ಕೊಪ್ಪಳ: ಮದ್ಯಸೇವನೆ ತ್ಯಜಿಸುವಂತೆ ಮಾವ ಬುದ್ಧಿವಾದ ಹೇಳಿದ್ದಕ್ಕೆ ಕುಡಿತ ಬಿಡುವ ಬದಲು ಮನೆಬಿಟ್ಟು ಹೋಗಿದ್ದ ವ್ಯಕ್ತಿಯೋರ್ವ ಆಧಾರ್ ಕಾರ್ಡ್ ನ ಅಗತ್ಯಕ್ಕಾಗಿ 24 ವರ್ಷಗಳ ಬಳಿಕ ಮನೆಗೆ ವಾಪಸ್ಸಾಗಿರುವ ವಿಲಕ್ಷಣ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಗಂಗಾಧರಪ್ಪ ತಳವಾರ್ (51) 25 ವರ್ಷಗಳ ಹಿಂದೆ ಮನೆಬಿಟ್ಟು ಹೋಗಿದ್ದ ವ್ಯಕ್ತಿಯಾಗಿದ್ದು, ಆತನಿಗಾಗಿ ಹಲವು ವರ್ಷಗಳ ಕಾಲ ಕಾದಿದ್ದ ಕುಟುಂಬ ಸದಸ್ಯರು ಆತ ಮೃತಪಟ್ಟಿರಬಹುದು ಎಂದು ಭಾವಿಸಿ ಹಾಲ್ ನಲ್ಲಿ ಆತನ ಫೋಟೋಗೆ ಹೂವಿನ ಹಾರ ಹಾಕಿದ್ದರು.
ಆದರೆ ಕಳೆದ ವಾರ ಫೋಟೋ ಫ್ರೇಮ್ ನಲ್ಲಿದ್ದ ಅದೇ ವ್ಯಕ್ತಿ ಮರಳಿ ಕಾಣಿಸಿಕೊಂಡಿದ್ದು, ಕುಟುಂಬ ಸದಸ್ಯರಿಗೆ ಅಘಾತ ಹಾಗೂ ಅಚ್ಚರಿ ಎರಡೂ ಉಂಟಾಗಿದೆ.
ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಸಣ್ಣ ಗ್ರಾಮದವರಾಗಿರುವ ಗಂಗಾಧರ ತಳವಾರ್, ಕೋಪದಲ್ಲಿ ಮನೆಬಿಟ್ಟು ಹೋದ ಬಳಿಕ ಜೀವನೋಪಾಯಕ್ಕಾಗಿ ಏನು ಮಾಡಬೇಕೆಂದು ತೋಚಲಿಲ್ಲ. ಮಂಗಳೂರಿಗೆ ತೆರಳಿದ ಅವರು ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು, ಇದಾದ ಕೆಲ ದಿನಗಳ ಬಳಿಕ ಮಂಗಳೂರಿನ ಜಮೀನಿನಲ್ಲಿ ಉದ್ಯೋಗ ಮಾಡುತ್ತಿದ್ದರು. ಕೆಲವು ತಿಂಗಳ ಹಿಂದೆ ಜಮೀನಿನ ಮಾಲಿಕ ತಳವಾರ್ ಗೆ ಇಷ್ಟು ವರ್ಷ ದುಡಿದು ಉಳಿಸಿದ್ದ ಆತನ ವೇತನವನ್ನು ನೀಡಲು ನಿರ್ಧರಿಸಿದರು.
ಇದನ್ನೂ ಓದಿ: ಆಧಾರ್ ಅಪ್ಡೇಟ್ ಗೆ 3000 ರೂ. ಲಂಚ: ಮೈಸೂರು ರೈತನ ಅಳಲು!
ನನಗೆ ಒಂದಷ್ಟು ಆರೋಗ್ಯದ ಸಮಸ್ಯೆಗಳು ಪ್ರಾರಂಭವಾಯಿತು, ಆಗ ನನ್ನ ಕುಟುಂಬ ಸದಸ್ಯರ ಅನುಪಸ್ಥಿತಿ ಕಾಡುತ್ತಿತ್ತು, ನಾನು ದುಡಿದಿದ್ದ ಹಣದಲ್ಲಿ 2 ಲಕ್ಷ ರೂಪಾಯಿಗಳನ್ನು ನೀಡಲು ಜಮೀನಿನ ಮಾಲಿಕರು ಮುಂದಾದರು ಅದಕ್ಕಾಗಿ ಬ್ಯಾಂಕ್ ಖಾತೆ ತೆರೆಯಬೇಕಾಯಿತು, ಬ್ಯಾಂಕ್ ಖಾತೆ ತೆರೆಯಲು ಆಧಾರ್ ಅಗತ್ಯವಿತ್ತು, ಅಧಾರ್ ಗಾಗಿ ನಾನು ಮತ್ತೆ ನನ್ನ ಗ್ರಾಮಕ್ಕೆ ಬರುವಂತಾಗಿ ಮನೆಗೆ ಮರಳಿದ್ದು ಸಂತೋಷವಾಗುತ್ತಿದೆ ಎಂದು ತಳವಾರ್ ಹೇಳಿದ್ದಾರೆ.
Advertisement