ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಕೃಪೆಯಿಂದ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಸಹಕಾರದಿಂದ ನಮ್ಮ ಸಂಕಲ್ಪ ಯಶಸ್ವಿಯಾಗುತ್ತಿದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರು ಬುಧವಾರ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಸಚಿವರ ಜೊತೆ ಮಾತುಕತೆ ನಡೆಸಿದಾಗ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಶು ಸಂಜೀವಿನಿ ಯೋಜನೆಯನ್ನು ದೇಶಾದ್ಯಂತ ವಿಸ್ತರಣೆ ಮಾಡಲು ತೀರ್ಮಾನಿಸಿದ್ದಾರೆ. ರಾಷ್ಟ್ರೀಯ ರೋಗ ನಿಯಂತ್ರಣ ಯೋಜನೆ ಅಡಿಯಲ್ಲಿ ಸಂಚಾರಿ ಪಶು ಚಿಕಿತ್ಸಾಲಯ ಘಟಕಗಳಾದ 14 ಟಾಟಾ ವಿಂಗರ್ ರಾಜ್ಯಕ್ಕೆ ಮಂಜೂರಾಗಿವೆ. ನಮ್ಮ ಮಹತ್ವದ ಯೋಜನೆ ಯಶಸ್ವಿಯಾಗಿದೆ ಎಂದಿದ್ದಾರೆ.
ರಾಜ್ಯದಲ್ಲಿ 275 ಪಶು ಸಂಚಾರಿ ವಾಹನಗಳು ಮಂಜೂರಾಗಿವೆ. 44 ಕೋಟಿ ಅನುದಾನ ಬಿಡುಗಡೆ ಆಗಿದೆ. ಒಂದು ವಾಹನಕ್ಕೆ 16 ಲಕ್ಷ ರೂ. ವೆಚ್ಚವಾಗಲಿದೆ. ವಾಹನ ನಿರ್ವಹಣೆಗೆ ಪಿಪಿಪಿ ಮಾದರಿಯಲ್ಲಿ ಜಾರಿಗೆ ವಾರ್ಷಿಕ 50 ಕೋಟಿ ರೂ. ನಿರ್ವಹಣಾ ವೆಚ್ಚವಾಗುತ್ತದೆ. ಪಶು ಚಿಕಿತ್ಸಾಲಯಕ್ಕೆ ಒಬ್ಬರು ಪಶು ವೈದ್ಯರು, ಒಬ್ಬರು ಸಹಾಯಕರು ಹಾಗೂ ಒಬ್ಬರು ಡ್ರೈವರ್ ಇರುತ್ತಾರೆ. ಕರ್ನಾಟಕದಲ್ಲಿ 1962 ನಂಬರ್ ಗೆ ಕರೆ ಮಾಡಿದರೆ, ಪಶು ಸಂಜೀವಿನಿ ವಾಹನ ರೈತರ ಮನೆಗೆ ತೆರಳಲಿದೆ ಎಂದರು.
ರೈತರ ಪಶುಗಳಿಗೆ ಸ್ಪಂದಿಸಲು ವಾರ್ ರೂಮ ಮಾಡಲಾಗಿದ್ದು, ಇದುವರೆಗೂ 25000 ಕರೆಗಳು ಬಂದಿವೆ. ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ ಗೋ.ಶಾಲಾ ತೆರೆಯಲು 20 ಜಿಲ್ಲೆಗಳಲ್ಲಿ ಸ್ಥಳ ಗುರುತಿಸಲಾಗಿದೆ. ಶೀಘ್ರವೇ ಗೋಶಾಲೆ ಆರಂಭಕ್ಕೆ ಭೂಮಿ ಪೂಜೆ ಮಾಡಲಾಗುವುದು ಎಂದರು.
ಗೋಹತ್ಯೆ ಕಾಯ್ದೆ ಜಾರಿಗೆ ಬಂದ ನಂತರ 400ಕ್ಕೂ ಹೆಚ್ಚು ಪ್ರಕರಣ ದಾಖಲಿಸಲಾಗಿದೆ. ಬಕರೀದ್ ಸಂದರ್ಭದಲ್ಲಿ 9000 ಸಾವಿರ ಪಶುಗಳ ರಕ್ಷಣೆ ಮಾಡಲಾಗಿದೆ. ಕಾಲುಬಾಯಿ ರೋಗಕ್ಕೆ 50 ಲಕ್ಷ ಡೋಸ್ ಲಸಿಕೆ ಬಂದಿದೆ. ಕಾಲುಬಾಯಿ ರೋಗದಿಂದ 58 ಜಾನುವಾರುಗಳು ಸಾವೀಗೀಡಾಗಿವೆ. 4400 ಜಾನುವಾರುಗಳಿಗೆ ಕಾಲು ಬಾಯಿ ರೋಗ ಬಂದಿತ್ತು. ತಕ್ಷಣ ಲಸಿಕೆ ಹಾಕಿಸಲಾಗಿದೆ ಎಂದು ತಿಳಿಸಿದರು.
Advertisement