ಸನ್ನಡತೆ ಆಧಾರದ ಮೇಲೆ 84 ಕೈದಿಗಳ ಬಿಡುಗಡೆ: ಗೃಹ ಸಚಿವ ಆರಗ ಜ್ಞಾನೇಂದ್ರ

75 ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಸನ್ನಡತೆ ಆಧಾರದಲ್ಲಿ 84 ಕೈದಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಶನಿವಾರ ತಿಳಿಸಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು: 75 ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಸನ್ನಡತೆ ಆಧಾರದಲ್ಲಿ 84 ಕೈದಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಶನಿವಾರ ತಿಳಿಸಿದ್ದಾರೆ.

ಜೈಲಲ್ಲಿ ಅಕ್ರಮಗಳ ಕುರಿತು ಇಂದು ಮಾತನಾಡಿದ ಅವರು, ಜೈಲುಗಳಲ್ಲಿ ಗಾಂಜಾ ಪೂರೈಕೆ, ಅಕ್ರಮ ನಡೆಯದಂತೆ ಬಿಗಿ ಕ್ರಮಕೈಗೊಳ್ಳಲಾಗಿದೆ. ಒಂದೆರಡು ಜೈಲುಗಳಲ್ಲಿ ಕೆಲವರು ಇದ್ದಾರೆ ಅದನ್ನು ಸರಿಪಡಿಸುತ್ತೇವೆ. ಮುರುಗನ್ ಸಮಿತಿ ವರದಿ ಆಧಾರದಲ್ಲಿ ಪರಪ್ಪನ ಅಗ್ರಹಾರದಲ್ಲಿ 15 ಸಿಬ್ಬಂದಿ ಅಮಾನತು ಮಾಡಲಾಗಿದೆ. 30 ಸಿಬ್ಬಂದಿ ವರ್ಗಾವಣೆ ಮಾಡಲಾಗಿದೆ. ಇವಾಗ ಬಹುತೇಕ ಹೊಸ ಸಿಬ್ಬಂದಿಗಳು ಇದ್ದಾರೆ. ಜೈಲು ಸಿಬ್ಬಂದಿ ಅಲರ್ಟ್ ಆಗಿದ್ದಾರೆ, ಎಲ್ಲವನ್ನು ಹಿಡಿಯುತ್ತಿದ್ದಾರೆ ಎಂದು ತಿಳಿಸಿದರು.

ಫೋನ್, ನಿಷೇಧಿತ ವಸ್ತು ಬಳಕೆ ಮಾಡಿದರೆ ಎಫ್ ಐ ಆರ್ ಆಗುತ್ತಿದೆ. ಕೈದಿಗಳ ಶಿಕ್ಷೆ ಪ್ರಮಾಣ ಮುಗಿದ ಬಳಿಕ ಐದು ವರ್ಷ ಶಿಕ್ಷೆ ವಿಧಿಸುವ ಅವಕಾಶ ಇದೆ. ಸಿಬ್ಬಂದಿಯ ವಿರುದ್ಧವೂ ಎಫ್ ಐ ಆರ್ ದಾಖಲು ಮಾಡಲಾಗುತ್ತಿದೆ. ಈ ರೀತಿ ಬಿಗಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಪರಪ್ಪನ ಅಗ್ರಹಾರದಲ್ಲಿ 4 ಜಿ ಜಾಮರ್ ಹಾಕಲಾಗುವುದು. ಅತ್ಯಂತ ಶೀಘ್ರವಾಗಿ ಈ ಕ್ರಮ ಕೈಗೊಳ್ಳಲಾಗುವುದು. ಕೆಲವು ಸಿಬ್ಬಂದಿ ಅನಾಚಾರದಲ್ಲಿ ಕೈಜೋಡಿಸಿದ್ದರು. ಆದರೆ ಇವಾಗ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಆಜಾದಿ ಕಾ ಅಮೃತ ಮಹೋತ್ಸವದ ಸಂದರ್ಭದಲ್ಲಿ 1 ಲಕ್ಷ ಪೊಲೀಸರ ಮನೆಯಲ್ಲಿ ರಾಷ್ಟ್ರ ಧ್ವಜ ಹಾರಾಡುತ್ತೆ. ಸ್ವಾತಂತ್ರ್ಯೋತ್ಸದ ಹಿನ್ನೆಲೆಯಲ್ಲಿ ಸನ್ನಡತೆ ಆಧಾರದಲ್ಲಿ 84 ಕೈದಿಗಳ ಬಿಡುಗಡೆ ಮಾಡಲಾಗುತ್ತಿದೆ. ಪಿಎಸ್ಐ ಅಕ್ರಮದ ತ‌ನಿಖೆ ಪ್ರಾಮಾಣಿಕವಾಗಿ ನಡೆಯುತ್ತಿದೆ. ಯಾವ ಒತ್ತಡ ಏನೂ ಇಲ್ಲ, ಗಂಭೀರವಾಗಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಸಿಐಡಿಗೆ ಫ್ರೀ ಹ್ಯಾಂಡ್ ನೀಡಿದ್ದೇವೆ ಎಂದರು.

ವಿರೋಧ ಪಕ್ಷದ ನಾಯಕರು ಹಿರಿಯ ರಾಜಕಾರಣಿಗಳು. ಅವರ ಆಡಳಿತ ಅವಧಿಯಲ್ಲಿ ಎಷ್ಟು, ಏನೇನಾಗುತ್ತಿತ್ತು ಎಂಬ ಬಗ್ಗೆ ದಾಖಲೆ ನೀಡಬಲ್ಲೆ. ಇವಾಗ ಚಾರಿತ್ರಹರಣ ಮಾಡಿ ರಾಜಕೀಯ ಲಾಭ ಪಡೆಯುವ ಪ್ರಯತ್ನ ಮಾಡಲಾಗುತ್ತಿದೆ. ಸಮಯ ಬಂದಾಗ ಯಾವುದೇ ಇತರ ಪ್ರಕರಣದ ತನಿಖೆ ಮಾಡುವುದು ತಪ್ಪಲ್ಲ. ನಮ್ಮ ಕಣ್ಣ ಮುಂದೆ ಇರುವುದು ಸದ್ಯ ಪಿಎಸ್ ಐ ಹಗರಣದ ತನಿಖೆ. ಮಧ್ಯವರ್ತಿ, ಹಣ ಕೊಟ್ಟವರ ವಿರುದ್ಧವೂ ಕ್ರಮ ಆಗುತ್ತಿದೆ. ಇನ್ನೊಮ್ಮೆ ಪರೀಕ್ಷೆಯಲ್ಲಿ ಇಂತಹ ಘಟನೆ ಆಗಬಾರದು. ತನಿಖೆ ಆಗುತ್ತಿದೆ, ಯಾವುದೇ ಊಹೆಯ ಮಾತು ಹೇಳಲ್ಲ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com