ಮೈಸೂರು: ಚರ್ಚಿನ ಒಳಗೆ ಯೇಸುವಿನ ಮೂರ್ತಿಯನ್ನು ಧ್ವಂಸಗೊಳಿಸಿ ಕಾಣಿಕೆ ಡಬ್ಬಿಯಿಂದ ಹಣ ದೋಚಿ ಅಪರಿಚಿದ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ನಡೆದಿದೆ. ಚರ್ಚ್ನಲ್ಲಿದ್ದ ಮತ್ತೊಂದು ಯೇಸುವಿನ ಪ್ರತಿಮೆಗೂ ಹಾನಿ ಮಾಡಿದ್ದಾರೆ.
ಕ್ರಿಸ್ಮಸ್ ಹಬ್ಬದ ಎರಡು ದಿನಗಳ ನಂತರ ಮೈಸೂರಿನ ಪಿರಿಯಾಪಟ್ಟಣದಲ್ಲಿರುವ ಸೇಂಟ್ ಮೇರಿ ಚರ್ಚ್ ನಲ್ಲಿ ಈ ದುರ್ಘಟನೆ ನಡೆದಿದೆ. ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಹಲವು ಪೊಲೀಸ್ ತಂಡಗಳನ್ನು ರಚಿಸಲಾಗಿದೆ.
ಆರೋಪಿಗಳ ಪತ್ತೆಗಾಗಿ ಚರ್ಚ್ ಆವರಣದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ನಿನ್ನೆ ಸಾಯಂಕಾಲ 6 ಗಂಟೆಗೆ ಚರ್ಚ್ ಸಿಬ್ಬಂದಿ ಹಾನಿಯನ್ನು ಕಂಡು ತಕ್ಷಣ ಪಾದ್ರಿಯನ್ನು ಕರೆದರು. ದಾಳಿಕೋರರು ಚರ್ಚ್ಗೆ ಪ್ರವೇಶಿಸಲು ಹಿಂದಿನ ಬಾಗಿಲನ್ನು ಮುರಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾವು ಹತ್ತಿರದ ಕ್ಯಾಮೆರಾಗಳಲ್ಲಿ ರೆಕಾರ್ಡ್ ಆದ ಸಿಸಿಟಿವಿ ದೃಶ್ಯಗಳಿಂದ ಸುಳಿವಿಗಾಗಿ ಶೋಧಿಸುತ್ತಿದ್ದೇವೆ. ಮೊದಲ ನೋಟದಲ್ಲಿ ಇದು ಕಳ್ಳತನವಾಗಿದೆ ಎಂದು ತೋರುತ್ತಿದೆ, ಹಣವನ್ನು ಕದ್ದಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ತಿಳಿಸಿದ್ದಾರೆ.
ಮಂಗಳವಾರ ಸಂಜೆ 6 ಗಂಟೆಗೆ ಚರ್ಚ್ಗೆ ಪ್ರವೇಶಿಸಿದಾಗ ಎಂಟು ಮೈಕ್ ಗಳು, ಮುಂಭಾಗದ ಟೇಬಲ್ ಮತ್ತು ಹೂವಿನ ಕುಂಡಗಳು ಹಾನಿಗೊಳಗಾಗಿದ್ದವು ಎಂದು ಚರ್ಚ್ನ ಪಾದ್ರಿ ಫಾದರ್ ಜಾನ್ ಪಾಲ್ ಪೊಲೀಸರಿಗೆ ತಿಳಿಸಿದ್ದಾರೆ. ಇನ್ನು ಕೆಲವು ವಸ್ತುಗಳು ನಾಶವಾಗಿವೆ ಎಂದು ತಿಳಿಸಿದರು.
ಈ ಬಗ್ಗೆ ಫಾದರ್ ಜಾನ್ ಪಾಲ್ ಪ್ರಿಯಾಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರು ದಾಖಲಿಸಿಕೊಂಡಿರುವ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಅಪರಾಧ ಎಸಗಿದ ವ್ಯಕ್ತಿಗಳ ಪತ್ತೆಗೆ ಶೋಧ ಮುಂದುವರಿಸಿದ್ದಾರೆ ಎಂದು ಎಸ್ಪಿ ಲಾಟ್ಕರ್ ತಿಳಿಸಿದ್ದಾರೆ.
2020ರ ಜನವರಿ 20ರಂದು, ಬೆಂಗಳೂರಿನ ಕೆಂಗೇರಿ ಸ್ಯಾಟಲೈಟ್ ಟೌನ್ನಲ್ಲಿರುವ ಸೇಂಟ್ ಫ್ರಾನ್ಸಿಸ್ ಆಫ್ ಅಸ್ಸಿಸಿ ಚರ್ಚ್ ನ್ನು ಸಹ ಅಪರಿಚಿತ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದರು.
ಬಲವಂತದ ಧಾರ್ಮಿಕ ಮತಾಂತರದ ಆರೋಪದ ಮೇಲೆ ಕಳೆದ ಕೆಲವು ತಿಂಗಳುಗಳಲ್ಲಿ ಹಲವಾರು ಚರ್ಚುಗಳು ಮತ್ತು ಕ್ರಿಶ್ಚಿಯನ್ ಮಿಷನರಿಗಳು ಕೆಲವು ಧಾರ್ಮಿಕ ಮತ್ತು ರಾಜಕೀಯ ಸಂಘಟನೆಗಳ ಕೋಪವನ್ನು ಎದುರಿಸಿದ್ದಾರೆ. ಕಳೆದ ಶುಕ್ರವಾರ, ಉತ್ತರಾಖಂಡದ ಉತ್ತರಕಾಶಿಯಲ್ಲಿ ಕ್ರಿಸ್ಮಸ್ ಕಾರ್ಯಕ್ರಮದ ಮೇಲೆ ಬಲವಂತದ ಮತಾಂತರ ನಡೆಸಲಾಗುತ್ತಿದೆ ಎಂದು ಆರೋಪಿಸಿ ದೊಣ್ಣೆಗಳಿಂದ ಶಸ್ತ್ರಸಜ್ಜಿತ ವ್ಯಕ್ತಿಗಳ ಗುಂಪು ದಾಳಿ ನಡೆಸಿತ್ತು.
ಉತ್ತರ ಪ್ರದೇಶದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಸೋಮವಾರ ಬಂಧಿಸಲಾಗಿದೆ.
ಕರ್ನಾಟಕವು ಈ ವರ್ಷದ ಆರಂಭದಲ್ಲಿ ಮತಾಂತರ ವಿರೋಧಿ ಮಸೂದೆಯನ್ನು ಅಂಗೀಕರಿಸಿತು, ಅದು "ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಬಲವಂತ ಮತಾಂತರ, ಅನಗತ್ಯ ಪ್ರಭಾವ, ಒತ್ತಾಯ, ಆಮಿಷ ಅಥವಾ ಯಾವುದೇ ಮೋಸದ ವಿಧಾನದಿಂದ ಮತಾಂತರವನ್ನು ನಿಷೇಧಿಸುತ್ತದೆ.
ಉತ್ತರ ಪ್ರದೇಶದಂತಹ ಹಲವಾರು ಬಿಜೆಪಿ ಆಡಳಿತದ ರಾಜ್ಯಗಳು ಬಲವಂತದ ಧಾರ್ಮಿಕ ಮತಾಂತರವನ್ನು ತಡೆಯಲು ಕಾನೂನುಗಳನ್ನು ಹೊಂದಿದ್ದು, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಳೆದ ವರ್ಷ ಇದೇ ಕಾನೂನನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ಹೇಳಿದ್ದರು.
Advertisement