'ಆರೋಗ್ಯ ಬಹಳ ಮುಖ್ಯ, ಇವತ್ತಿಂದ ನಾನು ನಿಯಮಿತವಾಗಿ ವಾಕಿಂಗ್ ಮಾಡುತ್ತೇನೆ, ನೀವೂ ಮಾಡಿ': ವಿಶ್ವ ಹೃದಯ ದಿನ ಸಿಎಂ ಬೊಮ್ಮಾಯಿ ಕರೆ
ಬೆಂಗಳೂರು: ಸೆಪ್ಟೆಂಬರ್ 29, ವಿಶ್ವ ಹೃದಯ ದಿನಾಚರಣೆಗೆ (World Heart Day). ರಾಜ್ಯದಲ್ಲಿ ಈ ಕಾರ್ಯಕ್ರಮಕ್ಕೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
ರಾಜ್ಯದ ಶಕ್ತಿಕೇಂದ್ರ ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗದಿಂದ ಕಂಠೀರವ ಕ್ರೀಡಾಂಗಣದವರೆಗೆ ಹಮ್ಮಿಕೊಳ್ಳಲಾಗಿದ್ದ ಬಿರುಸಿನ ನಡಿಗೆಗೆ ಚಾಲನೆ ನೀಡಿದ ಸಿಎಂ, ಇಂದು ವಿಶ್ವ ಹೃದಯದ ದಿನ ಆಚರಿಸಲಾಗುತ್ತಿದ್ದು, ಹೃದಯದಿಂದ ಬಾಂಧವ್ಯ ಬೆಸೆಯೋಣ ಎಂಬ ಘೋಷವಾಕ್ಯದಡಿ ಬಿರುಸಿನ ನಡಿಗೆ (Walk) ಮಾಡೋಣ. ಆರೋಗ್ಯ ಕಾಪಾಡಿಕೊಳ್ಳಲು ನಡಿಗೆ ಬಹಳ ಮುಖ್ಯ. ಪ್ರತಿ ದಿನ ಅರ್ಧ ಗಂಟೆಯಾದರೂ ಎಲ್ಲರೂ ತಮ್ಮ ನಿತ್ಯಜೀವನದ ಮಧ್ಯೆ ನಡಿಗೆಗೆ ಸಮಯಾವಕಾಶ ಮೀಸಲಿಟ್ಟು ನಡಿಗೆ ಆರಂಭಿಸಿ, ನಾನು ಕೂಡ ವಾಕಿಂಗ್ ಆರಂಭಿಸುತ್ತೇನೆ, ಆ ಮೂಲಕ ನಮ್ಮ ಆರೋಗ್ಯ ಕಾಪಾಡಿಕೊಳ್ಳೋಣ ಎಂದು ಕರೆ ನೀಡಿದರು.
ಇಂದಿನ ತಾಂತ್ರಿಕ, ಆಧುನಿಕ ಜೀವನಶೈಲಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ನಡಿಗೆ ನಡಿಗೆ, ವ್ಯಾಯಾಮ, ಯೋಗಾಸನ ಇತ್ಯಾದಿ ಬಹಳ ಮುಖ್ಯ. ಇವತ್ತಿನಿಂದ ನಾನು ಕೂಡ ಪ್ರತಿನಿತ್ಯ ವಾಕ್ ಮಾಡುತ್ತೇನೆ. ವಾಕರಲ್ಲಾದರೂ ವಾಕ್ ಮಾಡುತ್ತೇನೆ. ಹೃದಯ ಸದಾ ಬಡಿದುಕೊಳ್ಳುತ್ತೆ. ಅದನ್ನು ಆರೋಗ್ಯವಾಗಿರಿಸಿ ಎಂದು ಸಲಹೆ ನೀಡಿದರು.
ಪ್ರತಿಜ್ಞೆ ಸ್ವೀಕಾರ: ಕಾರ್ಯಕ್ರಮದಲ್ಲಿ, ದಿನಕ್ಕೆ 30 ನಿಮಿಷ ವಾಕ್ ಮಾಡೋದಾಗಿ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಆರೋಗ್ಯ ಸಚಿವ ಡಾ ಕೆ.ಸುಧಾಕರ್ ಪ್ರತಿಜ್ಞೆ ಸ್ವೀಕಾರ ಮಾಡಿದರು. ಕಾರ್ಯಕ್ರಮದ ವೇಳೆ ಕಬ್ಬನ್ ಪಾರ್ಕ್ನಲ್ಲಿ ಮುಖ್ಯಮಂತ್ರಿ ವಾಕ್ ಮಾಡಿದರು. ಸಿಎಂ ವಾಕ್ ನೋಡಿ ಕಬ್ಬನ್ ಪಾರ್ಕ್ ನಲ್ಲಿ ವಾಕಿಂಗ್ ಮಾಡುತ್ತಿದ್ದ ಸಾರ್ವಜನಿಕರು ಖುಷಿಯಾದರು.
ಬಿರುಸಿನ ನಡಿಗೆ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ದಿನನಿತ್ಯ ವಾಕ್ ಮಾಡಬೇಕು. ಇದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಹೃದಯದ ಆರೋಗ್ಯ ಚೆನ್ನಾಗಿದ್ದರೆ ಸಂಪೂರ್ಣ ಆರೋಗ್ಯ ಚೆನ್ನಾಗಿರುತ್ತದೆ. ಹೃದಯಾಘಾತವಾದಾಗ ಗೋಲ್ಡನ್ ಅವರ್ ಎಂಬುದಿರುತ್ತದೆ. ಅದರ ಬಗ್ಗೆ ತಿಳಿದುಕೊಂಡಿರಬೇಕು ಎಂದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ