ಕೇಂದ್ರ ಸರ್ಕಾರದಿಂದ ಟಿ-ಮನಸ್ ಯೋಜನೆ ಜಾರಿ, ಕರ್ನಾಟಕದ ಇ-ಮನಸ್‌ ಯೋಜನೆಯೇ ಇದಕ್ಕೆ ಮಾದರಿ!

ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ, ಕೇಂದ್ರ ಸರ್ಕಾರವು ಟಿ-ಮನಸ್‌ ಎಂಬ ಯೋಜನೆ ಜಾರಿ ಮಾಡಿದೆ. ಕರ್ನಾಟಕದ ಇ-ಮನಸ್‌ ಯೋಜನೆಯೇ ಇದಕ್ಕೆ ಪ್ರೇರಣೆಯಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.
ಆರೋಗ್ಯ ಸಚಿವ ಡಾ.ಕೆ. ಸುಧಾಕರ್
ಆರೋಗ್ಯ ಸಚಿವ ಡಾ.ಕೆ. ಸುಧಾಕರ್
Updated on

ಬೆಂಗಳೂರು: ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ, ಕೇಂದ್ರ ಸರ್ಕಾರವು ಟಿ-ಮನಸ್‌ ಎಂಬ ಯೋಜನೆ ಜಾರಿ ಮಾಡಿದೆ. ಕರ್ನಾಟಕದ ಇ-ಮನಸ್‌ ಯೋಜನೆಯೇ ಇದಕ್ಕೆ ಪ್ರೇರಣೆಯಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

ನಿಮ್ಹಾನ್ಸ್‌ ಸಂಸ್ಥೆಯಲ್ಲಿ ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಸಚಿವರು ಮಾತನಾಡಿದರು. ರಾಜ್ಯದಲ್ಲಿ ಇ-ಮನಸ್‌ ಕಾರ್ಯಕ್ರಮದಡಿ, ತಂತ್ರಾಂಶ ಬಳಸಿ ಮಾನಸಿಕ ಆರೋಗ್ಯ ಚಟುವಟಿಕೆಗಳ ನಿರ್ವಹಣೆ ಮಾಡಲಾಗುತ್ತಿದೆ. ಈ ಕಾರ್ಯಕ್ರಮ ಬಿಗ್‌ ಹಿಟ್‌ ಆಗಿದ್ದು, ಇಡೀ ದೇಶಕ್ಕೆ ಮಾದರಿಯಾಗಿದೆ. ನರರೋಗ ಸಂಬಂಧಿ ಸಮಸ್ಯೆಗಳು ದೇಶದ ಅಭಿವೃದ್ಧಿಗೆ ದೊಡ್ಡ ಅಡ್ಡಿಯಾಗಿವೆ. ಇದಕ್ಕಾಗಿ ಇದೇ ವರ್ಷ ರಾಜ್ಯದಲ್ಲಿ ಬ್ರೈನ್‌ ಹೆಲ್ತ್‌ ಇನೀಶಿಯೇಟಿವ್‌ ಜಾರಿ ಮಾಡಲಾಗಿದೆ. ಇದರಡಿ, ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಆಸ್ಪತ್ರೆಗಳಲ್ಲಿ ಮಾನಸಿಕ ಅನಾರೋಗ್ಯಕ್ಕೊಳಗಾದವರ ಆರೈಕೆಗಾಗಿ ವಾರಕ್ಕೆ ಒಂದು ದಿನ ಮೀಸಲಿಡಲಾಗುತ್ತಿದೆ. ಈ ಕಾರ್ಯಕ್ರಮಗಳ ಮೂಲಕ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಗೆ ಬಂದಿದೆ.

ಈ ಎಲ್ಲಾ ಕಾರ್ಯಕ್ರಮಗಳನ್ನೇ ಮಾದರಿಯಾಗಿಸಿಕೊಂಡು, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ, ಟಿ-ಮನಸ್‌ ಯೋಜನೆ ಜಾರಿ ಮಾಡಿ ಮಾನಸಿಕ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಿದೆ ಎಂದರು. ಮಾನಸಿಕ ಆರೋಗ್ಯದ ಬಗ್ಗೆ ಬಹಳ ಕಾಲದಿಂದ ನಮ್ಮ ಸಮಾಜದಲ್ಲಿ ಚರ್ಚೆ ನಡೆಯುತ್ತಿದೆ. ದೈಹಿಕ ಆರೋಗ್ಯ ಉತ್ತಮವಾಗಿರುವುದರ ಜೊತೆಗೆ ಮಾನಸಿಕ ಆರೋಗ್ಯ ಕೂಡ ಉತ್ತಮವಾಗಿರಬೇಕು. ಇತ್ತೀಚೆಗೆ ಜನರು ಈ ಬಗ್ಗೆ ಹೆಚ್ಚು ಜಾಗೃತರಾಗಿದ್ದಾರೆ.

ಈ ಎರಡೂ ಸಮತೋಲನದಲ್ಲಿದ್ದಾಗ ಮಾತ್ರ ಆರೋಗ್ಯ ವ್ಯವಸ್ಥೆ ಸದೃಢವಾಗಿರುತ್ತದೆ. ಸರ್ಕಾರ ಈ ಸಮತೋಲನ ಕಾಯ್ದುಕೊಳ್ಳಲು ಅನೇಕ ಕ್ರಮಗಳನ್ನು ವಹಿಸಿದೆ. ಕೋವಿಡ್‌ ಸಂದರ್ಭದಲ್ಲಿ ನಿಮ್ಹಾನ್ಸ್‌ ಸಂಸ್ಥೆ ಬಹಳ ಉತ್ತಮವಾಗಿ ಕಾರ್ಯ ನಿರ್ವಹಿಸಿತ್ತು ಎಂದು ಶ್ಲಾಘಿಸಿದರು. 23 ಲಕ್ಷ ಟೆಲಿ ಕನ್ಸಲ್ಟೇಶನ್‌: ಕೋವಿಡ್‌ ಸಮಯದಲ್ಲಿ ಅನೇಕರು ಮಾನಸಿಕ ಒತ್ತಡಕ್ಕೆ ಒಳಗಾದರು. ಇದಕ್ಕಾಗಿ ನಿಮ್ಹಾನ್ಸ್‌ ಮತ್ತು ರಾಜ್ಯ ಸರ್ಕಾರದಿಂದ ಟೆಲಿ ಕೌನ್ಸಿಲಿಂಗ್‌ ಸೇವೆ ಆರಂಭಿಸಲಾಯಿತು. ಈವರೆಗೆ 23 ಲಕ್ಷ ಟೆಲಿ ಕನ್ಸಲ್ಟೇಶನ್‌ಗಳನ್ನು ನಡೆಸಲಾಗಿದೆ ಎಂಬುದು ಗಮನಾರ್ಹ. ಕ್ವಾರಂಟೈನ್‌ನಲ್ಲಿರುವವರಿಂದ ಆರಂಭವಾಗಿ ವಲಸೆ ಕಾರ್ಮಿಕರವರೆಗೂ ಎಲ್ಲರೂ ಈ ಸೇವೆ ಪಡೆದಿದ್ದಾರೆ ಎಂದರು.

ಮಾನಸಿಕ ಆರೋಗ್ಯ ಸೇವೆ ಕೋವಿಡ್‌ ಸಮಯಕ್ಕೆ ಮಾತ್ರ ಸೀಮಿತವಾಗಿಲ್ಲ. ಟೆಲಿ ಮೆಂಟಲ್‌ ಹೆಲ್ತ್‌ ಎಂಬ ಕಾರ್ಯಕ್ರಮವನ್ನೂ ಸರ್ಕಾರ ಆರಂಭಿಸಿದ್ದು, ಇದರಡಿ ನಿಮ್ಹಾನ್ಸ್‌ ಪ್ರತಿ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಿಗೆ ಮಾನಸಿಕ ಆರೋಗ್ಯ ನಿರ್ವಹಣೆ ಕುರಿತು ತರಬೇತಿ ನೀಡುತ್ತಿದೆ. ಮಾನಸಧಾರ ಕಾರ್ಯಕ್ರಮದಡಿ, ಮಾನಸಿಕ ಅನಾರೋಗ್ಯಕ್ಕೊಳಗಾದವರಿಗೆ ಸೂಕ್ತ ಹಗಲು ಆರೈಕೆ ಸೇವೆ ನೀಡಲಾಗುತ್ತಿದೆ ಎಂದು ವಿವರಿಸಿದರು. ವೃತ್ತಿ ಜೀವನವು ವಿದ್ಯಾರ್ಥಿ ಜೀವನಕ್ಕಿಂತ ಬಹಳ ವಿಭಿನ್ನವಾದುದು. ಅನೇಕ ಸಂದರ್ಭದಲ್ಲಿ ನಾವು ವಿಫಲರಾಗಬಹುದು. ಆದರೆ ಸೋಲಿನಿಂದಲೇ ಕಲಿತು ಮುಂದೆ ಸಾಗಬೇಕು. ಹೊಸ ಆಲೋಚನೆಗಳಿಗೆ ಸದಾ ಮನಸ್ಸನ್ನು ತೆರೆದಿಟ್ಟಿರಬೇಕು. ರಾಜ್ಯದಲ್ಲಿ ಉತ್ತಮ ಮಾನಸಿಕ ಆರೋಗ್ಯ ಸೇವೆ ಪಡೆಯಲು ಎಲ್ಲರೂ ಕೊಡುಗೆ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಸಚಿವರು ಸಲಹೆ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com