ಹೊಸಪೇಟೆ: ಹಂಪಿ ಸುತ್ತಮುತ್ತಲಿನ 16 ರೆಸಾರ್ಟ್ಗಳಿಗೆ ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರವು ಬೀಗ ಮುದ್ರೆ ಹಾಕಿದೆ. ಅನುಮತಿ ಪಡೆದುಕೊಳ್ಳದೇ ಕೃಷಿ ಜಮೀನಿನಲ್ಲಿ ಈ ರೆಸಾರ್ಟ್ಗಳನ್ನು ನಡೆಸಲಾಗುತ್ತಿತ್ತು.
ಸರ್ಕಾರದ ಅನುಮತಿಯಿಲ್ಲದೇ ಕೃಷಿ ಜಮೀನಿನಲ್ಲಿ ನಿರ್ಮಾಣಗೊಂಡಿದ್ದ 16 ಹೋಂ ಸ್ಟೇ, ರೆಸಾರ್ಟ್ಗಳಿಗೆ ಪ್ರಾಧಿಕಾರ ಈಗಾಗಲೇ ನೋಟಿಸ್ ಜಾರಿ ಮಾಡಿತ್ತು. ಕೆಲ ತಿಂಗಳ ಹಿಂದೆಯೇ ಕಾರಣ ಕೇಳಿ ಪ್ರಾಧಿಕಾರವು ನೋಟಿಸ್ ಜಾರಿ ಮಾಡಿತ್ತು. ಯಾರೊಬ್ಬರೂ ಸೂಕ್ತ ಕಾರಣ ನೀಡಿರಲಿಲ್ಲ. ಆದರೆ, ನೋಟಿಸ್ಗೆ ಜಗ್ಗದ ಮಾಲೀಕರು ರೆಸಾರ್ಟ್ ಆರಂಭಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಪ್ರಾಧಿಕಾರ ಹಂಪಿ ಮತ್ತು ಕಡ್ಡಿರಾಂಪುರ ರೆಸಾರ್ಟ್ಗಳಿಗೆ ಕಲ್ಪಿಸಿದ್ದ ವಿದ್ಯುತ್ ಸಂಪರ್ಕ ಕಡಿತಗೊಳಿಸಿತ್ತು. ಇದೀಗ ಬೀಗ ಜಡಿದಿದೆ.
ಈ ಹಿಂದೆ, ಕಿಷ್ಕಿಂದೆ ಮತ್ತು ಅಂಜನಾದ್ರಿಯ ಬಳಿ ಅಕ್ರಮವಾಗಿ ನಿರ್ಮಿಸಿದ್ದ 49 ಹೋಟೆಲ್ಗಳನ್ನು ಪ್ರಾಧಿಕಾರ ತೆರವುಗೊಳಿಸಿತ್ತು. ಆದರೆ, ಹಂಪಿ ಸುತ್ತಮುತ್ತಲಿನ ರೆಸಾರ್ಟ್ಗಳು ಯಾವುದೇ ಅಡೆತಡೆಯಿಲ್ಲದೇ ನಡೆಯುತ್ತಿದ್ದವು. ಹೀಗಾಗಿ, ಪ್ರಾಧಿಕಾರ ಪಕ್ಷಪಾತ ನೀತಿ ಅನುಸರಿಸುತ್ತಿದೆ ಎಂದು ಅಂಜನಾದ್ರಿ, ಕಿಷ್ಕಂದೆಯ ರೆಸಾರ್ಟ್/ಹೋಟೆಲ್ ಮಾಲೀಕರು ಆರೋಪಿಸಿದ್ದರು.
ಇದೇ ಸಮಯದಲ್ಲಿ ಪ್ರಾಧಿಕಾರ ಹಂಪಿ ಸುತ್ತಮುತ್ತಲಿನ ರೆಸಾರ್ಟ್ಗಳಿಗೆ ನೋಟಿಸ್ ನೀಡಿ, ಎಲ್ಲ ರೆಸಾರ್ಟ್ಗಳನ್ನು ಮುಚ್ಚಿಸಿದೆ. ಹಂಪಿ ಸ್ಮಾರಕಗಳಿಗೆ ಹೊಂದಿಕೊಂಡಂತೆ ಈ ರೆಸಾರ್ಟ್ಗಳಿದ್ದರಿಂದ ಹೆಚ್ಚಿನ ಪ್ರವಾಸಿಗರು ಆಕರ್ಷಿತರಾಗುತ್ತಿದ್ದರು. ಪ್ರವಾಸಿಗರಿಂದ ಹೆಚ್ಚಿನ ಆದಾಯ ಸಹ ಗಳಿಸುತ್ತಿದ್ದರು. ಪ್ರಾಧಿಕಾರದ ಇಂದಿನ ಕ್ರಮದಿಂದ ರೆಸಾರ್ಟ್ಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದವರು ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಯುನೆಸ್ಕೋ ಸಂರಕ್ಷಿತ ಪ್ರದೇಶವಾಗಿರುವುದರಿಂದ ಪ್ರಾಧಿಕಾರದ ಅನುಮತಿ ಅತ್ಯಗತ್ಯ. 20 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ನಿರ್ಮಾಣವನ್ನು ನಿಯಮಾನುಸಾರ ನಿಷೇಧಿಸಲಾಗಿದೆ ಎಂದು ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರ ಆಯುಕ್ತ ಸಿದ್ದರಾಮೇಶ್ವರ ಹೇಳಿದ್ದಾರೆ.
ಕಳೆದ ವರ್ಷ ದ್ವೀಪದ ರೆಸಾರ್ಟ್ಗಳನ್ನು ಸ್ಥಗಿತಗೊಳಿಸಿದ ನಂತರ, ರೆಸಾರ್ಟ್ಗಳನ್ನು ನಿರ್ಮಿಸಲು ಸೂಕ್ತವಾದ ಪರ್ಯಾಯ ಸ್ಥಳ ಕೊಡುವುದಾಗಿ ಜಿಲ್ಲಾಡಳಿತ ಭರವಸೆ ನೀಡಿತ್ತು, ಆದರೆ ಈ ನಿಟ್ಟಿನಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ ಎಂದು ರೆಸಾರ್ಟ್ ಮಾಲೀಕರು ಹೇಳುತ್ತಾರೆ.
"ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರಿಗೆ ಸಮಸ್ಯೆಯ ಬಗ್ಗೆ ತಿಳಿದಿದೆ ಮತ್ತು ಅವರು ಶೀಘ್ರದಲ್ಲೇ ಪರ್ಯಾಯ ಸ್ಥಳವನ್ನು ಹುಡುಕಲು ಆಡಳಿತವನ್ನು ಕೇಳಿದರು, ಆದರೆ ಯಾವುದೇ ಸೌಲಭ್ಯ ಒದಗಿಸಿಲ್ಲ ಎಂದು ಮತ್ತೊಬ್ಬ ರೆಸಾರ್ಟ್ ಮಾಲೀಕರು ತಿಳಿಸಿದ್ದಾರೆ.
ಪ್ರವಾಸೋದ್ಯಮ ಬೆಳೆಯಬೇಕೆಂದರೆ ಪ್ರವಾಸಿಗರಿಗೆ ಎಲ್ಲ ರೀತಿಯ ಸವಲತ್ತು ಕಲ್ಪಿಸಿಕೊಡಬೇಕು. ಆ ಕೆಲಸ ಪ್ರಾಧಿಕಾರ ಮಾಡಿಲ್ಲ. ಸರ್ಕಾರಕ್ಕೆ ಸೇರಿದ ಒಂದೆರಡು ಹೋಟೆಲ್ಗಳಿವೆ. ವಾರಾಂತ್ಯಕ್ಕೆ ಸಾವಿರಾರು ಜನ ಹಂಪಿ, ಅಂಜನಾದ್ರಿಗೆ ಬಂದು ಹೋಗುತ್ತಾರೆ. ಎಲ್ಲ ರೆಸಾರ್ಟ್ಗಳು ಭರ್ತಿಯಾಗುತ್ತಿದ್ದವು. ಈಗ ಎಲ್ಲ ರೆಸಾರ್ಟ್ ಮುಚ್ಚಿಸಿದರೆ ಪ್ರವಾಸಿಗರು ಎಲ್ಲಿ ಉಳಿದುಕೊಳ್ಳುತ್ತಾರೆ?, ನಿಯಮ ಸಡಿಲಿಸಿ ರೆಸಾರ್ಟ್, ಹೋಂ ಸ್ಟೇ ನಡೆಸಲು ಅವಕಾಶ ಕಲ್ಪಿಸಬೇಕು ಎಂದು ಹೋಂ ಸ್ಟೇ ಮಾಲೀಕರು ಒತ್ತಾಯಿಸಿದ್ದಾರೆ.
Advertisement