ಬೆಂಗಳೂರು/ನವದೆಹಲಿ: ದೆಹಲಿ ಪೊಲೀಸ್ ತಂಡ ಇಂದು ಆಲ್ಟ್ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್ ನನ್ನು ಬೆಂಗಳೂರಿಗೆ ಕರೆತಂದಿದ್ದು 2018ರ ಜುಬೈರ್ ಟ್ವೀಟ್ಗೆ ಸಂಬಂಧಿಸಿದ ತನಿಖೆಯ ಭಾಗವಾಗಿ ಸುಮಾರು ಮೂರು ಗಂಟೆಗಳ ಕಾಲ ಅವರ ಮನೆಯಲ್ಲಿ ಶೋಧ ನಡೆಸಿತು ಎಂದು ಪೊಲೀಸರು ತಿಳಿಸಿದ್ದಾರೆ.
ಟ್ವೀಟ್ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಜುಬೈರ್ ನನ್ನು ದೆಹಲಿ ಪೊಲೀಸರು ಕಳೆದ ಸೋಮವಾರ ಬಂಧಿಸಿದ್ದರು. ಮಂಗಳವಾರ ದೆಹಲಿ ನ್ಯಾಯಾಲಯವು ಅವರ ಕಸ್ಟಡಿ ವಿಚಾರಣೆಯನ್ನು ನಾಲ್ಕು ದಿನಗಳವರೆಗೆ ವಿಸ್ತರಿಸಿತು.
ಬೆಂಗಳೂರಿನ ಕಾವಲ್ ಬೈರಸಂದ್ರ ಬಳಿಯ ಅವರ ನಿವಾಸದ ಮೊದಲ ಮತ್ತು ನೆಲಮಹಡಿಯಲ್ಲಿ ನಾಲ್ವರ ತಂಡ ಶೋಧ ನಡೆಸಿದೆ. ಹೊರಡುವಾಗ ದೆಹಲಿ ಪೊಲೀಸ್ ತಂಡದ ಸದಸ್ಯರೊಬ್ಬರು ಕೈಯಲ್ಲಿ ಲ್ಯಾಪ್ಟಾಪ್ ಬ್ಯಾಗ್ ಹಿಡಿದುಕೊಂಡು ಹೋಗುತ್ತಿರುವುದು ಕಂಡುಬಂದಿತು. ಬೆಂಗಳೂರು ಪೊಲೀಸರು ಶೋಧ ಕಾರ್ಯಾಚರಣೆಯಲ್ಲಿ ದೆಹಲಿಯ ಪೊಲೀಸರಿಗೆ ನೆರವು ನೀಡಿದ್ದರು.
ಪ್ರಸ್ತುತ ಪೊಲೀಸ್ ವಶದಲ್ಲಿರುವ ಜುಬೇರ್ ಜೊತೆಗೆ ನಮ್ಮ ನಾಲ್ವರ ತಂಡ ಬೆಂಗಳೂರಿನಲ್ಲಿರುವ ಆತನ ಮನೆಗೆ ತಲುಪಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಸಂಗ್ರಹಿಸಲು ನಮ್ಮ ತಂಡದ ಸದಸ್ಯರು ಇದ್ದಾರೆ. ಇದರಲ್ಲಿ ಆತನ ಮೊಬೈಲ್ ಫೋನ್ ಅಥವಾ ಲ್ಯಾಪ್ಟಾಪ್ ಕೂಡ ಸೇರಿದೆ. ಪ್ರಶ್ನಾರ್ಹ ಟ್ವೀಟ್ ಅನ್ನು ಪೋಸ್ಟ್ ಮಾಡಲು ಇವುಗಳನ್ನು ಬಳಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ನಿನ್ನೆ ದೆಹಲಿ ಪೊಲೀಸರು ಜುಬೈರ್ ಅವರ ಖಾತೆ ವಿವರಗಳು ಮತ್ತು ಇತರ ಹಣಕಾಸು ವಹಿವಾಟುಗಳ ಬಗ್ಗೆ ಮಾಹಿತಿ ಕೋರಿ ಅನೇಕ ಬ್ಯಾಂಕ್ಗಳಿಗೆ ಪತ್ರ ಬರೆದಿದ್ದರು. ಅಲ್ಟ್-ನ್ಯೂಸ್ ವೆಬ್ಸೈಟ್ನ ಸಹ-ಸಂಸ್ಥಾಪಕರು ಬಳಸುತ್ತಿರುವ ಮೊಬೈಲ್ ಫೋನ್ ಅನ್ನು ಫಾರ್ಮ್ಯಾಟ್ ಮಾಡಲಾಗಿದೆ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹೊಂದಿಲ್ಲ ಎಂದು ಅಧಿಕಾರಿ ಹೇಳಿದರು.
ಪೊಲೀಸರ ಪ್ರಕಾರ, ಆಕ್ಷೇಪಾರ್ಹ ಟ್ವೀಟ್ ಅನ್ನು ಪೋಸ್ಟ್ ಮಾಡಲು ಬಳಸಲಾದ ಫೋನ್ ಕಳೆದುಕೊಂಡಿದ್ದೇನೆ ಎಂದು ಜುಬೇರ್ ಹೇಳಿದ್ದಾರೆ. ಜುಬೈರ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153A(ಧರ್ಮ, ಜನಾಂಗ, ಹುಟ್ಟಿದ ಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 295A (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement