲ್ಗಳಲ್ಲಿ ಬಳಸಿದರೆ ದಿನಕ್ಕೆ ಲಕ್ಷಗಟ್ಟಲೆ ಟನ್ ಎಲ್ಪಿಜಿ ಉಳಿತಾಯವಾಗುತ್ತದೆ.
Advertisement