ಓಮಿಕ್ರಾನ್ ಆತಂಕ: ಮನೆಯಿಂದ ನೂರಾರು ಮೈಲು ದೂರದಲ್ಲಿ ಪರೀಕ್ಷೆ ಬರೆಯಬೇಕಾದ ಸಂದಿಗ್ಧತೆಯಲ್ಲಿ ಕೆಪಿಎಸ್ಸಿ ಆಕಾಂಕ್ಷಿಗಳು!

ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಮತ್ತು ಕಿರಿಯ ಎಂಜಿನಿಯರ್ ಹುದ್ದೆಗಳಿಗೆ ಸುಮಾರು 60 ಸಾವಿರ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಇದೇ ತಿಂಗಳ 13 ಮತ್ತು 14ರಂದು ಎರಡು ದಿನ ನಡೆಯುವ ಕೆಪಿಎಸ್ ಸಿ ಪರೀಕ್ಷೆ ಬರೆಯಲು ತಮ್ಮ ಊರಿಂದ 500-600 ಕಿಲೋ ಮೀಟರ್ ದೂರದ ಊರಿಗೆ ಹೋಗಿ ಪರೀಕ್ಷೆ ಬರೆಯಬೇಕು. ಬಹುತೇಕ ಅಭ್ಯರ್ಥಿಗಳಿಗೆ ತಮ್ಮ ಊರಿಂದ ಪರವೂರಿನಲ್ಲಿ ಪರೀಕ್ಷ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಕೋವಿಡ್-19 ಸೋಂಕು ಹೆಚ್ಚಾಗುತ್ತಿದೆ. ಈ ಮಧ್ಯೆ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಮತ್ತು ಕಿರಿಯ ಎಂಜಿನಿಯರ್ ಹುದ್ದೆಗಳಿಗೆ ಸುಮಾರು 60 ಸಾವಿರ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಇದೇ ತಿಂಗಳ 13 ಮತ್ತು 14ರಂದು ಎರಡು ದಿನ ನಡೆಯುವ ಕೆಪಿಎಸ್ ಸಿ ಪರೀಕ್ಷೆ ಬರೆಯಲು ತಮ್ಮ ಊರಿಂದ 500-600 ಕಿಲೋ ಮೀಟರ್ ದೂರದ ಊರಿಗೆ ಹೋಗಿ ಪರೀಕ್ಷೆ ಬರೆಯಬೇಕು. ಬಹುತೇಕ ಅಭ್ಯರ್ಥಿಗಳಿಗೆ ತಮ್ಮ ಊರಿಂದ ಪರವೂರಿನಲ್ಲಿ ಪರೀಕ್ಷಾ ಕೇಂದ್ರಗಳು ಸಿಕ್ಕಿವೆ.

ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ತಡೆಗಟ್ಟಲು ಈ ರೀತಿ ಮಾಡಲಾಗಿದೆ ಎಂದು ಕೆಪಿಎಸ್ ಸಿ ಅಧಿಕಾರಿಗಳು ಹೇಳುತ್ತಾರೆ. ಆದರೆ ಈ ಕೊರೋನಾ ಹೆಚ್ಚಾಗಿರುವ ಸಮಯದಲ್ಲಿ ಈ ರೀತಿ ದೀರ್ಘ ಪ್ರಯಾಣ ಮಾಡುವುದು ಎಷ್ಟು ಸರಿ ಎಂದು ಅಭ್ಯರ್ಥಿಗಳು ಹೇಳುತ್ತಾರೆ.ಅಲ್ಲದೆ ಬಹಳ ಹೊತ್ತು ಪ್ರಯಾಣ ಮಾಡಿ ಬಂದು ಎರಡು ದಿನ ಉಳಿದುಕೊಂಡು ಪರೀಕ್ಷೆ ಬರೆಯಬೇಕು.ಅಭ್ಯರ್ಥಿಗಳಿಗೆ ತಮ್ಮ ಪರೀಕ್ಷಾ ಕೇಂದ್ರಗಳ ಬಗ್ಗೆ ಮಾಹಿತಿ ಸಿಕ್ಕಿದ್ದು ಕಳೆದ ಸೋಮವಾರವಷ್ಟೆ.

ಕಲಬುರಗಿಯ ಶ್ರೀಧರ್(ಹೆಸರು ಬದಲಿಸಲಾಗಿದೆ), ದೂರದ ವಿಜಯನಗರದಿಂದ ಬೆಂಗಳೂರಿಗೆ ಪರೀಕ್ಷೆ ಬರೆಯಲು ಬರಬೇಕು. 2019ರಲ್ಲಿ ಪರೀಕ್ಷೆ ಬರೆದಿದ್ದೆ, ಆದರೆ ಕಾನೂನು ಕಾರಣದಿಂದ ಅದರ ಫಲಿತಾಂಶವನ್ನು ರದ್ದುಪಡಿಸಿದ್ದಾರೆ. ಸೋಮವಾರ ರಾತ್ರಿ ನನ್ನ ಹಾಲ್ ಟಿಕೆಟ್ ನ್ನು ಡೌನ್ ಲೋಡ್ ಮಾಡಿಕೊಂಡಿದ್ದು ಅದರಲ್ಲಿ ನನ್ನ ಪರೀಕ್ಷಾ ಕೇಂದ್ರ ಬೆಂಗಳೂರು ಎಂದು ಇದೆ. ಕಳೆದ ಮೂರು ವರ್ಷಗಳಿಂದ ನಾನು ಈ ಹುದ್ದೆಗೆ ಪ್ರಯತ್ನಿಸುತ್ತಿರುವುದರಿಂದ ಈ ಬಾರಿ ಪರೀಕ್ಷೆಯನ್ನು ಕಳೆದುಕೊಳ್ಳಲು ಸಾಧ್ಯವೇ ಇಲ್ಲ. ಕಲಬುರಗಿಯಿಂದ ಬೆಂಗಳೂರಿಗೆ ಪ್ರಯಾಣಿಸಿ ನನ್ನ ಖರ್ಚಿನಲ್ಲಿಯೇ ಹೊಟೇಲ್ ಅಥವಾ ರೂಂ ಮಾಡಿ ಉಳಿದುಕೊಳ್ಳಬೇಕು ಎನ್ನುತ್ತಾರೆ.

ಹಾಸನದ ಪ್ರಿಯಾ(ಹೆಸರು ಬದಲಿಸಲಾಗಿದೆ)ಗೆ ಬೆಂಗಳೂರಿನ ಯಲಹಂಕದಲ್ಲಿ ಪರೀಕ್ಷಾ ಕೇಂದ್ರವಿದೆ. 5 ಗಂಟೆ ಪ್ರಯಾಣಿಸಿ ಬೆಂಗಳೂರಿಗೆ ಬರಬೇಕು.

ಹಿಂದಿನ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ 2019ರಲ್ಲಿ ಕೆಪಿಎಸ್ ಸಿ ಪರೀಕ್ಷೆ ನಡೆದಿತ್ತು. ಕಳೆದ ಮಾರ್ಚ್ ತಿಂಗಳಲ್ಲಿ 870 ಎಂಜಿನಿಯರಿಂಗ್ ಹುದ್ದೆಗಳು, 570 ಸಹಾಯಕ ಎಂಜಿನಿಯರ್ ಮತ್ತು 300 ಜ್ಯೂನಿಯರ್ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಕರೆದು ಜೂನ್ 2019ರಲ್ಲಿ ಪರೀಕ್ಷೆ ನಡೆಸಲಾಯಿತು. ನಂತರ ಮರು ತಿಂಗಳು ಜುಲೈಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು.

ಹಿಂದಿನ ಮೈತ್ರಿ ಸರ್ಕಾರ ತೆಗೆದುಕೊಂಡ ಕೆಲವು ನಿರ್ಧಾರಗಳನ್ನು ಬಿಜೆಪಿ ಸರ್ಕಾರ ಹಿಂಪಡೆಯಿತು. ಅದರಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಎಂಜಿನಿಯರ್ ಗಳ ನೇಮಕಾತಿ ಕೂಡ ಒಂದು. ಒಂದು ವರ್ಷ ಕಳೆದರೂ ಫಲಿತಾಂಶ ಪ್ರಕಟಿಸದಿದ್ದಾಗ ಕೆಲವು ಆಕಾಂಕ್ಷಿಗಳು ಕೋರ್ಟ್ ಮೊರೆ ಹೋದರು, ಆಗ ಸರ್ಕಾರ ಇಡೀ ನೇಮಕಾತಿ ಪ್ರಕ್ರಿಯೆಯನ್ನು ರದ್ದುಪಡಿಸಿ ಹೊಸ ಅರ್ಜಿಯನ್ನು ಕರೆಯಿತು. 

ಕಳೆದ ಆಗಸ್ಟ್ ನಲ್ಲಿ ಕರೆದ ಇತ್ತೀಚಿನ ಆದೇಶದಲ್ಲಿ, ಸರ್ಕಾರ 660 ಸಹಾಯಕ ಎಂಜಿನಿಯರ್ ಮತ್ತು 330 ಜ್ಯೂನಿಯರ್ ಎಂಜಿನಿಯರ್ ಹುದ್ದೆಗಳಿಗೆ ಭರ್ತಿ ಮಾಡಲು ಅರ್ಜಿಗಳನ್ನು ಕರೆದಿದ್ದು 58 ಸಾವಿರಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ.

ಗುತ್ತಿಗೆ ನೌಕರನಾಗಿ ತುಮಕೂರಿನಲ್ಲಿ ಕೆಲಸ ಮಾಡುತ್ತಿರುವ ಸುರೇಶ್(ಹೆಸರು ಬದಲಿಸಲಾಗಿದೆ)ಗೆ ಕಲಬುರಗಿಯಲ್ಲಿ ಪರೀಕ್ಷೆ ಬರೆಯಲು ಕೇಂದ್ರ ನೀಡಲಾಗಿದೆ. ನಾಲ್ಕು ದಿನ ಕೆಲಸಕ್ಕೆ ರಜೆ ಹಾಕಿ ಎರಡು ದಿನ ಹೋಗಲು ಮತ್ತು ಎರಡು ದಿನ ಪರೀಕ್ಷೆ ಬರೆಯಲು ಸಮಯ ಬೇಕು. ಪರೀಕ್ಷೆ ಬರೆದು ಬಂದ ನಂತರ ಕೋವಿಡ್ ಟೆಸ್ಟ್ ರಿಪೋರ್ಟ್ ತರಬೇಕು ಎಂದು ನಮ್ಮ ಆಫೀಸ್ ನಲ್ಲಿ ಹೇಳುತ್ತಾರೆ ಎಂದು ತಮ್ಮ ಕಷ್ಟ ಹೇಳಿಕೊಂಡರು.

ಇದು ಕೆಪಿಎಸ್ ಸಿ ನಡೆಸುತ್ತಿರುವ ಪರೀಕ್ಷೆಯಾದ್ದರಿಂದ ಪರೀಕ್ಷಾ ಪ್ರಕ್ರಿಯೆ ತಮ್ಮ ಕೆಳಗೆ ಬರುವುದಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ ಸಿ ಪಾಟೀಲ್ ಹೇಳುತ್ತಾರೆ. ಸ್ಥಳೀಯರು ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಸಹಾಯ ಮಾಡುವುದರಿಂದ ನಾವು ಈ ಪರೀಕ್ಷಾ ಕೇಂದ್ರಗಳನ್ನು ಬದಲಿಸುವ ವಿಧಾನ ತಂದಿದ್ದೇವೆ ಎಂದು ಕೆಪಿಎಸ್ ಸಿ ಅಧಿಕಾರಿಯೊಬ್ಬರು ಹೇಳುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com