ಬೆಂಗಳೂರು ಪ್ರವಾಹಕ್ಕೆ ದ್ರೋಹಿಗಳ ಪಕ್ಷ ಬಿಜೆಪಿ ಕಾರಣ: ರಂದೀಪ್ ಸುರ್ಜೇವಾಲಾ

ಒಂದು ಕಾಲದಲ್ಲಿ ಐಟಿ ರಾಜಧಾನಿ ಹಾಗೂ ಗಾರ್ಡನ್ ಸಿಟಿ ಎಂದು ಖ್ಯಾತಿ ಪಡೆದಿದ್ದ ಬೆಂಗಳೂರು, ಇಂದು ಪ್ರವಾಹ ಪೀಡಿತ ನಗರವಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಂದೀಪ್ ಸಿಂಗ್ ಸುರ್ಜೆವಾಲ ಆರೋಪಿಸಿದ್ದಾರೆ.
ಪ್ರವಾಹದ ದೃಶ್ಯ
ಪ್ರವಾಹದ ದೃಶ್ಯ
Updated on

ಬೆಂಗಳೂರು: ಒಂದು ಕಾಲದಲ್ಲಿ ಐಟಿ ರಾಜಧಾನಿ ಹಾಗೂ ಗಾರ್ಡನ್ ಸಿಟಿ ಎಂದು ಖ್ಯಾತಿ ಪಡೆದಿದ್ದ ಬೆಂಗಳೂರು, ಇಂದು ಪ್ರವಾಹ ಪೀಡಿತ ನಗರವಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಂದೀಪ್ ಸಿಂಗ್ ಸುರ್ಜೆವಾಲ ಆರೋಪಿಸಿದ್ದಾರೆ. 

ನಗರದಲ್ಲಿಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬೆಂಗಳೂರಿನ ಸ್ವರೂಪವನ್ನು ಬದಲಿಸಲು ಪರಮೇಶ್ವರ್, ರಾಮಲಿಂಗಾ ರೆಡ್ಡಿ, ಕೆ.ಜೆ ಜಾರ್ಜ್ ಅವರು ಸಾಕಷ್ಟು ಶ್ರಮಿಸಿದ್ದರು. ಆದರೆ ಬೆಂಗಳೂರು ಇಂದು ಪ್ರವಾಹ ಪೀಡಿತ ನಗರವಾಗಿದೆ. ಇದಕ್ಕೆ ಕಾರಣ ದ್ರೋಹಿಗಳ ಜನತಾ ಪಕ್ಷ ಬಿಜೆಪಿ ಎಂದರು.

ಕಳೆದ 16 ವರ್ಷಗಳ ಅಧಿಯಲ್ಲಿ 11 ವರ್ಷಗಳ ಕಾಲ ಬಿಜೆಪಿ ಆಡಳಿತ ನಡೆಸಿದೆ. ಈಗ ಬೆಂಗಳೂರಿನಲ್ಲಿ 3 ಬಿಜೆಪಿಯ ಸಂಸದರಿದ್ದು, ಈ ಕ್ಷೇತ್ರಗಳ 4 ವಿಧಾನಸಭಾ ಕ್ಷೇತ್ರಗಳು ಸಂಪೂರ್ಣವಾಗಿ ಪ್ರವಾಹಕ್ಕೆ ತುತ್ತಾಗಿವೆ. ಬೆಂಗಳೂರಿನ ಇತಿಹಾಸದಲ್ಲಿ ಬೋಟ್ ಮೂಲಕ ಜನ ಸಾಗಿದ ಇತಿಹಾಸ ಇರಲಿಲ್ಲ. ಇದಕ್ಕೆ ಕಾರಣ ಬೊಮ್ಮಾಯಿ ಅವರ ನೇತೃತ್ವದ 40% ಕಮಿಷನ್ ಸರ್ಕಾರ ಕಾರಣ ಎಂದರು.

ರಾಜ ಕಾಲುವೆಗಳಲ್ಲಿ ಕಸ ಎತ್ತದೇ ಇರುವುದು, ಅನಧಿಕೃತ ಒತ್ತುವರಿ ತೆರವು ಮಾಡದೇ ಇರುವುದು, ಕೆರೆಗಳ ನಡುವೆ ಸಂಪರ್ಕ ಸಾಧಿಸದೇ ಇರುವುದು ಈ ಪ್ರವಾಹ ಪರಿಸ್ಥಿತಿಗೆ ಕಾರಣವಾಗಿದೆ. ಹೀಗಾಗಿ ಕಾಂಗ್ರೆಸ್ ಪಕ್ಷ ವಿಷನ್ ಬೆಂಗಳೂರು ಹಾಗೂ ಉತ್ತರ ಬೆಂಗಳೂರಿಗೆ ಒಂದು ಯೋಜನೆಯನ್ನು ಹೊಂದಿದೆ. ಇದಕ್ಕಾಗಿ ಒಂದು ಸಮಿತಿ ರಚಿಸಲಾಗಿದ್ದು, ಈ ಸಮಿತಿ 20 ದಿನಗಳ ಒಳಗಾಗಿ ವರದಿ ಸಲ್ಲಿಸಬೇಕು. ಈ ಸಮಿತಿ ನಾಗರೀಕ ಸಮಾಜದ ಪ್ರತಿನಿಧಿಗಳು ಸೇರಿದಂತೆ ಎಲ್ಲ ವರ್ಗದ ಜನರಿಂದ ಅಭಿಪ್ರಾಯ ಸಂಗ್ರಹಿಸಲಿದೆ ಎಂದರು.

ಸುರ್ಜೇವಾಲಾ ಮುಂದಿಟ್ಟ 7 ಪ್ರಮುಖ ಬೇಡಿಕೆಗಳು:
1 ಸರ್ಕಾರ ಪ್ರವಾಹ ಹಾಗೂ ರಸ್ತೆಗುಂಡಿ ವಿಚಾರವಾಗಿ ಒಂದು ವಾರದ ಒಳಗಾಗಿ ಶ್ವೇತಪತ್ರ ಹೊರಡಿಸುವುದು. ಇದರಿಂದ ದುರಾಡಳಿತ, ಭ್ರಷ್ಟಾಚಾರ, ಮೂಲಸೌಕರ್ಯಗಳ ದುಸ್ಥಿತಿಯನ್ನು ಜನರ ಮುಂದೆ ಇಡಬಹುದು.

2 ಸರ್ವಪಕ್ಷ ಸಭೆ ಕರೆದು, ಎಲ್ಲ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ನಾಗರೀಕ ಸಮಾಜ, ವಿವಿಧ ವರ್ಗಗಳ ಜನರ ಅಭಿಪ್ರಾಯ ಪಡೆಯಬೇಕು.

3 ಸರ್ವಪಕ್ಷ ಪ್ರವಾಹ ಸಮಿತಿ ರಚಿಸಿ, ಮನೆ ಹಾನಿಯಾಗಿದ್ದರೆ 5 ಲಕ್ಷದಿಂದ 25 ಲಕ್ಷದವರೆಗೂ ಪರಿಹಾರ, ವಾಹನ ಹಾನಿಗೆ ಪ್ರತ್ಯೇಕ ಪರಿಹಾರ ನೀಡಿ. ನಗರದ ಮೂಲಭೂತ ಸೌಕರ್ಯ ಮರುಸ್ಥಾಪಿಸಬೇಕು.

4 ಪ್ರವಾಹ ಸಂದರ್ಭದಲ್ಲಿ ಜನರನ್ನು ಸ್ಥಳಾಂತರಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆ ಸಹಾಯ ಪಡೆಯಲಿಲ್ಲ ಏಕೆ? ಇನ್ನಾದರೂ ಜನರನ್ನು ಸುರಕ್ಷಿತ ಕ್ಷೇತ್ರಗಳಿಗೆ ಸ್ಥಳಾಂತರಿಸಬೇಕು.

5 ಆರೋಗ್ಯ ಶಿಬಿರ ಮಾಡಿ ಅನಾರೋಗ್ಯ ಹರಡುವುದನ್ನು ತಡೆಯಿರಿ

6 ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸ್ವಚ್ಛಕಾರ್ಯ ಮಾಡಬೇಕು.

7 ಕೂಡಲೇ ಸಹಾಯವಾಣಿ ಸ್ಥಾಪಿಸಿ ಪ್ರವಾಹ ಪೀಡಿತ ಜನರ ಸಮಸ್ಯೆ ಆಲಿಸಬೇಕು.

ಕಾಂಗ್ರೆಸ್ ಸಮಿತಿಯು ಬೆಂಗಳೂರಿನ ಭವಿಷ್ಯಕ್ಕೆ ಉತ್ತಮ ಯೋಜನೆಗಳನ್ನು ರೂಪಿಸಲಿದ್ದು, ಮುಂದೆ ಪಾಲಿಕೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೊದಲ ಆದ್ಯತೆಯಲ್ಲಿ ಈ ಯೋಜನೆಗಳನ್ನು ಆರು ತಿಂಗಳ ಒಳಗಾಗಿ ಪೂರ್ಣಗೊಳಿಸಲಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com