ಬೆಂಗಳೂರು: ಅರಣ್ಯ ಇಲಾಖೆ ವ್ಯಾಪ್ತಿಯ 25 ಶ್ರೀಗಂಧ ಮರಗಳಿಗೆ ಖದೀಮರ ಕೊಡಲಿ ಪೆಟ್ಟು!

ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಅರಣ್ಯ ಇಲಾಖೆಯ, ಹೊಸಕೋಟೆ ತಾಲೂಕಿನ ಗೊಟ್ಟಿಪುರ ವನ ವಿಜ್ಞಾನ ಕೇಂದ್ರದ ಅರಣ್ಯ ಪ್ರದೇಶದಲ್ಲಿರುವ ಅರಣ್ಯೀಕರಣದ ವಿವಿಧ ಮರಗಳನ್ನು ಸಂಶೋಧನೆಗಾಗಿ ಬೆಳೆಸಲಾಗುತ್ತಿದೆ.
ಶ್ರೀಗಂಧದ ಮರಗಳಿಗೆ ಕತ್ತರಿ
ಶ್ರೀಗಂಧದ ಮರಗಳಿಗೆ ಕತ್ತರಿ

ಬೆಂಗಳೂರು: ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಅರಣ್ಯ ಇಲಾಖೆಯ, ಹೊಸಕೋಟೆ ತಾಲೂಕಿನ ಗೊಟ್ಟಿಪುರ ವನ ವಿಜ್ಞಾನ ಕೇಂದ್ರದ ಅರಣ್ಯ ಪ್ರದೇಶದಲ್ಲಿರುವ ಅರಣ್ಯೀಕರಣದ ವಿವಿಧ ಮರಗಳನ್ನು ಸಂಶೋಧನೆಗಾಗಿ ಬೆಳೆಸಲಾಗುತ್ತಿದೆ. ಅದರಲ್ಲಿ ಬೆಲೆಬಾಳುವ 25 ಶ್ರೀಗಂಧ ಮರಗಳನ್ನು ರಾತ್ರೋರಾತ್ರಿ ಖದೀಮರು ಕಡಿದು ಪರಾರಿಯಾಗಿದ್ದಾರೆ.

ಈ ಅರಣ್ಯ ಪ್ರದೇಶವನ್ನು ಕೇಂದ್ರ ಸರ್ಕಾರದ ಅಧೀನಕ್ಕೆ ಬರುವ ವನ ವಿಜ್ಞಾನ ಕೇಂದ್ರದ ಸಂಶೋಧನೆಗೆ ನೀಡಲಾಗಿದೆ. ಪ್ರದೇಶದಲ್ಲಿ ಶ್ರೀಗಂಧ ಹಾಗೂ ಬಿದಿರು ಮರಗಳನ್ನು ಸಂಶೋಧನೆಗಾಗಿ ಬೆಳೆಸಲಾಗಿದೆ. 10 ವರ್ಷದಿಂದ ಸಂಶೋಧನೆಗಾಗಿ ಸಾವಿರಾರು ಶ್ರೀಗಂಧ ಮರಗಳನ್ನು ನೆಟ್ಟು ಪೋಷಣೆ ಮಾಡಲಾಗುತ್ತಿದೆ. ಆದರೆ ರಾತ್ರೋರಾತ್ರಿ ನೂರಾರು ಶ್ರೀಗಂಧ ಮರಗಳಿಗೆ ಖದೀಮರು ಕೊಡಲಿಪೆಟ್ಟು ಹಾಕಿದ್ದಾರೆ. ಈ ಖದೀಮರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

ನಾಲ್ಕು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಅರಣ್ಯ ಪ್ರದೇಶವನ್ನು ರಕ್ಷಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ,  ಅಪರಾಧಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ. ಕರ್ನಾಟಕದ ಅರಣ್ಯಗಳಲ್ಲಿನ ಶ್ರೀಗಂಧದ ಮರಗಳನ್ನು ರಕ್ಷಿಸಲು ಗ್ರೌಂಡ್ ಸಿಬ್ಬಂದಿಯನ್ನು ಹೈ ಅಲರ್ಟ್ ಮಾಡಿದೆ.

ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಇನ್‌ಸ್ಟಿಟ್ಯೂಟ್ ಆಫ್ ವುಡ್ ಸೈನ್ಸ್ ಅಂಡ್ ಟೆಕ್ನಾಲಜಿ (ಐಡಬ್ಲ್ಯುಎಸ್‌ಟಿ) ಗೊಟ್ಟಿಯುಪುರದ ವಿಶೇಷ ಪ್ಯಾಚ್‌ನಲ್ಲಿ 1,000-1,500 ಶ್ರೀಗಂಧದ ಮರಗಳನ್ನು ಬೆಳೆಸುತ್ತಿದೆ. 25 ಮರಗಳನ್ನು ಕಡಿದು ಹಾಕಿರುವ ಘಟನೆಯಲ್ಲಿ ದೊಡ್ಡ ಗ್ಯಾಂಗ್ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಗ್ಯಾಂಗ್ ಈ ಅರಣ್ಯ ಪ್ರದೇಶವನ್ನು ಸಮೀಕ್ಷೆ ಮಾಡಿಯೇ ನಂತರ ಕಳ್ಳತನ ಮಾಡಿದೆ.

ಇಷ್ಟು ದೊಡ್ಡ ಪ್ರಮಾಣದಲ್ಲಿ ಮರಗಳನ್ನು ಕತ್ತರಿಸಿರುವುದು ಇತ್ತೀಚಿನ ದಿನಗಳಲ್ಲಿ ಇದೇ ಮೊದಲು. ಶ್ರೀಗಂಧದ ಮರಗಳನ್ನು ರಕ್ಷಿಸಲು ಗೊಟ್ಟಿಪುರ ಮತ್ತು ಬೆಂಗಳೂರು ಗ್ರಾಮಾಂತರದ ಎಲ್ಲಾ 70 ಅರಣ್ಯ ಬ್ಲಾಕ್‌ಗಳಲ್ಲಿ ಭದ್ರತೆ ಮತ್ತು ಗಸ್ತುಗಾಗಿ ಹೆಚ್ಚಿನ ತಂಡಗಳನ್ನು ನಿಯೋಜಿಸಲಾಗಿದೆ. ಶ್ರೀಗಂಧದ ಮರವ್ನು ರಕ್ಷಿಸಲು ಕಳೆದ ರಾಜ್ಯ ಬಜೆಟ್‌ನಲ್ಲಿ ಸರ್ಕಾರವು ವಿಶೇಷ ಕಾರ್ಯಕ್ರಮವನ್ನು ಘೋಷಿಸಿತು.

ಆದರೆ, ಕೋಟ್ಯಂತರ ಮೌಲ್ಯದ ಶ್ರೀಗಂಧ ಮರಗಳು ಎಲ್ಲಿ ಹೋದವು ಎನ್ನುವುದೇ ಇನ್ನೂ ನಿಗೂಢವಾಗಿದೆ. ಅರಣ್ಯ ಪ್ರದೇಶದಲ್ಲಿ ಅಧಿಕಾರಿಗಳು, ಗಾರ್ಡ್ ಸೇರಿದಂತೆ ಎಲ್ಲಾ ವ್ಯವಸ್ಥೆಯಿದ್ದರೂ ಮರಗಳಿಗೆ ಕಳ್ಳರು ಕೊಡಲಿ ಹಾಕಿದ್ದಾರೆ. ಕೆಲವು ಶ್ರೀಗಂಧ ಮರಗಳನ್ನು ಅರ್ಧ ಕಡಿದು ಅಲ್ಲಿಯೇ ಬಿಟ್ಟಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com