ಸಾವರ್ಕರ್ ವಿರೋಧಿಸುವವರು ಮೊದಲು ಬಸವಣ್ಣನವರ ವಚನಗಳನ್ನು ಓದಿಕೊಳ್ಳಲಿ: 'ಸಾವರ್ಕರ್ ರಥಯಾತ್ರೆ' ಬಿ ಎಸ್ ಯಡಿಯೂರಪ್ಪ ಚಾಲನೆ

ಸ್ವಾತಂತ್ರ್ಯ ಹೋರಾಟಗಾರ, ಹಿಂದೂ ಸಮಾಜದ ನಾಯಕ ವೀರ ಸಾವರ್ಕರ್ ಅವರ ಜೀವನಗಾಥೆಯನ್ನು ಬಿಂಬಿಸುವ 'ಸಾವರ್ಕರ್ ರಥಯಾತ್ರೆ'ಗೆ ಬಿಜೆಪಿ ಇಂದು ಮಂಗಳವಾರ ಮೈಸೂರಿನಲ್ಲಿ ಚಾಲನೆ ನೀಡಿದ್ದು ಇಂದಿನಿಂದ 8 ದಿನಗಳ ಕಾಲ ರಥಯಾತ್ರೆ ಮುಂದುವರಿಯಲಿದೆ.
ಸ್ವಾತಂತ್ರ್ಯವೀರ ಸಾವರ್ಕರ್ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವೀರ್ ಸಾವರ್ಕರ್ ಪ್ರತಿಷ್ಠಾನ ವತಿಯಿಂದ ಆಯೋಜಿಸಲಾಗಿದ್ದ ಸಾವರ್ಕರ್ ರಥಯಾತ್ರೆಯನ್ನು ಇಂದು ಮೈಸೂರಿನಲ್ಲಿ ಉದ್ಘಾಟಿಸಿ ಮಾತನಾಡಿದ ಯಡಿಯೂರಪ್ಪ
ಸ್ವಾತಂತ್ರ್ಯವೀರ ಸಾವರ್ಕರ್ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವೀರ್ ಸಾವರ್ಕರ್ ಪ್ರತಿಷ್ಠಾನ ವತಿಯಿಂದ ಆಯೋಜಿಸಲಾಗಿದ್ದ ಸಾವರ್ಕರ್ ರಥಯಾತ್ರೆಯನ್ನು ಇಂದು ಮೈಸೂರಿನಲ್ಲಿ ಉದ್ಘಾಟಿಸಿ ಮಾತನಾಡಿದ ಯಡಿಯೂರಪ್ಪ

ಮೈಸೂರು: ಸ್ವಾತಂತ್ರ್ಯ ಹೋರಾಟಗಾರ, ಹಿಂದೂ ಸಮಾಜದ ನಾಯಕ ವೀರ ಸಾವರ್ಕರ್ ಅವರ ಜೀವನಗಾಥೆಯನ್ನು ಬಿಂಬಿಸುವ 'ಸಾವರ್ಕರ್ ರಥಯಾತ್ರೆ'ಗೆ ಬಿಜೆಪಿ ಇಂದು ಮಂಗಳವಾರ ಮೈಸೂರಿನಲ್ಲಿ ಚಾಲನೆ ನೀಡಿದ್ದು ಇಂದಿನಿಂದ 8 ದಿನಗಳ ಕಾಲ ರಥಯಾತ್ರೆ ಮುಂದುವರಿಯಲಿದೆ.

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇಂದು ಮೈಸೂರು ಅರಮನೆಯ ಕೋಟೆ ಆಂಜನೇಯ ದೇವಾಲಯ ಆವರಣದಲ್ಲಿ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಸಾವರ್ಕರ್ ವಿರುದ್ಧ ಚಿಲ್ಲರೆ ರಾಜಕಾರಣಕ್ಕಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಬ್ರಿಟಿಷರನ್ನು ನಡುಗಿಸಿದ ಸಾವರ್ಕರ್ ವಿರೋಧಿಸುವವರು ಮೊದಲು ಬಸವಣ್ಣನವರ ವಚನಗಳನ್ನು ಓದಿಕೊಳ್ಳಲಿ ಎಂದರು.

ಸಾವರ್ಕರ್ ಅವರನ್ನು ಇವನಾರವ ಎನ್ನದೆ ಇವ ನಮ್ಮವ ಎಂದು ಎಲ್ಲರೂ ಒಪ್ಪಿಕೊಳ್ಳಬೇಕು. ಭಾರತದ ಸ್ವಾತಂತ್ರ್ಯ ಹೋರಾಟದೊಂದಿಗೆ ಹಿಂದೂ ಧರ್ಮದ ಸುಧಾರಣೆ, ರಕ್ಷಣೆಯಲ್ಲಿ ತೊಡಗಿದ್ದ ಅವರನ್ನು ಇಂದಿನ ಜನಾಂಗ ನೆನಪಿಸಿಕೊಳ್ಳಬೇಕಿದೆ. ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಭಾರತದ ರಾಷ್ಟ್ರಪತಿಗಳಾಗಿದ್ದ ಸರ್ವಪಲ್ಲಿ ರಾಧಾಕೃಷ್ಣ ಅವರಂತಹ ಮಹಾನ್ ನಾಯಕರೇ ಸಾವರ್ಕರ್ ಅವರನ್ನು ಹೊಗಳಿ ವೀರ ಎಂದು ಕರೆದಿದ್ದರು ಅಂತಹುದರಲ್ಲಿ ಇಂದು ಕ್ಷುಲ್ಲಕ ರಾಜಕೀಯ ಮಾಡುವುದೇಕೆ ಎಂದು ಯಡಿಯೂರಪ್ಪ ಪ್ರಶ್ನಿಸಿದರು.

ಸಾವರ್ಕರ್ ವಿಚಾರ, ಮಾರ್ಗದರ್ಶನ ಭಾರತೀಯರಿಗೆ ದಾರಿದೀಪ. ಇಂದಿನ ಯುವಕರಿಗೆ ಅವರ ಬಗ್ಗೆ ಅರಿವಿಲ್ಲ, ಇದನ್ನು ಬಂಡವಾಳ ಮಾಡಿಕೊಂಡು ಕೆಲವರು ಯುವಕರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವರ ಚಿಂತನೆಗಳನ್ನು ಇಂದಿನವರಿಗೆ ತಿಳಿಸುವ ಅಗತ್ಯವಿದೆ ಎಂದು ಕಾಂಗ್ರೆಸ್ ನಾಯಕರನ್ನು ಹೆಸರೇಳದೆ ಟೀಕಿಸಿದರು.

ಇದಕ್ಕೂ ಮುನ್ನ ಮೈಸೂರಿಗೆ ಬಂದಿಳಿದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಎಂದು ಸಿದ್ದರಾಮಯ್ಯ ಟೀಕಿಸುತ್ತಿರುವುದು ಸರಿಯಲ್ಲ. ಯಾರಿಗೆ ಧರ್ಮ, ದೇಶದ ಪರಿಕಲ್ಪನೆ ಇರುವುದಿಲ್ಲವೋ ಅಂತಹವರು ಈ ರೀತಿ ಬೇಜವಾಬ್ದಾರಿತನದಿಂದ ಮಾತನಾಡುತ್ತಾರೆ. ಸಾವರ್ಕರ್ ಕುರಿತು ಸಿದ್ದರಾಮಯ್ಯ ನೀಡುತ್ತಿರುವ ಹೇಳಿಕೆ ಅವರಿಗೆ ಶೋಭೆ ತರುವುದಿಲ್ಲ. ಸಿದ್ದರಾಮಯ್ಯ ಇದೇ ರೀತಿ ಮುಂದುವರಿದರೆ ರಾಜ್ಯದ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಆ ಕಾಲ ಬಹಳ ದೂರವಿಲ್ಲ. ಸಾವರ್ಕರ್ ಅವರ ದೇಶಭಕ್ತಿಯನ್ನು ಜನರಿಗೆ ಸಾರುವ ಸಲುವಾಗಿ ರಥಯಾತ್ರೆ ನಡೆಸುತ್ತಿದ್ದೇವೆ. ಹೆಚ್ಚಿನ ಜನರನ್ನು ಸೇರಿಸಿ ರಥಯಾತ್ರೆ ನಡೆಸುತ್ತೇವೆ. ಶಾಂತಿಯುತವಾಗಿ ರಥಯಾತ್ರೆ ನಡೆಸುತ್ತೇವೆ ಎಂದರು. 

30ಕ್ಕೆ ಸಮಾರೋಪ, ಮೂರು ಜಿಲ್ಲೆಗಳಲ್ಲಿ ಸಂಚಾರ: ವಿ ಡಿ ಸಾವರ್ಕರ್ ಅವರ ಸ್ವಾತಂತ್ರ್ಯ ಹೋರಾಟ, ತ್ಯಾಗ, ಬಲಿದಾನಗಳನ್ನು ಜನರಿಗೆ ಪರಿಚಯಿಸಲು ರಥಯಾತ್ರೆಯು ಇಂದಿನಿಂದ ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳಲ್ಲಿ ಸಂಚರಿಸಲಿದ್ದು ಪುನಃ ಮೈಸೂರಿನಲ್ಲಿ ಆ.30ರಂದು ಸಮಾರೋಪಗೊಳ್ಳಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com