ಒಂಟಿ ಮನೆ ಯೋಜನೆ ಪುನರ್ ಪ್ರಾರಂಭಕ್ಕೆ ನಿರ್ಧಾರ, ಶೀಘ್ರದಲ್ಲಿಯೇ ಆದೇಶ: ಸಿಎಂ ಬಸವರಾಜ ಬೊಮ್ಮಾಯಿ

ಬಡವರಿಗೆ ಹಾಗೂ ಹಿಂದುಳಿದವರಿಗೆ ಮನೆ ನಿರ್ಮಾಣಕ್ಕೆ ಆರ್ಥಿಕ ಸಹಾಯ ಒದಗಿಸುವ ಉದ್ದೇಶದಿಂದ ಬಿಬಿಎಂಪಿ ವತಿಯಿಂದ ಹಿಂದೆ ಅನುಷ್ಠಾನ ಮಾಡಿದ್ದ ಒಂಟಿ ಮನೆ ಯೋಜನೆಯನ್ನು ಪುನರ್ ಪ್ರಾರಂಭಿಸಲು ನಿರ್ಧರಿಸಲಾಗಿದೆ.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ಬೆಂಗಳೂರು: ಬಡವರಿಗೆ ಹಾಗೂ ಹಿಂದುಳಿದವರಿಗೆ ಮನೆ ನಿರ್ಮಾಣಕ್ಕೆ ಆರ್ಥಿಕ ಸಹಾಯ ಒದಗಿಸುವ ಉದ್ದೇಶದಿಂದ ಬಿಬಿಎಂಪಿ ವತಿಯಿಂದ ಹಿಂದೆ ಅನುಷ್ಠಾನ ಮಾಡಿದ್ದ ಒಂಟಿ ಮನೆ ಯೋಜನೆಯನ್ನು ಪುನರ್ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಈ ಕುರಿತ ಆದೇಶ ಶೀಘ್ರವಾಗಿ ಹೊರಬೀಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಚಿಕ್ಕಪೇಟೆ ವಿಧಾನ ಸಭಾ ಕ್ಷೇತ್ರದಕೆ-100 ಯೋಜನೆ ಕಾಮಗಾರಿಯ ವೀಕ್ಷಣೆ, ನವೀಕರಣಗೊಂಡಿರುವ ಬೈರಸಂದ್ರ ಕೆರೆ ಹಾಗೂ ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್ ವ್ಯಾಪ್ತಿಯಲ್ಲಿ  ನಿರ್ಮಿಸಲಾಗಿರುವ ಎಂ.ಎಸ್. ಬಹುಮಹಡಿ ವಸತಿ ಕಟ್ಟಡದ ಉದ್ಘಾಟನೆ ಹಾಗೂ ಗಾಂಧಿ ಬಜಾರಿನಲ್ಲಿ ಬಹುಮಹಡಿ ವಾಹನ ನಿಲದಾಣ  ಕಟ್ಟಡ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ನೆರವೆರಿಸಿ ಮಾತನಾಡಿದರು.  

ಕೋವಿಡ್ ಸಾಂಕ್ರಾಮಿಕದಿಂದಾಗಿ ನಿಂತು ಹೋಗಿದ್ದ ಯೋಜನೆಯನ್ನು ಪ್ರಾರಂಭಿಸುವುದರಿಂದ  ಸ್ಥಳವಿದ್ದವರು ಒಂಟಿ ಮನೆ ನಿರ್ಮಾಣ ಮಾಡಿಕೊಳ್ಳಲು ಸಹಾಯವಾಗಲಿದೆ. ಪ್ರತಿ ವಾರ್ಡಿಗೆ ಮನೆಗಳ ಸಂಖ್ಯೆಯನ್ನು ನಿಗದಿ ಮಾಡಲಾಗುವುದು ಎಂದರು. ಬೆಂಗಳೂರಿನ ಮೂಲಭೂತ ಸೌಕರ್ಯ ಹಾಗೂ ನಾಗರಿಕರಿಗೆ  ಕಾನೂನಿನ ತೊಡಕುಗಳನ್ನು ಸರಿಪಡಿಸಿ ಬೆಂಗಳೂರಿನ ಅಂತರರಾಷ್ಟ್ರೀಯ ಮಟ್ಟದ ಖ್ಯಾತಿಗೆ ಗರಿ ಮೂಡಿಸಲು ಇನ್ನಷ್ಟು ಕಾರ್ಯಕ್ರಮಗಳನ್ನು ಜೋಡಿಸಲಾಗುತ್ತಿದೆ. ನಗರಕ್ಕೆ ತನ್ನದೇ ಆರೋಗ್ಯ ವ್ಯವಸ್ಥೆಯನ್ನು ರೂಪಿಸಲಾಗಿದೆ. ಏಕಸಾಮ್ಯ ಆಡಳಿತ ತರುವ ಕೆಲಸ, 20 ಶಾಲೆಗಳನ್ನು ಆಧುನಿಕರಣ ಮಾಡಲಾಗುತ್ತಿದೆ. ಶಿಕ್ಷಣ, ಆರೋಗ್ಯ ಹಾಗೂ ಮೂಲಭೂತ ಸೌಕರ್ಯ, ಸೌಂದರ್ಯೀಕರಣವನ್ನು ಬೆಂಗಳೂರಿನ ನಾಗರಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರೂಪಿಸಲಾಗಿದೆ ಎಂದು ಉಖ್ಯಮಂತ್ರಿಗಳು ತಿಳಿಸಿದರು.  

ಹೊಸ ಪ್ರಯೋಗ
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಂತ ಹೊಸ ಪ್ರಯೋಗವನ್ನು ಬಿಬಿಎಂಪಿ ಹಾಗೂ ನಗರಾಭಿವೃದ್ಧಿ ಇಲಾಖೆಯವರು ಮಾಡಿದ್ದಾರೆ. ರಾಜಕಾಲುವೆ ಶುದ್ಧಗೊಳಿಸಿ ಅದಕ್ಕೆ ಬರುವ ಚರಂಡಿ ನೀರನ್ನು ಶುದ್ಧೀಕರಣ ಮಾಡಿ  ಅಕ್ಕಪಕ್ಕದ ಸ್ಥಳವನ್ನು ನಾಗರಿಕರ ಮಾರ್ಗವನ್ನಾಗಿ  ಮಾಡಿದ್ದಾರೆ. 23-24 ಕಿಮಿ ಪೈಕಿ 9 ಕಿಮಿ ಪೂರ್ಣಗೊಳಿಸಿ ಜನರಿಗೆ ಅರ್ಪಣೆಮಾಡಲಾಗಿದೆ.  ಎಲ್ಲಾ ರಾಜಕಾಲುವೆಯನ್ನು ಈ ರೀತಿ ಅಭಿವೃದ್ಧಿಗೊಳಿಸಿದರೆ ಬೆಂಗಳೂರು ಉತ್ತಮ ನಗರವಾಗುತ್ತದೆ. ಮಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರು  ಬೆಂಗಳೂರು ಮಿಷನ್ ಯೋಜನೆಯನ್ನು ಪ್ರಾರಂಭಿಸಿದ್ದರು. ಅವರಿಂದಲೇ ಯೋಜನೆಯನ್ನು ಉದ್ಘಾಟಿಸಲಾಗುವುದು ಎಂದರು.

ಸಂಚಾರ ದಟ್ಟಣೆ ಸುಗಮಗೊಳಿಸಲು ಕ್ರಮ
ಗಾಂಧಿಬಜಾರಿನಲ್ಲಿ ಬಹುಮಹಡಿ ವಾಹನ ನಿಲ್ದಾಣ ಹಾಗೂ ಎಂ.ಎಸ್. ಬಹುಮಹಡಿ ವಸತಿ ಕಟ್ಟಡವನ್ನು ಉದ್ಘಾಟಿಸಲಾಗಿದೆ. ಬೆಂಗಳೂರು ಬೃಹತ್ ಆಗಿ ಬೆಳೆದಿದೆ. ದಿನನಿತ್ಯ ಇದರ ವಿಸ್ತರಣೆಯಾಗುತ್ತಿದೆ. ಅದಕ್ಕಾಗಿ ನಗರವನ್ನು ಯೋಜನಾಬದ್ಧವಾಗಿ ನಿರ್ಮಿಸಬೇಕೆನ್ನುವ ಚಿಂತನೆಯಿಂದ ಹಲವಾರು ವಿನೂತನ ಯೋಜನೆಗಳನ್ನು ರೂಪಿಸಲಾಗಿದೆ ಎಂದರು.

 ಇದೇ 20 ರಂದು ನಮ್ಮ ನೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರು 15000 ಕೋಟಿ ರೂ.ಗಳ ಸಬ್ ಅರ್ಬನ್ ಹಾಗೂ ಪೆರಿಫೆರಲ್ ರಿಂಗ್ ರಸ್ತೆಗೂ ಅಡಿಗಲ್ಲು ಹಾಕಲಿದ್ದಾರೆ. ಈ ಎರಡು ಪ್ರಮುಖ ಯೋಜನೆಗಳು ಪೂರ್ಣಗೊಂಡರೆ, ಬೆಂಗಳೂರು ನಗರದ ಸಂಚಾರ ದಟ್ಟಣೆಯನ್ನು ಸುಗಮಗೊಳಿಸಲು ಸಾಧ್ಯ. ಬೆಂಗಳೂರು ನಗರದ ಅಭಿವೃದ್ಧಿಗೆ ಸುಮಾರು 8000 ಕೋಟಿ ರೂ.ಗಳ ಅನುದಾನವನ್ನು ಬಜೆಟ್‍ನಲ್ಲಿ ಒದಗಿಸಲಾಗಿದೆ, 1600 ಕೋಟಿ ರೂ.ಗಳ ವೆಚ್ಚದಲ್ಲಿ ರಾಜಕಾಲುವೆ ಅಭಿವೃದ್ಧಿಯನ್ನು ಮಳೆ ನಿಂತ ಕೂಡಲೇ ಪ್ರಾರಂಭ ಮಾಡಲಾಗುವುದು. ಮುಂದಿನ ವರ್ಷ ಮಳೆ ಬಂದಾಗ ಯಾವುದೇ ರೀತಿಯ ತೊಂದರೆ ಸಾರ್ವಜನಿಕರಿಗೆ ಆಗದಂತೆ ಯೋಜನೆಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲಾಗುವುದು.  

ಅಕ್ರಮ- ಸಕ್ರಮ
ಬೆಂಗಳೂರಿನ ಕಂದಾಯ ಪ್ರದೇಶಗಳಲ್ಲಿ ಅಕ್ರಮವನ್ನು ಸಕ್ರಮ ಮಾಡಲು ಕಾನೂನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸರ್ವೋಚ್ಛ  ನ್ಯಾಯಾಲಯಕ್ಕೆ ದಾಖಲೆಗಳನ್ನು ಒದಗಿಸಲಾಗಿದೆ. ಆದಷ್ಟೂ ಬೇಗನೆ ಇದಕ್ಕೆ ಪರಿಹಾರ ಸಿಗುವ ವಿಶ್ವಾಸವಿದೆ. ಇದಾದರೆ ಎಲ್ಲಾ  ಕಂದಾಯ ಪ್ರದೇಶಗಳನ್ನು  ಸಕ್ರಮಗೊಳಿಸಿ ಸಮಗ್ರ ಅಭಿವೃದ್ಧಿಯನ್ನು ಮಾಡುವತ್ತ ನಮ್ಮ ಗಂಭೀರ ಪ್ರಯತ್ನ ಮಾಡಲಾಗುವುದು ಎಂದರು. ಉದಯ್ ಗರುಡಾಚಾರ್ ಅವರು ಕ್ರಿಯಾಶೀಲ ಶಾಸಕರು.  ಆನಪರ ನಿಲುವನ್ನು ತೆಗೆದುಕೊಂಡು ಜನರ ಸಂಕಷ್ಟಗಳನ್ನು ದೂರ ಮಾಡುವಂತ ಶಾಸಕರು ನಮಗೆ ಅಗತ್ಯ ಎಂದು ಮುಖ್ಯಮಂತ್ರಿಗಳು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com