ಯಡಿಯೂರಪ್ಪ ರಾಜೀನಾಮೆ?: ಜುಲೈ 25 ರಂದು ಅರಮನೆ ಮೈದಾನದಲ್ಲಿ ವಿವಿಧ ಮಠಾಧೀಶರ ಸಮಾವೇಶ

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ರಾಜೀನಾಮೆ ಹಿನ್ನಲೆಯಲ್ಲಿ ಜುಲೈ 25 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಾವೇಶ ನಡೆಸಲು ವಿವಿಧ ಮಠಾಧೀಶರು ತೀರ್ಮಾನಿಸಿದ್ದಾರೆ.
ಯಡಿಯೂರಪ್ಪ
ಯಡಿಯೂರಪ್ಪ

ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ರಾಜೀನಾಮೆ ಹಿನ್ನಲೆಯಲ್ಲಿ ಜುಲೈ 25 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಾವೇಶ ನಡೆಸಲು ವಿವಿಧ ಮಠಾಧೀಶರು ತೀರ್ಮಾನಿಸಿದ್ದಾರೆ.

ಸಮಾವೇಶ ನಡೆಸುವ ಹಿನ್ನಲೆಯಲ್ಲಿ ಶುಕ್ರವಾರ ಬೆಂಗಳೂರಿನಲ್ಲಿ ವಿವಿಧ ಮಠಾಧೀಶರು ಸುದ್ದಿಗೋಷ್ಠಿ ನಡೆಸಿದರು.

ತಿಪಟೂರಿನ ರುದ್ರಮುನಿ‌ ಶ್ರೀಗಳು ಮಾತನಾಡಿ, ಮಠಗಳು ಸಮಾಜಕ್ಕೆ ತಮ್ಮದೇ ಕೊಡುಗೆ ಕೊಟ್ಟಿವೆ. ಮಠಾಧಿಪತಿಗಳ ಸಾಲಿನಲ್ಲಿ ರಾಜ್ಯಕ್ಕೆ ವಿಶಿಷ್ಟ ಸ್ಥಾನಮಾನವಿದೆ. ಸಮಾಜದಲ್ಲಿ‌ ಗೊಂದಲವಾದಾಗ ಜನ ಮಠಕ್ಕೆ ಭೇಟಿ ನೀಡಿ, ಮಠಾಧೀಶರ ಸಲಹೆಗಳನ್ನು ಕೇಳುತ್ತಾರೆ. ಸಮಾಜದ ಅಂಕುಡೊಂಕು ಸರಿಮಾಡಬೇಕು. ಹೀಗಾಗಿ ಜು.25 ರಂದು ಮಠಾಧೀಶರೆಲ್ಲ ಅರಮನೆ ಮೈದಾನದಲ್ಲಿ ಸಮಾವೇಶ ನಡೆಸುತ್ತಿದ್ದು, ಎಲ್ಲಾ ಮಠಾಧೀಶರು ಅದರಲ್ಲಿ ಭಾಗವಹಿಸುತ್ತಾರೆ ಎಂದರು.

ಬಾಳೆಹೊಸೂರಿನ ದಿಂಗಾಲೇಶ್ವರ ಶ್ರೀ ಮಾತನಾಡಿ, ವರ್ತಮಾನದ ವಿಚಾರಗಳ ಚರ್ಚೆಗೆ ಇದೇ 25 ರಂದು ರಾಜ್ಯದ ಹಿತ ರಕ್ಷಣೆಗಾಗಿ ಮಠಾಧಿಪತಿಗಳ ಸಮಾವೇಶ ಕರೆದಿದ್ದೇವೆ. ಅರಮನೆ ಮೈದಾನದಲ್ಲಿ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ರಾಜ್ಯದ ಅಗ್ರಗಣ್ಯ ಮಠಾಧಿಪತಿಗಳು ಭಾಗವಹಿಸಲಿದ್ದಾರೆ. ಮಠಾಧಿಪತಿಗಳ ಕರ್ತವ್ಯ ಕುರಿತು ಚಿಂತನೆ ಮಾಡಲಿದೆ. ಇದು ಸಾರ್ವಜನಿಕ ಸಭೆಯಲ್ಲ, ಇದು ಮಠಾಧಿಪತಿಗಳ ಸಭೆ. ಇದು ಒಂದು ಸಮಾಜದ ಸಭೆಯಲ್ಲ. ಇದು ಎಲ್ಲಾ ಸಮಾಜಗಳ ಮಠಾಧೀಶರ ಸಭೆ. ಯಾವುದೇ ವ್ಯಕ್ತಿ ಕುರಿತು ಸಮಾವೇಶ ಮಾಡ್ತಿಲ್ಲ. ಹಲವು ಧ್ಯೇಯೋದ್ದೇಶಗಳ ಕುರಿತು ಚರ್ಚಿಸಲಿದ್ದೇವೆ. ಹೀಗಾಗಿ ಪೂರ್ವಭಾವಿಯಾಗಿ ರಾಜ್ಯದ ಮಠಾಧಿಪತಿಗಳು ನಾಳೆ ಬೆಂಗಳೂರಿಗೆ ಆಗಮಿಸಬೇಕು. ಎಲ್ಲರಿಗೂ ವಸತಿ, ಊಟದ ವ್ಯವಸ್ಥೆ ಮಾಡಲಾಗುತ್ತದೆಂದು ಮಠಾಧೀಶರಿಗೆ ದಿಂಗಾಲೇಶ್ವರ ಶ್ರೀಗಳು ಕರೆ ನೀಡಿದರು.

ಸಮಗ್ರ ಚಿಂತನೆಯನ್ನಿಟ್ಟುಕೊಂಡು ಚರ್ಚೆ ಮಾಡುತ್ತೇವೆ. ರಾಜಕೀಯ ಚಿಂತನೆಯೂ ಇರಲಿದೆ ಎಂದರು.

ಕೊರೋನಾ ಸಂದರ್ಭದಲ್ಲಿ ಮಠಗಳು ಮುಂದೆ ಬರಲಿಲ್ಲ ಎಂಬ ವಿಚಾರವಾಗಿ ಮಾತನಾಡಿ, ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಠಗಳು ಮಾಡಿವೆ. ಮಠಾಧೀಶರು ಮಾಡಿಲ್ಲ ಎನ್ನುವುದು ಸರಿಯಲ್ಲ. ರಾಜಕಾರಣಕ್ಕೆ ಮಠಾಧೀಶರ ಎಂಟ್ರಿ‌ ವಿಚಾರವಾಗಿ ಮಠಗಳು‌ ಸಮಾಜ ಮುಖಿಯಾಗಿ ‌ಕೆಲಸ ಮಾಡಬೇಕಿದೆ. ಇದು ಎಲ್ಲರ ಹಿತವಾಗಿದೆ. ಸಮಾಜದ ಹಿತಕ್ಕಾಗಿ ರಾಜಕಾರಣಿಗಳ ಬಳಿ ಬರಬೇಕು. ನಾವು ಯಾವುದೇ ಹೊಸಸಂಪ್ರದಾಯ ಮಾಡಿಕೊಂಡಿಲ್ಲ. ಶಿಕ್ಷಣ ಸಂಸ್ಥೆಗಳನ್ನು ಮಠಗಳು ಕಟ್ಟಿವೆ. ಶಿಕ್ಷಣದ ಕೆಲಸಗಳನ್ನ ಮಾಡಿಕೊಳ್ಳಬೇಕಾದರೆ ಬರಬೇಕಾಗುತ್ತದೆ. ಯಾವುದೇ ಪಕ್ಷದ ಪರ ಮಠಗಳು ನಿಂತಿಲ್ಲ. ಅನ್ಯಾಯವಾದಾಗ ಮಠಾಧೀಶರು ಮಧ್ಯಪ್ರವೇಶ ಮಾಡ್ತಾರೆ. ವ್ಯಕ್ತಿಗೆ ಅನ್ಯಾಯವಾದಾಗ ಕೇಳುವುದರಲ್ಲಿ ತಪ್ಪಿಲ್ಲ. ಎಲ್ಲಿ ಅನ್ಯಾಯ ನಡೆಯುತ್ತದೆ ಅಲ್ಲಿ ‌ಮಾರ್ಗದರ್ಶನ ಮಾಡಬೇಕಾಗುತ್ತದೆಂದು ದಿಂಗಾಲೇಶ್ವರ್ ಶ್ರೀಗಳು ಹೇಳಿದರು.

ಮಠಾಧೀಶರಿಗೆ ಸಿಎಂ ನಿವಾಸದಲ್ಲಿ ಕವರ್ ಕೊಟ್ಟ ವಿಚಾರವಾಗಿ ಮಾತನಾಡಿದ ಅವರು, ಸಚಿವರು ಕಾಗದ ತೋರಿಸಿದ್ದಕ್ಕೆ ಅಷ್ಟು ಸುದ್ದಿಯಾಯಿತು.ನಂತರ ಅದರಲ್ಲಿರುವುದು ಗೊತ್ತಾದಾಗ ಸುಮ್ಮನಾದರು. ಹಾಗೆ ಮಠಾಧೀಶರಿಗೂ ಪತ್ರ ಕೊಟ್ಟಿದ್ದಾರೆ. ಇದನ್ನೇ ಬೇರೆ ರೀತಿಯಲ್ಲಿ‌ ತೋರಿಸಿದ್ದು ವಿಕೃತಿ ತೋರಿಸುತ್ತದೆ. ಅದನ್ನು ತೋರಿಸುವವರ ಮನಸ್ಸಿನ ವಿಕೃತಿ ತೋರಿಸುತ್ತದೆ. ಮಠಾಧೀಶರು ಹೋದಾಗ ಹಣ್ಣುಹಂಪಲು ಕೊಡುತ್ತಾರೆ ಮನೆಗಳಿಗೆ ಬಂದಾಗ ಭಕ್ತರು ನೀವೇ ಕೊಡುತ್ತೀರ. ಅದನ್ನೇ ಬೇರೆ ರೀತಿ ತೋರಿಸಿದರೆ ಹೇಗೆ ಮಾಡುವುದು. ಅವರು ಕೊಟ್ಟ ಕವರ್ ನಲ್ಲಿ ಏನೂ ಇರಲಿಲ್ಲ. ಕಾಣಿಕೆ ಕೊಡುವ ಸಂಸ್ಕೃತಿ ಭಕ್ತರಲ್ಲಿದೆ. ಅದಕ್ಕೆ ಬೇರೆ ಅರ್ಥ ಮಾಡಿಕೊಳ್ಳುವುದು ಸರಿಯಲ್ಲ ಎಂದು ಬಾಳೆ ಹೊಸೂರಿನ ದಿಂಗಾಲೇಶ್ವರ ಶ್ರೀಗಳು ಸ್ಪಷ್ಟನೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com