
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಗುರುವಾರ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ 90 ಮೀಟರ್ ಏರಿಯಲ್ ಪ್ಲಾಟ್ಫಾರ್ಮ್ ಲ್ಯಾಡರ್ ನ್ನು ಲೋಕಾರ್ಪಣೆ ಮಾಡಿದರು. ಇದೇ ಮೊದಲ ಬರಿಗೆ ಬೆಂಗಳೂರಿಗೆ ಏರಿಯಲ್ ಲ್ಯಾಡರ್ ವಾಹನ ಪರಿಚಯಿಸಲಾಗಿದ್ದು ಈ ವಾಹನದ ಸಹಾಯದಿಂದ 90 ಮೀಟರ್ ಎತ್ತರದ ವರೆಗೂ ತಲುಪಿ ಅಗ್ನಿ ಅವಘಡಗಳು ಸಂಭವಿಸಿದರೆ ಅದನ್ನು ನಂದಿಸಬಹುದು. ಏರಿಯಲ್ ಲ್ಯಾಡರ್ ಪ್ಲಾಟ್ಫಾರ್ಮ್ ನ್ನು ರಾಜ್ಯ ಅಗ್ನಿ ಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ರವರು ವಿಧಾನಸೌಧ ಮುಂದೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಏರಿಯಲ್ ಲ್ಯಾಡರ್ ಯಾವ ರೀತಿ ಕೆಲಸ ಮಾಡುತ್ತದೆ ಎಂದು ಪ್ರಾತ್ಯಕ್ಷಿಕೆ ನೀಡಲಾಯಿತು. ರಾಜ್ಯ ಸರಕಾರ ಸುಮಾರು 30 ಕೋಟಿ ವೆಚ್ಚದ ಲ್ಯಾಡರ್ ವಾಹನವನ್ನು ಫಿನ್ಲೆಂಡ್ ದೇಶದಿಂದ ಖರೀದಿಸಿದೆ. ಅಗ್ನಿಶಾಮಕ ಇಲಾಖೆ 2020ರಲ್ಲಿ ಏರಿಯಲ್ ಲ್ಯಾಡರ್ ವಾಹನ ಖರೀದಿಗೆ ಮುಂದಾಗಿತ್ತು.
ದೇಶದಲ್ಲಿ ಏರಿಯಲ್ ಲ್ಯಾಡರ್ ವಾಹನ ಹೊಂದಿರುವ ಎರಡನೇ ನಗರ ಬೆಂಗಳೂರು. ಈ ಮೊದಲು ಮುಂಬೈ ನಗರದಲ್ಲಿ 90 ಮೀಟರ್ ಎತ್ತರದ ಲ್ಯಾಡರ್ ವಾಹನ ಬಳಕೆ ಮಾಡಲಾಗಿದೆ. ಸದ್ಯ ಇನ್ನು ಮುಂದೆ ಬೆಂಗಳೂರಿನಲ್ಲೂ ಈ ವಾಹನ ಬಳಸಲಾಗುತ್ತದೆ. ನಗರದಲ್ಲಿ ಹೆಚ್ಚುತ್ತಿರುವ ಬಹುಮಹಡಿ ಕಟ್ಟಡಗಳ ಸಂಖ್ಯೆ ಹಿನ್ನೆಲೆ ಅವಘಡಗಳ ಸಂದರ್ಭದಲ್ಲಿ ಬಳಸಿಕೊಳ್ಳಲು ಅತ್ಯಾಧುನಿಕ ಲ್ಯಾಡರ್ ವಾಹನ ಖರೀದಿಸಲಾಗಿದೆ.
ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯನ್ನು ಬಲಪಡಿಸಲು ಹತ್ತು ಹಲವು ಕ್ರಮಗಳನ್ನು ತೆಗೆದುಕೊಂಡ ಹಿನ್ನೆಲೆಯಲ್ಲಿ ಪ್ರಸ್ತುತ ಸಾಲಿನಲ್ಲಿ ಸುಮಾರು ಎರಡು ಸಾವಿರ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ರಾಜ್ಯದ ಪ್ರತಿ ತಾಲೂಕು ಕೇಂದ್ರಗಳಲ್ಲಿ ಅಗ್ನಶಾಮಕದಳದ ಸೇವಾ ಘಟಕಗಳನ್ನು ಹೊಂದಿದ್ದು ಇಲಾಖೆಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ.
ಲೋಕಾರ್ಪಣೆಗೊಳಿಸಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರಕ್ಕೆ ಅತ್ಯಂತ ಅವಶ್ಯಕವಿದ್ದ 90 ಮೀಟರ್ ಏರಿಯಲ್ ಲ್ಯಾಡರ್ ಇಂದು ರಾಜ್ಯ ಅಗ್ನಿಶಾಮಕ ದಳಕ್ಕೆ ಸೇರ್ಪಡೆಯಾಗಿದೆ. ದೇಶದಲ್ಲಿ ಕೇವಲ ಮುಂಬೈನಲ್ಲಿ ಮಾತ್ರ ಲಭ್ಯವಿದ್ದ 90 ಮೀಟರ್ ಏರಿಯಲ್ ಲ್ಯಾಡರ್ ಸೇವೆ, ಇದೀಗ ಬೆಂಗಳೂರಿನಲ್ಲಿ ಸಹ ಲಭ್ಯವಿದೆ ಎಂದರು.
ದೀಪಾವಳಿಯನ್ನು ಎಚ್ಚರಿಕೆಯಿಂದ ಸಂಭ್ರಮದಿಂದ ಆಚರಿಸಿ: ಪರಿಸರವನ್ನು ಉಳಿಸುವ ಸಲುವಾಗಿ ಪರಿಸರ ಸ್ನೇಹಿ ದೀಪಾವಳಿಯನ್ನು ಜನತೆ ಆಚರಿಸಿ. ಪಟಾಕಿಗಳನ್ನು ಹೊಡೆಯುವಾಗ ವಾಯುಮಾಲಿನ್ಯ, ಶಬ್ದಮಾಲಿನ್ಯವಾಗದಂತೆ ನೋಡಿಕೊಳ್ಳಿ. ಪರಿಸರ ಇಲಾಖೆ ನೀಡಿರುವ ಸೂಚನೆಯನ್ನು ಎಲ್ಲರೂ ಪಾಲಿಸಬೇಕು. ಜನಸಂದಣಿಯಲ್ಲಿ ಹಚ್ಚಬೇಡಿ, 125 ಡಿಸಿಬಲ್ ಗಿಂತ ಕಡಿಮೆಯಿರುವ ಪಟಾಕಿಗಳನ್ನು ಹಚ್ಚಿ ಎಂದು ಸಿಎಂ ಬೊಮ್ಮಾಯಿ ಕರೆ ನೀಡಿದರು.
Advertisement