ಬೆಂಗಳೂರು: ನಟ ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂಬ ಕೂಗು ಎಲ್ಲೆಡೆಯಿಂದ ಕೇಳಿ ಬರುತ್ತಿದೆ. ಈ ನಡುವೆ ಸೋಮವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿಯೂ ಈ ಸಂಬಂಧ ಚರ್ಚೆ ನಡೆಯುವ ಸಾಧ್ಯತೆಯಿದೆ.
ನಟ ಪುನೀತ್ಗೆ ಪದ್ಮಶ್ರೀ ಪ್ರಶಸ್ತಿ ಕೊಡಬೇಕೆಂಬ ವಿಚಾರಕ್ಕೆ ನಮ್ಮ ಬೆಂಬಲವಿದೆ ಎಂದು ಸಚಿವ ಆನಂದ್ ಸಿಂಗ್ ಹೇಳಿಕೆ ನೀಡಿದ್ದಾರೆ. ನಟ ಪುನೀತ್ ಸೇವಾ ಮನೋಭಾವ ಹೊಂದಿರುವ ವ್ಯಕ್ತಿಯಾಗಿದ್ದರು. ಪುನೀತ್ರಲ್ಲಿದ್ದ ವಿಚಾರಗಳು ಯಾರಿಗೂ ಬರಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಪುನೀತ್ ಅವರೊಂದಿಗಿನ ನೆನಪುಗಳನ್ನು ಮೆಲುಕು ಹಾಕಿದ ಅವರು, ಪುನೀತ್ ರಾಜಕುಮಾರ್ ನನಗೆ 2000ನೇ ಇಸವಿಯಿಂದ ಪರಿಚಿತರು. ನಾನಾಗ ರಾಜಕಾರಣಿ ಆಗಿರಲಿಲ್ಲ. ಆಗ ನಾನೊಬ್ಬ ಸಮಾಜ ಸೇವಕನಾಗಿದ್ದೆ. ಪುನೀತ್ ರಾಜಕುಮಾರ ಒಬ್ಬ ಸೇವಾ ಮನೋಭಾವನೆ ಇರೋ ವ್ಯಕ್ತಿ. ಅವರಲ್ಲಿರೋ ವಿಚಾರಗಳು ಯಾರಿಗೂ ಬರೋದಿಲ್ಲ. ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲು ನಮ್ಮ ಬೆಂಬಲವೂ ಇದೆ ಎಂದು ಹೇಳಿದ್ದಾರೆ.
ಸಚಿವ ಬಿಸಿ ಪಾಟೀಲ್ ಕೂಡ ಪುನೀತ್ಗೆ ಪದ್ಮಶ್ರೀ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಶಿಫಾರಸ್ಸು ಮಾಡುವುದಕ್ಕೆ ಸರ್ಕಾರದಿಂದ ಕೈಗೊಳ್ಳಬೇಕಾದ ನಿರ್ಧಾರಕ್ಕೆ ನಾವು ಪ್ರಯತ್ನಿಸುತ್ತೇವೆ. ಪುನೀತ್ ಅವರು ಕಲಾ ಸೇವೆ ಮಾಡಿದ್ದಾರೆ. ಅಷ್ಟೇ ಮುಖ್ಯವಾಗಿ ಸಮಾಜ ಸೇವೆಯನ್ನೂ ಮಾಡಿದ್ದಾರೆ. ಅವರಿಗೆ ಪದ್ಮಶ್ರೀ ನೀಡಬೇಕು ಎನ್ನುವುದು ನಮ್ಮೆಲ್ಲರ ಕೋರಿಕೆಯೂ ಹೌದು ಎಂದು ಅವರು ಹೇಳಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಲು ಅವಕಾಶ ನೀಡಿದರೆ, ಎಲ್ಲರೂ ಬೆಂಬಲಿಸುತ್ತಾರೆ ಎಂದು ಪಾಟೀಲ್ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದರು.
ರಾಜಕೀಯಕ್ಕೆ ಬರುವ ಮುನ್ನ ನಟರಾಗಿದ್ದ ಬಿಸಿ ಪಾಟೀಲ್, ಅಭಿಮಾನಿಯಾಗಿ ಪುನೀತ್ ಅವರ ಇತರ ಅಭಿಮಾನಿಗಳೊಂದಿಗೆ ಪದ್ಮಶ್ರೀ ಬೇಡಿಕೆ ಸಲ್ಲಿಸಲು ನಾನು ಸಿಎಂಗೆ ಒತ್ತಾಯಿಸುತ್ತೇನೆ, ಕೇಂದ್ರಕ್ಕೆ ಶಿಫಾರಸು ಮಾಡುವಂತೆ ನಾನು ಸಿಎಂಗೆ ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.
Advertisement