ಬೆಂಗಳೂರು: ಕನಕಪುರದಲ್ಲಿ ನಡೆದ ಆರ್ಟಿಐ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ನಾಲ್ವರನ್ನು ಸಾತನೂರು ಪೊಲೀಸರು ಬಂಧಿಸಿದ್ದಾರೆ.
ಮೂರ್ತಿ ಆರ್ (31) ಎಂಬುವರನ್ನು ಡಿಸೆಂಬರ್ 22 ರ ಸಂಜೆ ಕೊಲೆ ಮಾಡಲಾಗಿತ್ತು. ಅವರು ರೈತ ಮತ್ತು ಆರ್ಟಿಐ ಕಾರ್ಯಕರ್ತರಾಗಿದ್ದರು. ಮೂರ್ತಿ ಅವರ ಚಿಕ್ಕಪ್ಪ ಶ್ರೀನಿವಾಸ್, ಅವರ ಮಕ್ಕಳಾದ ಚೇತನ್ ಮತ್ತು ಚಂದನ್ ಹಾಗೂ ಅವರ ಪತ್ನಿಯನ್ನು ಕೊಲೆ ಆರೋಪದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಮತ್ತು ಮೃತ ಮೂರ್ತಿ ಕುಟುಂಬಗಳ ನಡುವೆ ತಮ್ಮ ಕೃಷಿ ಜಮೀನು ಪ್ರವೇಶಿಸುವ ವಿಚಾರವಾಗಿ ಆಗಾಗ ಜಗಳ ನಡೆಯುತ್ತಿತ್ತು. ಅವರು ಈ ಹಿಂದೆಯೂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಮಾತುಕತೆ ಮೂಲಕ ನೀವುಗಳೇ ವಿವಾದವನ್ನು ಬಗೆಹರಿಸಿಕೊಳ್ಳುವಂತೆ ಪೊಲೀಸರು ಸೂಚಿಸಿ ವಾಪಸ್ ಕಳುಹಿಸಿದ್ದರು. ಜಗಳ ಮುಂದುವರೆಸಿದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿ ಕಳುಹಿಸಿದ್ದಾಗಿ ಪೊಲೀಸರು ಹೇಳಿದ್ದಾರೆ.
ಡಿಸೆಂಬರ್ 22 ರಂದು ಮೂರ್ತಿ ಅವರ ಜಮೀನಿನ ಮೇಲೆ ಆರೋಪಿಗಳು ಟ್ರ್ಯಾಕ್ಟರ್ ಓಡಿಸಿ ಬೆಳೆ ನಾಶಪಡಿಸಿದ್ದರು, ಈ ವಿಚಾರವಾಗಿ ಜಗಳ ನಡೆದಿದ್ದು, ಆರೋಪಿಗಳು ಮೂರ್ತಿಗೆ ಬೆದರಿಕೆ ಹಾಕಿದ್ದರು.ಇದಾದ ಕೆಲವೇ ಗಂಟೆಗಳಲ್ಲಿ ಆರೋಪಿಗಳು ಮೂರ್ತಿ ಅವರ ಮೇಲೆ ಹಲ್ಲೆ ನಡೆಸಿ ಬಂಡೆಗೆ ತಲೆ ಒಡೆದು ಹತ್ಯೆ ಮಾಡಿದ್ದಾರೆ.
ಗ್ರಾಮ ಪಂಚಾಯಿತಿ ಸದಸ್ಯ ಗೋಪಾಲ್ ಸೇರಿದಂತೆ ಇತರ ಆರು ಮಂದಿ ವಿರುದ್ಧ ಮೂರ್ತಿ ತಾಯಿ ದೂರು ದಾಖಲಿಸಿದ್ದಾರೆ, ಕೊಲೆಯ ಹಿಂದೆ ರಾಜಕೀಯ ದುರುದ್ದೇಶವಿದೆ ಎಂದು ಆರೋಪಿಸಿದ್ದಾರೆ. ಗೋಪಾಲ್ ಮತ್ತು ಇತರರನ್ನು ಬಂಧಿಸಲು ಬಲೆ ಬೀಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Advertisement