ಬೆಂಗಳೂರು: ಕಳೆದ ವಾರ ಅಭಿಮಾನಿಗಳನ್ನು ಅಗಲಿದ ನಟ ಪುನೀತ್ ರಾಜ್ ಕುಮಾರ್ ಅವರ ಸಮಾಧಿಗೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸುತ್ತಿರುವವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಅಭಿಮಾನಿಗಳು, ಖ್ಯಾತನಾಮರು, ಸೆಲೆಬ್ರಿಟಿಗಳು ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿ ಅಗಲಿದ ನೆಚ್ಚಿನ ನಟನಿಗೆ ನಮನ ಸಲ್ಲಿಸುತ್ತಿದ್ದಾರೆ. ಈ ವೇಳೆ ಪುನೀತ್ ಸಮಾಧಿ ಎದುರು ನಿಂತಿದ್ದ ಯುವಜೋಡಿಯೊಂದು ಗಮನ ಸೆಳೆದಿದೆ.
ಬಳ್ಳಾರಿಯಿಂದ ಗುರುಪ್ರಸಾದ್ ಹಾಗೂ ಗಂಗಾ ಕಂಠೀರವ ಸ್ಟುಡಿಯೋಗೆ ಆಗಮಿಸಿದ್ದು, ಸಮಾಧಿ ಎದುರೇ ವಿವಾಹವಾಗುವುದಾಗಿ ಹೇಳಿದ್ದಾರೆ. ಯುವ ಜೋಡಿ 2 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಪುನೀತ್ ರಾಜ್ ಕುಮಾರ್ ಅಭಿಮಾನಿಗಳಾಗಿದ್ದಾರೆ. ಆದ್ದರಿಂದ ಇದೇ ತಮಗೆ ಪವಿತ್ರ ಸ್ಥಳ ಎಂದು ಬಣ್ಣಿಸಿದೆ.
ತಮ್ಮ ನೆಚ್ಚಿನ ನಟನ ಸಾವಿನಿಂದ ತೀವ್ರವಾಗಿ ಮನನೊಂದಿರುವ ಗಂಗಾ ಮತ್ತು ಗುರುಪ್ರಸಾದ್ ತಮ್ಮ ಪೋಷಕರ ಅನುಮತಿ ಪಡೆದು ಅಪ್ಪು ಸಮಾಧಿ ಎದುರಲ್ಲೇ ವಿವಾಹವಾಗುವುದಾಗಿ ನಿಶ್ಚಯಿಸಿದ್ದಾರೆ.
ಇದೇ ವೇಳೆ ಪುನೀತ್ ರಾಜ್ ಕುಮಾರ್ ಅವರ ಕುಟುಂಬ ಸದಸ್ಯರು ಅಪ್ಪು ನಿಧನದ 11 ನೇ ದಿನದ ಕಾರ್ಯಕ್ಕೆ ತಯಾರಿ ಮಾಡಿಕೊಂಡಿದ್ದು, ಧಾರ್ಮಿಕ ಕ್ರಿಯೆಗಳನ್ನು ನಡೆಸಲು ಉದ್ದೇಶಿಸಿದ್ದಾರೆ. ಒಂದು ಪೂಜೆ ಮನೆಯಲ್ಲಿ ನಡೆದರೆ ಮತ್ತೊಂದು ಕಠೀರವ ಸ್ಟುಡಿಯೋದಲ್ಲಿ ನಡೆಯಲಿದೆ.
ನ.14 ಕ್ಕೆ ಪುನೀತ್ ರಾಜ್ ಕುಮಾರ್ ನಿಧನರಾಗಿ 11 ದಿನಗಳಾಗಲಿದ್ದು, 2000 ಮಂದಿಗೆ ಅನ್ನ ಸಂತರ್ಪಣೆ ಮಾಡುವುದಕ್ಕೂ ಕುಟುಂಬ ಸದಸ್ಯರು ನಿರ್ಧರಿಸಿದ್ದಾರೆ. ಇದಕ್ಕೆ ತಕ್ಕಂತೆ ಅಂದಿನ ಕಾರ್ಯಕ್ರಮಗಳು ನಡೆಯುವ ದಿನ ವಾಹನ ಸಂಚಾರದಲ್ಲಿ ಸಮಸ್ಯೆಯಾಗದಂತೆ ಟ್ರಾಫಿಕ್ ಪೊಲೀಸರೂ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದ್ದಾರೆ.
Advertisement