ಬೆಂಗಳೂರು: ಗ್ರಾಹಕರ ಸೋಗಿನಲ್ಲಿ ಆಗಮಿಸಿದ ನಾಲ್ವರು ದರೋಡೆಕೋರರು ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯ ಗಿರವಿ ಅಂಗಡಿಯೊಂದರಲ್ಲಿ ನೌಕರನನ್ನು ಬೆದರಿಸಿ 3.5 ಕೆಜಿ ತೂಕದ ಚಿನ್ನಾಭರಣ ಮತ್ತು ಬೆಳ್ಳಿ ಆಭರಣಗಳನ್ನು ದೋಚಿದ್ದಾರೆ.
ಮೈಲಸಂದ್ರ ರಸ್ತೆಯಲ್ಲಿರುವ ರಾಮ್ದೇವ್ ಬ್ಯಾಂಕರ್ಸ್ ಮತ್ತು ಜ್ಯುವೆಲ್ಲರ್ಸ್ನಲ್ಲಿ ಬೆಳಗ್ಗೆ 7.30ಕ್ಕೆ ದರೋಡೆ ನಡೆದಿತ್ತು ಸುಮಾರು 1.93 ಕೋಟಿ ರು ಮೌಲ್ಯದ ಚಿನ್ನಾಭರಣ ದರೋಡೆಯಾಗಿದೆ. ಅಂಗಡಿ ಮಾಲೀಕ ಬವರ್ ಲಾಲ್ ಸಂಬಂಧಿ ಧರ್ಮೇಂದ್ರ ಎಂದಿನಂತೆ ಅಂಗಡಿ ತೆರೆಯಲು ಬಂದಿದ್ದರು.
ಅಂಗಡಿ ತೆರೆದ ಧರ್ಮೇಂದ್ರ ಲಾಕರ್ನಲ್ಲಿ ಇಟ್ಟಿದ್ದ ಆಭರಣಗಳನ್ನು ಜೋಡಿಸಿಡುತ್ತಿದ್ದರು. ಮೊದಲ ಇಬ್ಬರು ಕಳ್ಳರು ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ನುಗ್ಗಿದ್ದರು. ಕೆಲವೇ ನಿಮಿಷಗಳಲ್ಲಿ ಮತ್ತಿಬ್ಬರು ಅವರೊಂದಿಗೆ ಸೇರಿಕೊಂಡರು.
ಎಲ್ಲಾ ನಾಲ್ವರು ಆರೋಪಿಗಳು ಅಂಗಡಿ ಸಿಬ್ಬಂದಿಯ ಕೈ ಮತ್ತು ಕಾಲುಗಳನ್ನು ಕಟ್ಟಿಹಾಕಿ, ಸದ್ದು ಮಾಡದಂತೆ ಬಂದೂಕು ತೋರಿಸಿ ಬೆದರಿಕೆ ಹಾಕಿದ್ದಾರೆ. ನಂತರ ಸೇಫ್ ಲಾಕರ್ ನಲ್ಲಿಟ್ಟಿದ್ದ ಚಿನ್ನಾಭರಣಗಳ ಜೊತೆಗೆ 30 ಕೆಜಿ ಬೆಳ್ಳಿ ಆಭರಣಗಳು ಮತ್ತು 80 ಸಾವಿರ ನಗದು ತೆಗೆದುಕೊಂಡು ಪರಾರಿಯಾಗಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
Advertisement