ಬೆಂಗಳೂರು: 8 ವರ್ಷದ ಬಾಲಕನ ಮೇಲೆ ಬೀದಿನಾಯಿಗಳ ದಾಳಿ; ತೀವ್ರ ಗಾಯ   

ಬೀದಿ ನಾಯಿಗಳ ಹಿಂಡು ಆಟವಾಡುತ್ತಿದ್ದ 8 ವರ್ಷದ ಬಾಲಕನ ಮೇಲೆ ದಾಳಿ ಮಾಡಿದ ಪರಿಣಾಮ ಆತ ತೀವ್ರವಾಗಿ ಗಾಯಗೊಂಡಿರುವ ಘಟನೆ ಕೆಆರ್ ಪುರ ಬಳಿಯ ಹೊರಮಾವಿನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೀದಿ ನಾಯಿಗಳ ಹಿಂಡು ಆಟವಾಡುತ್ತಿದ್ದ 8 ವರ್ಷದ ಬಾಲಕನ ಮೇಲೆ ದಾಳಿ ಮಾಡಿದ ಪರಿಣಾಮ ಆತ ತೀವ್ರವಾಗಿ ಗಾಯಗೊಂಡಿರುವ ಘಟನೆ ಕೆಆರ್ ಪುರ ಬಳಿಯ ಹೊರಮಾವಿನಲ್ಲಿ ನಡೆದಿದೆ.

ಭಾನುವಾರ ಬೆಳಗ್ಗೆ 11.30ರ ಸಮಯದಲ್ಲಿ ಈರಣ್ಣ ಎಂಬುವರ ಮಗ ರಸ್ತೆಯಲ್ಲಿ ಆಟವಾಡುತ್ತಿದ್ದ, ಈ ವೇಳೆ ಬಂದ ನಾಲ್ಕೈದು ಬೀದಿ ನಾಯಿಗಳು ಏಕಾ ಏಕಿ ಬಾಲಕನಮೇಲೆ ದಾಳಿ ಮಾಡಿವೆ, ಬಾಲಕನ ಕತ್ತು, ತಲೆ ಹಾಗೂ ತೊಡೆಯ ಮೇಲೆ ಗಾಯ ಮಾಡಿವೆ.

ಆತನನ್ನ ಕೂಡಲೇ ಕೆ.ಆರ್ ಪುರಂನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು,  ಆತನಿಗೆ ಐದು ಹೊಲಿಗೆ ಹಾಕಲಾಗಿದೆ. ನಂತರ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಈರಣ್ಣ ತಿಳಸಿದ್ದಾರೆ.

ಬಾಲಕನ ಎಡ ಕಿವಿಯ ಕೆಳಗಡೆ ಕುತ್ತಿಗೆ ಭಾಗದಲ್ಲಿ ಆಳವಾದ ಗಾಯವಾಗಿದ್ದು, ನಾಲ್ಕಕ್ಕೂ ಹೆಚ್ಚಿನ ಹೊಲಿಗೆ ಹಾಕಲಾಗಿದೆ. ನಾಯಿ ಕಡಿತದಿಂದ ನರಗಳು ಹಾಗೂ ತಲೆಯೊಳಗೆ ಗಾಯವಾಗಿರುವ ಬಗ್ಗೆ ತಿಳಿಯಲು ಸ್ಕ್ಯಾನಿಂಗ್‌ ಮಾಡಿಸುವಂತೆ ವೈದ್ಯರು ಸೂಚಿಸಿದ್ದಾರೆ. ಉಳಿದಂತೆ ತಲೆ, ಹೊಟ್ಟೆ, ತೊಡೆ, ಕಾಲು ಸೇರಿ ವಿವಿಧೆಡೆ ನಾಯಿ ಕಚ್ಚಿದ ಹಲ್ಲಿನ ಗುರುತುಗಳು ಆಳವಾಗಿ ಮೂಡಿವೆ.

ಇಂತಹ ಪ್ರಕರಣಗಳ ಮೇಲೆ ನಿಗಾ ಇಡಬೇಕಾದ ಬಿಬಿಎಂಪಿ ಪಶುಸಂಗೋಪನಾ ಇಲಾಖೆಗೆ ಘಟನೆಯ ಬಗ್ಗೆ ಮಾಹಿತಿ ಇಲ್ಲ. ಘಟನೆಯ ಬಗ್ಗೆ ನನಗೆ ತಿಳಿದಿಲ್ಲ. ಆದರೂ ಪಾಲಿಕೆ ನಿಯಮಾವಳಿ ಪ್ರಕಾರ ಚಿಕಿತ್ಸೆಗೆ ವ್ಯಯಿಸಿದ ಮೊತ್ತವನ್ನು  ಮರುಪಾವತಿ ಮಾಡುತ್ತೇವೆ’ ಎಂದು ಬಿಬಿಎಂಪಿ ಪಶುಸಂಗೋಪನಾ ಇಲಾಖೆ ಜಂಟಿ ನಿರ್ದೇಶಕ ರವಿಕುಮಾರ್ ಮೈಸೂರು ತಿಳಿಸಿದ್ದಾರೆ.

ಘಟನೆ ನಡೆದ ಸ್ಥಳದಲ್ಲಿ ಅಧಿಕಾರಿಗಳನ್ನು ನಿಯೋಜಿಸಲಾಗುವುದು ಮತ್ತು ಆ ಪ್ರದೇಶದಲ್ಲಿ ನಾಯಿಗಳನ್ನು ಹಿಡಿದು ರೇಬಿಸ್‌ಗಾಗಿ ವೀಕ್ಷಣೆಯಲ್ಲಿ ಇರಿಸಲಾಗುವುದು ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com