ಬಿಜೆಪಿ ಸಂಸದ ಉಮೇಶ್ ಜಾಧವ್ ಪತ್ನಿ ನೇತೃತ್ವದ ಟ್ರಸ್ಟ್‌ಗೆ ಗೃಹ ಮಂಡಳಿ ನಿವೇಶನ ಹಂಚಿಕೆ: ಹೈಕೋರ್ಟ್ ರದ್ದು

ಬಿಜೆಪಿ ಲೋಕಸಭಾ ಸದಸ್ಯ ಉಮೇಶ್ ಜಾಧವ್ ಅವರ ಪತ್ನಿ ಹಾಗೂ ಮೂರ್ತಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ಗಾಯತ್ರಿ ಅವರಿಗೆ ನಿಯಮಗಳಿಗೆ ವಿರುದ್ಧವಾಗಿ ಕ್ರಯ ಮಾಡಿಕೊಡುವ ಮೂಲಕ ಪಕ್ಷಪಾತ ಎಸಗಿದೆ ಎಂದು ಗುರುವಾರ ಕರ್ನಾಟಕ ಹೈಕೋರ್ಟ್ ಹೇಳಿದ್ದು, ನಿವೇಶನವನ್ನು ಮರಳಿ ವಶಕ್ಕೆ ಪಡೆಯುವಂತೆ ಕೆಎಚ್ಬಿಗೆ ಆದೇಶಿಸಿದೆ.
ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ಕರ್ನಾಟಕ ಗೃಹ ಮಂಡಳಿಯು (ಕೆಎಚ್ಬಿ) ನಾಗರಿಕ ಉಪಯೋಗಕ್ಕೆ ಮೀಸಲಾಗಿರುವ ನಿವೇಶನವನ್ನು (ಸಿ ಎ ಸೈಟ್) ಬಿಜೆಪಿಯ ಲೋಕಸಭಾ ಸದಸ್ಯ ಉಮೇಶ್ ಜಾಧವ್ ಅವರ ಪತ್ನಿ ಹಾಗೂ ಮೂರ್ತಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ಗಾಯತ್ರಿ ಅವರಿಗೆ ಷರತ್ತುಬದ್ಧ ಕ್ರಯಪತ್ರದ ನಿಯಮಗಳಿಗೆ ವಿರುದ್ಧವಾಗಿ ಕ್ರಯ ಮಾಡಿಕೊಡುವ ಮೂಲಕ ಪಕ್ಷಪಾತ ಎಸಗಿದೆ ಎಂದು ಗುರುವಾರ ಕರ್ನಾಟಕ ಹೈಕೋರ್ಟ್ ಹೇಳಿದ್ದು, ನಿವೇಶನವನ್ನು ಮರಳಿ ವಶಕ್ಕೆ ಪಡೆಯುವಂತೆ ಕೆಎಚ್ಬಿಗೆ ಆದೇಶಿಸಿದೆ.

ಅಲ್ಲದೇ, ಕಾನೂನುಬಾಹಿರವಾಗಿ ನಡೆದುಕೊಂಡಿರುವ ಕೆಎಚ್ಬಿಯು ಒಂದು ಲಕ್ಷ ರೂಪಾಯಿ ದಂಡವನ್ನು ಒಂದು ತಿಂಗಳ ಒಳಗಾಗಿ ಬೆಂಗಳೂರು ವಕೀಲರ ಸಂಘಕ್ಕೆ ಪಾವತಿಸಬೇಕು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಆದಿನಾರಾಯಣ ಶೆಟ್ಟಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠವು ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸತ್ಯಶೋಧನಾ ತನಿಖೆ ನಡೆಸುವಂತೆ ಆದೇಶಿಸಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆದೇಶಿಸಿದೆ. 

“ಕೆಎಚ್ ಬಿಯು ಉಮೇಶ್ ಜಾಧವ್ ಅವರ ಪತ್ನಿ ಗಾಯತ್ರಿ ಅಧ್ಯಕ್ಷರಾಗಿರುವ ಮೂರ್ತಿ ಚಾರಿಟಬಲ್ ಟ್ರಸ್ಟ್ ಗೆ ಬೆಂಗಳೂರಿನ ಯಲಹಂಕ ನ್ಯೂ ಟೌನ್ನ ಐದನೇ ಫೇಸ್ ಲ್ಲಿ 232 ಸ್ಕ್ವೇರ್ ಮೀಟರ್ಗಳ 2004ರ ಜುಲೈ 23ರಂದು ಸಿ ಎ ನಿವೇಶನವನ್ನು ಷರತ್ತಿಗೆ ಒಳಪಟ್ಟು ಕ್ರಯ ಮಾಡಿಕೊಟ್ಟಿದೆ. ಇದರ ಪ್ರಕಾರ ಸಾರ್ವಜನಿಕರ ಅನುಕೂಲಕ್ಕಾಗಿ ಎರಡು ವರ್ಷಗಳ ಒಳಗೆ ಶೈಕ್ಷಣಿಕ ಸಂಸ್ಥೆ ನಿರ್ಮಿಸಬೇಕು ಎಂದು ಹೇಳಲಾಗಿದೆ. 

ಕರ್ನಾಟಕ ಗೃಹ ಮಂಡಳಿ ನಿಯಮಾವಳಿಗಳ ಪ್ರಕಾರ ಸಿ ಎ ನಿವೇಶನದಲ್ಲಿ ಐದು ವರ್ಷಗಳ ಒಳಗೆ ಕಟ್ಟಡ ನಿರ್ಮಿಸದಿದ್ದರೆ ಯಾವುದೇ ನೋಟಿಸ್ ನೀಡದೇ ಅದನ್ನು ಕೆಎಚ್ಬಿ ವಶಪಡಿಸಿಕೊಳ್ಳಬಹುದಾಗಿದೆ. ನಿರ್ದಿಷ್ಟ ಕಾಲಮಿತಿಯಲ್ಲಿ ಯಾವುದೇ ಕಟ್ಟಡ ನಿರ್ಮಾಣ ಮಾಡದಿದ್ದರೂ ಸದ್ಯ ಮಾರುಕಟ್ಟೆಯಲ್ಲಿ 10 ಕೋಟಿ ರೂಪಾಯಿ ಬೆಲೆಬಾಳುವ ನಿವೇಶನವನ್ನು 2020ರ ಜುಲೈ 23ರಂದು 3.87 ಲಕ್ಷ ರೂಪಾಯಿ ಪಡೆದು ಕೆಎಚ್ ಬಿಯು ಟ್ರಸ್ಟ್ ಗೆ ಕ್ರಯ ಮಾಡಿಕೊಟ್ಟಿದೆ. ಇದೇ ನಿವೇಶನಕ್ಕೆ ಹೊಂದಿಕೊಂಡಿರುವ ಹೆಚ್ಚುವರಿಯಾಗಿದ್ದ ಸ್ಥಳ ಸೇರಿ ನಿವೇಶನದ ವಿಸ್ತೀರ್ಣವು 278.73 ಸ್ಕ್ವೇರ್ ಮೀಟರ್ ವೇಶನಕ್ಕೆ ಪ್ರತ್ಯೇಕವಾಗಿ 18 ಲಕ್ಷ ರೂಪಾಯಿಗಳನ್ನು ಕೆಎಚ್ ಬಿ ಪಡೆದುಕೊಂಡಿದೆ. ಕ್ರಯಪತ್ರ ಮಾಡಿಕೊಡುವಾಗ ಕರ್ನಾಟಕ ಗೃಹ ಮಂಡಳಿ ನಿವೇಶನ ಹಂಚಿಕೆ ನಿಯಮಾವಳಿ 1983ರನ್ನು ಪಾಲಿಸಲಾಗಿಲ್ಲ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

 “ಟ್ರಸ್ಟ್ ಅಧ್ಯಕ್ಷೆ ಗಾಯತ್ರಿ ಅವರು ಲೋಕಸಭಾ ಸದಸ್ಯ ಉಮೇಶ್ ಜಾಧವ್ ಅವರ ಪತ್ನಿ ಎಂಬ ಕಾರಣಕ್ಕೆ ಕೆಎಚ್ಬಿ ಪಕ್ಷಪಾತದ ನಿಲುವು ಕೈಗೊಂಡಿದೆ. ಮನವಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ದಾಖಲಿಸಿದ್ದ ಕೆಎಚ್ ಬಿಯು ಪಿಐಎಲ್ ನಿರ್ವಹಣೆಗೆ ಅರ್ಹವಲ್ಲ. ಶಿಕ್ಷಣ ಸಂಸ್ಥೆ ಸ್ಥಾಪಿಸುವ ಸದುದ್ದೇಶದಿಂದ ಗಾಯತ್ರಿ ಅವರು ಕೋರಿಕೆ ಸಲ್ಲಿಸಿದ್ದರಿಂದ ನಿವೇಶನ ಹಂಚಿಕೆ ಮಾಡಲಾಗಿತ್ತು. ಸದರಿ ನಿವೇಶನವನ್ನು ಒಳಗೊಂಡು ಬೇರೊಬ್ಬರು ದಾವೆ ಹೂಡಿದ್ದರಿಂದ ಷರತ್ತುಬದ್ಧ ಕ್ರಯಪತ್ರದ ಭರವಸೆ ಜಾರಿಗೊಳಿಸಲಾಗಿಲ್ಲ. ಹೀಗಾಗಿ, 2020ರ ಜುಲೈನಲ್ಲಿ ಹೊಸದಾಗಿ ಕ್ರಯಪತ್ರ ಮಾಡಿಕೊಡಲಾಗಿದೆ ಎಂದು ವಾದಿಸಿದೆ.

ಈ ಮೂಲಕ ಕಾನೂನುಬಾಹಿರವಾಗಿ ನಿವೇಶನ ಕ್ರಯ ಮಾಡಿಕೊಟ್ಟಿರುವುದನ್ನು ಸಮರ್ಥಿಸಿಕೊಳ್ಳಲು ಕೆಎಚ್ ಬಿ ಎಲ್ಲಾ ಪ್ರಯತ್ನಗಳನ್ನೂ ಮಾಡಿದೆ. ಗಾಯತ್ರಿ ಅವರೂ ಟೆಂಡರ್ ಅಥವಾ ಹರಾಜಿನ ಮೂಲಕ ನಿವೇಶನ ಪಡೆದಿರುವ ಕುರಿತ ದಾಖಲೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ಇದ್ಯಾವುದೂ ಕೆಎಚ್ ಬಿಯ ಪ್ರತಿಕ್ರಿಯೆಯಲ್ಲಿ ಸ್ಥಾನ ಪಡೆದಿಲ್ಲ. ಸದಾಶಿವನಗರ ಯುವ ಸಂಘಟನೆ ವರ್ಸಸ್ ಕರ್ನಾಟಕ ಸರ್ಕಾರ ಮತ್ತು ಇತರರು ಪ್ರಕರಣದಲ್ಲಿ ಆಕ್ಷೇಪಾರ್ಹವಾದ ನಿವೇಶನದ ಬಗ್ಗೆ ಉಲ್ಲೇಖ ಇದೆಯಾದರೂ ಅದು ಈ ನಿವೇಶನಕ್ಕೆ ಸಂಬಂಧಪಟ್ಟಿಲ್ಲ” ಎಂದು ಪೀಠ ಆದೇಶದಲ್ಲಿ ಹೇಳಿದೆ. 

“ಕೆಎಚ್ ಬಿಯ ಮನಸ್ಥಿತಿ ಆಶ್ಚರ್ಯ ಹುಟ್ಟಿಸುವಂತಿದ್ದು, ಆಕ್ಷೇಪಾರ್ಹವಾದ ನಿವೇಶನ ಹಂಚಿಕೆ ಮಾಡುವಾಗ ಯಾವುದೇ ನಿಯಮಗಳನ್ನು ಪಾಲಿಸಲಾಗಿಲ್ಲ. ಇದೇ ಪ್ರಕರಣದ ಕುರಿತು ಹಿಂದೆ ವಿಭಾಗೀಯ ಪೀಠದ ಮುಂದೆ ವಿಸ್ತೃತವಾಗಿ ವಾದಿಸಲಾಗಿದೆ. ಆ ಸಂದರ್ಭದಲ್ಲಿ ಗಾಯತ್ರಿ ಅವರು ನಿವೇಶನವನ್ನು ಕೆಎಚ್ಬಿಗೆ ಮರಳಿಸಲು ಸಿದ್ಧವಾಗಿರುವುದಾಗಿ ತಮ್ಮ ವಕೀಲರ ಮೂಲಕ ತಿಳಿಸಿದ್ದರು” ಎಂದು ಪೀಠ ಆದೇಶದಲ್ಲಿ ದಾಖಲಿಸಿದೆ. 

“ಒಂದೊಮ್ಮೆ ಗಾಯತ್ರಿ ಅಧ್ಯಕ್ಷರಾಗಿರುವ ಟ್ರಸ್ಟ್ ಗೆ ಕೆಎಚ್ ಬಿ ಮಾಡಿಕೊಟ್ಟಿರುವ ಕ್ರಯಪತ್ರಕ್ಕೆ ಅನುಮತಿಸಿದರೆ ವ್ಯವಸ್ಥೆಯಲ್ಲಿ ಇದು ಅರಾಜಕತೆಗೆ ನಾಂದಿ ಹಾಡಲಿದ್ದು, ಪಕ್ಷಪಾತಕ್ಕೆ ಕಾರಣವಾಗಲಿದೆ. ಕೆಎಚ್ಬಿಯ ಪಕ್ಷಪಾತದ ನಿಲುವಿಗೆ ಇದು ಸ್ಪಷ್ಟ ಉದಾಹರಣೆಯಾಗಿದೆ. ನಿಯಮಾವಳಿಗಳನ್ನು ಗಾಳಿಗೆ ತೂರಿ ಪಕ್ಷಪಾತಕ್ಕೆ ನಿಲುವನ್ನು ಕೆಎಚ್ಬಿ ಕೈಗೊಂಡಿದೆ. ಹೀಗಾಗಿ, ಸಾರ್ವಜನಿಕ ಒಳಿತಾಗಿ ಇರುವ ಸಿ ಎ ನಿವೇಶನವನ್ನು ಟ್ರಸ್ಟ್ ಗೆ ಹಂಚಿಕೆ ಮಾಡಿರುವ ಕೆಎಚ್ಬಿ ಆದೇಶವನ್ನು ಬದಿಗೆ ಸರಿಸಲಾಗಿದೆ.

ಈ ನಿವೇಶನವನ್ನು ಕೆಎಚ್ ಬಿಯು ಒಂದು ತಿಂಗಳ ಒಳಗೆ ತನ್ನ ವಶಕ್ಕೆ ಪಡೆಯಬೇಕು. ನಿಯಮಾವಳಿಗಳನ್ನು ಪಾಲಿಸದ ಕೆಎಚ್ಬಿಯು ಒಂದು ಲಕ್ಷ ರೂಪಾಯಿ ದಂಡದ ಹಣವನ್ನು ಒಂದು ತಿಂಗಳ ಒಳಗಾಗಿ ಬೆಂಗಳೂರು ವಕೀಲರ ಸಂಘದ ಖಾತೆಗೆ ಜಮೆ ಮಾಡಬೇಕು. ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರು ಸತ್ಯಶೋಧನೆ ತನಿಖೆ ನಡೆಸಬೇಕು. ಗೃಹ ಮಂಡಳಿಯ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆ ನಡೆಸುವುದರ ಜೊತೆಗೆ ಕೆಎಚ್ಬಿ ಪಾವತಿಸಲಿರುವ ದಂಡದ ಮೊತ್ತವನ್ನು ವಸೂಲಿ ಮಾಡಬೇಕು. ಈ ಎಲ್ಲಾ ಪ್ರಕ್ರಿಯೆ ಆರು ತಿಂಗಳ ಒಳಗೆ ಪೂರ್ಣಗೊಳ್ಳಬೇಕು” ಎಂದು ಪೀಠ ಸುದೀರ್ಘವಾದ ಆದೇಶದಲ್ಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com