ಎನ್ ಸಿಬಿ ತಂಡದ ಭರ್ಜರಿ ಭೇಟೆ: ಮೂರು ಕಡೆ ದಾಳಿ; 3,400 ಕೆಜಿ ಗಾಂಜಾ ವಶ

ಹೈದರಾಬಾದ್ ಮೂಲಕ ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಗೆ ಲಾರಿಯಲ್ಲಿ ಕೋಟ್ಯಂತರ ರೂ. ಮೌಲ್ಯದ ಹೈ ಗ್ರೇಡ್ ಗಾಂಜಾ ಸಾಗಿಸುತ್ತಿದ್ದ ಮೂವರು ಅಂತಾರಾಜ್ಯ ಖದೀಮರನ್ನು ಮಾದಕವಸ್ತು ನಿಯಂತ್ರಣ ದಳ (ಎನ್​ಸಿಬಿ) ಬೆಂಗಳೂರು ವಲಯದ ಅಧಿಕಾರಿಗಳು ಬಂಧಿಸಿದ್ದಾರೆ
ಎನ್ ಸಿಬಿಯಿಂದ ಮೂವರ ಬಂಧನ
ಎನ್ ಸಿಬಿಯಿಂದ ಮೂವರ ಬಂಧನ

ಬೆಂಗಳೂರು: ಹೈದರಾಬಾದ್ ಮೂಲಕ ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಗೆ ಲಾರಿಯಲ್ಲಿ ಕೋಟ್ಯಂತರ ರೂ. ಮೌಲ್ಯದ ಹೈ ಗ್ರೇಡ್ ಗಾಂಜಾ ಸಾಗಿಸುತ್ತಿದ್ದ ಮೂವರು ಅಂತಾರಾಜ್ಯ ಖದೀಮರನ್ನು ಮಾದಕವಸ್ತು ನಿಯಂತ್ರಣ ದಳ (ಎನ್​ಸಿಬಿ) ಬೆಂಗಳೂರು ವಲಯದ ಅಧಿಕಾರಿಗಳು ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ಹೈದರಾಬಾದ್ ಹೊರವರ್ತುಲ ರಸ್ತೆಯಲ್ಲಿ ಲಾರಿಯಲ್ಲಿ ಗಾಂಜಾ ಸಾಗಿಸುವಾಗ ಮಹಾರಾಷ್ಟ್ರದ ಲಾತೂರ್ ಮೂಲದ ಆರೋಪಿಗಳಾದ ಶಿಂಧೆ, ಕಾಂಬ್ಲೇ ಹಾಗೂ ಜೋಗ್ದಂದ್ ಎಂಬುವರನ್ನು ಬಂಧಿಸಿದ್ದಾರೆ.

ಬಂಧಿತರಿಂದ ಸುಮಾರು 21 ಕೋಟಿ ರೂ. ಮೌಲ್ಯದ 3,400 ಕೆಜಿ ಹೈಟೆಕ್ ಗಾಂಜಾ ಹಾಗೂ ಲಾರಿ ವಶಕ್ಕೆ ಪಡೆದುಕೊಂಡಿದ್ದು,21 ಕೋಟಿ ಮೌಲ್ಯದ 3,400 ಕೆಜಿ ಹೈಟೆಕ್ ಗಾಂಜಾ ಜಪ್ತಿ ಮಾಡಿರುವುದು ಎನ್​ಸಿಬಿ ಇತಿಹಾಸದಲ್ಲಿ ದೊಡ್ಡ ಕಾರ್ಯಾಚರಣೆಯಾಗಿದೆ.

ಕಳೆದ ಜೂನ್​ನಲ್ಲಿ ಎನ್​​ಸಿಬಿ ಕಾರ್ಯಾಚರಣೆ ನಡೆಸಿ 15 ಕೋಟಿ ರೂ ಮೌಲ್ಯದ 2 ಸಾವಿರ ಕೆ.ಜಿ.ತೂಕದ ಗಾಂಜಾ ಜಪ್ತಿ ಮಾಡಿಕೊಂಡು ಮಹಾರಾಷ್ಟ್ರ ಮೂಲದ ನಾಲ್ವರನ್ನು ಬಂಧಿಸಿತ್ತು‌‌. ಇದೀಗ 21 ಕೋಟಿ ರೂ ಮೌಲ್ಯದ 3,400 ಕೆ.ಜಿ ಮೌಲ್ಯದ ಗಾಂಜಾ ಜಪ್ತಿ ಮಾಡಿರುವುದು ಎನ್​ಸಿಬಿ ಇತಿಹಾಸದಲ್ಲಿ ಅತಿ ದೊಡ್ಡ ಮಟ್ಟದ ಕಾರ್ಯಾಚರಣೆ ಎಂದು ಅಧಿಕಾರಿಗಳು ತಿಳಿಸಿದರು. 

ತೆಲಂಗಾಣ, ಆಂಧ್ರಪ್ರದೇಶಗಳಲ್ಲಿ ಗಾಂಜಾ ಮಾರಾಟ ಚಟುವಟಿಕೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾಗಿದ್ದ ಅಧಿಕಾರಿಗಳು ಈ ಹಿಂದೆ ಡ್ರಗ್ಸ್ ಕೇಸ್​ನಲ್ಲಿ ಬಂಧಿತ ಆರೋಪಿಗಳು ನೀಡಿದ ಸುಳಿವಿನ‌ ಮೇರೆಗೆ ಮಹಾರಾಷ್ಟ್ರಕ್ಕೆ ಹೋಗುತ್ತಿದ್ದ ಲಾರಿ ತಡೆದು ಪರಿಶೀಲಿಸಿದಾಗ ಮಾದಕವಸ್ತು ಸಾಗಾಟ ಅವ್ಯವಹಾರ ಬಯಲಿಗೆ ಬಂದಿದೆ. ಕೋಟ್ಯಂತರ ಮೌಲ್ಯದ ಗಾಂಜಾ ಯಾರಿಗೂ ಅನುಮಾನ ಬಾರದಿರಲು ದಂಧೆಕೋರರು ಗಿಡದ ಬುಡದಲ್ಲಿನ ಮಣ್ಣಿನ ಜೊತೆ ಪ್ಲಾಸ್ಟಿಕ್‌ನಿಂದ ಗಾಂಜಾ ಸುತ್ತಿ ಮಣ್ಣು ಮುಚ್ಚಿದ್ದರು.

141 ಗೋಣಿಚೀಲದಲ್ಲಿ ಗಾಂಜಾ ಪ್ಯಾಕೆಟ್‌ಗಳನ್ನು ಇಟ್ಟು ಅದರೊಳಗೆ ಮಣ್ಣು ತುಂಬಿದ್ದರು. ಹೀಗೆ, ವಶಪಡಿಸಿಕೊಂಡಿರುವ ಲಾರಿಯು ಮಹಾರಾಷ್ಟ್ರದಲ್ಲಿ ನೋಂದಣಿಯಾಗಿದೆ. ಪುಣೆ, ಥಾಣೆ, ಮುಂಬೈ ಸೇರಿದಂತೆ ವಿವಿಧ ಕಡೆಗಳಲ್ಲಿ ಆರೋಪಿಗಳು ಗಾಂಜಾ ಸಾಗಾಟ ಮಾಡುತ್ತಿದ್ದರು ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

2020 ರಲ್ಲಿ ಎನ್ ಸಿಬಿಯು 1971 ಕೆ.ಜಿ. ಗಾಂಜಾ ಜಪ್ತಿ ಮಾಡಿಕೊಂಡು 8 ಮಂದಿ‌ ಆರೋಪಿಗಳನ್ನು ಬಂಧಿಸಿದರೆ 2021 ಆಗಸ್ಟ್ ಅಂತ್ಯಕ್ಕೆ 7500 ಕೆ.ಜಿ.ಗಾಂಜಾ ವಶಕ್ಕೆ‌‌ ಪಡೆದುಕೊಂಡು 25 ಮಂದಿ ಆರೋಪಿಗಳನ್ನು ಸೆರೆಹಿಡಿಯಲಾಗಿದೆ ಎಂದು ಎನ್​ಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಒಡಿಶಾ ರಾಜ್ಯಗಳಲ್ಲಿ ದಂಧೆಕೋರರು ಅಕ್ರಮವಾಗಿ ಗಾಂಜಾ ಬೆಳೆದು ಕರ್ನಾಟಕ, ಕೇರಳ ಹಾಗೂ ತಮಿಳುನಾಡು ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಅವ್ಯಾಹತವಾಗಿ ಗಾಂಜಾ ಮಾರಾಟ ದಂಧೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಕಂಡು ಬಂದಿದೆ.

ದಂಧೆಕೋರರು ಮಹಾರಾಷ್ಟ್ರ ಮಾತ್ರವಲ್ಲದೆ‌, ಓಡಿಶಾ, ಪಶ್ಚಿಮ ಬಂಗಾಳ, ಗುಜರಾತ್, ರಾಜಸ್ತಾನ ಸೇರಿದಂತೆ ಶ್ರೀಲಂಕಾಕ್ಕೂ ಗಾಂಜಾ ಸರಬರಾಜು ಮಾರಾಟ ಮಾಡುತ್ತಿದ್ದರು. ವಿವಿಧ ರಾಜ್ಯಗಳಲ್ಲಿ ನಡೆಯುವ ಪಾರ್ಟಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಾರಾಟ ಮಾಡುತ್ತಿರುವುದು ಗೊತ್ತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com