ಬೆಂಗಳೂರು: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ನಿರ್ದಿಷ್ಟಪಡಿಸಿರುವಂತೆ ಮಹತ್ವಕಾಂಕ್ಷೆಯ 117.3 ಕಿ.ಮೀ ಉದ್ದದ 10 ಪಥದ ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇ ಅಕ್ಟೋಬರ್ 2022ರ ವೇಳೆಗೆ ತನ್ನ ಗಡುವನ್ನು ಪೂರ್ಣಗೊಳಿಸುವ ಹಾದಿಯಲ್ಲಿದೆ. ಬೆಂಗಳೂರು- ಮೈಸೂರಿಗೆ ಪ್ರಸ್ತುತ ಮೂರು ಗಂಟೆ ಸಮಯ ಬೇಕಾಗುತ್ತದೆ. ಆದರೆ, ಈ ಎಕ್ಸ್ ಪ್ರೆಸ್ ವೇ ಪೂರ್ಣಗೊಂಡರೆ ಉಭಯ ನಗರಗಳ ನಡುವಣ ಪ್ರಯಾಣದ ಅವಧಿ 90 ನಿಮಿಷಗಳಾಗಲಿದೆ.
ಬೆಂಗಳೂರಿನಿಂದ ನಿಢಘಟ್ಟದವರೆಗಿನ ಮೊದಲ ಹಂತ ಮುಂದಿನ ವರ್ಷದ ಮೇ ಒಳಗ ಪೂರ್ಣಗೊಳ್ಳಲಿದೆ. ನಿಢಘಟ್ಟದಿಂದ ಮೈಸೂರು ವರೆಗಿನ ಎರಡನೇ ಹಂತ ಸೆಪ್ಟೆಂಬರ್ ನಲ್ಲಿ ಪೂರ್ಣಗೊಳ್ಳಲಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ. 8,172 ಕೋಟಿ ರೂ. ಮೊತ್ತದ ಯೋಜನೆಯಡಿ ಪ್ರಸ್ತುತದಲ್ಲಿನ ನಾಲ್ಕು ಪಥದ ಹೆದ್ದಾರಿಯನ್ನು ನಾಲ್ಕು ಸರ್ವೀಸ್ ರಸ್ತೆಗಳೊಂದಿಗೆ ಆರು ಪಥವನ್ನಾಗಿ ಮಾಡಲಾಗುತ್ತಿದೆ. ಸರ್ವೀಸ್ ರಸ್ತೆಯಲ್ಲಿ ಆಟೋಗಳು, ದ್ವಿಚಕ್ರ ವಾಹನಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ.
56.2 ಕಿಲೋ ಮೀಟರ್ ವರೆಗೆನ ಮೊದಲ ಹಂತದ ಶೇ. 83 ರಷ್ಟು ಕೆಲಸಗಳು ಪೂರ್ಣಗೊಂಡಿದ್ದರೆ, 61. 1 ಕಿ. ಮೀಟರ್ ವರೆಗಿನ ಎರಡನೇ ಹಂತದ ಶೇ. 78 ರಷ್ಟು ಕೆಲಸಗಳು ಮುಗಿದಿವೆ. ಆದಾಗ್ಯೂ, ಎರಡು ಕೋವಿಡ್ ಅಲೆ, ಮಾನವ ಸಂಪನ್ಮೂಲ ಮತ್ತು ಸಲಕರಣೆಗಳ ಕೊರತೆಯಿಂದ ಗಡುವಿನ ಅವಧಿಯಲ್ಲಿ ಯೋಜನೆ ಪೂರ್ಣಗೊಳಿಸಲು ಆಗಿಲ್ಲ ಎಂದು ಎನ್ ಹೆಚ್ ಎಎಲ್ ಉನ್ನತ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.
ಬೆಂಗಳೂರು- ನಿಢಘಟ್ಟ ಭಾಗದಲ್ಲಿ ಆರ್ ಆರ್ ಮೆಡಿಕಲ್ ಕಾಲೇಜ್ ನಿಂದ ಕ್ರೈಸ್ಟ್ ವಿವಿವರೆಗೆ ನಾಲ್ಕು ಸೇತುವೆಯೊಂದಿಗೆ ಎಲಿವೆಟೇಡ್ ಹೆದ್ದಾರಿ ನಿರ್ಮಾಣ ಮಾಡಲಾಗುತ್ತಿದ್ದು, ಶೇ. 85 ರಷ್ಟು ಎಲಿವೆಟೇಡ್ ಕಾರ್ಯ ಮುಗಿದಿದೆ. ಮೂರು ಸೇತುವೆಗಳು ಪೂರ್ಣಗೊಂಡಿದ್ದು, ಇನ್ನೂ ಒಂದು ಸೇತುವೆ ಕಾರ್ಯ ಮುಗಿಯಬೇಕಾಗಿದೆ ಎಂದು ಅವರು ಹೇಳಿದರು. ನಿಢಘಟ್ಟದಿಂದ ಮೈಸೂರು ವರೆಗಿನ ಮಾರ್ಗದಲ್ಲಿ ಮದ್ದೂರು ಬಳಿ 3.38 ಕಿಲೋ ಎತ್ತರಿಸಿದ ಹೆದ್ದಾರಿ ಬರುತ್ತಿದ್ದು, ಅಡಿಪಾಯ ಮತ್ತು ಎರಕದ ಕೆಲಸ ಪೂರ್ಣಗೊಂಡಿದೆ. ಒಟ್ಟಾರೆ ಕೆಲಸದಲ್ಲಿ 78% ಪೂರ್ಣಗೊಂಡಿದೆ ಎಂದು ಹೇಳಬಹುದು ಎಂದು ಅವರು ವಿವರಿಸಿದರು.
Advertisement