ಚಿಕ್ಕಬಳ್ಳಾಪುರ: ಅನ್ಯಜಾತಿ ಯುವಕನೊಂದಿಗೆ ಮಗಳು ಪರಾರಿ; ಮರ್ಯಾದೆಗೆ ಅಂಜಿ ಕುಟುಂಬದ ಮೂವರು ಆತ್ಮಹತ್ಯೆ

ಮಗಳು ಅನ್ಯ ಜಾತಿ ಯುವಕನ ಜೊತೆ ಪರಾರಿಯಾದ ಹಿನ್ನೆಲೆ ಮಾನ ಮರ್ಯಾದೆಗೆ ಅಂಜಿದ ತಂದೆ, ತಾಯಿ ಹಾಗೂ ಆಕೆಯ ತಮ್ಮ ಮೂವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹಂಡಿಗನಾಳ ಗ್ರಾಮದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಿಕ್ಕಬಳ್ಳಾಪುರ: ಮಗಳು ಅನ್ಯ ಜಾತಿ ಯುವಕನ ಜೊತೆ ಪರಾರಿಯಾದ ಹಿನ್ನೆಲೆ ಮಾನ ಮರ್ಯಾದೆಗೆ ಅಂಜಿದ ತಂದೆ, ತಾಯಿ ಹಾಗೂ ಆಕೆಯ ತಮ್ಮ ಮೂವರು ಆತ್ಮಹತ್ಯೆಗೆ ಶರಣಾಗಿರುವ ಮನಕಲಕುವ ಹೃದಯವಿದ್ರಾವಕ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹಂಡಿಗನಾಳ ಗ್ರಾಮದಲ್ಲಿ ನಡೆದಿದೆ.

ತಾಯಿ ಸರೋಜಮ್ಮ, ತಂದೆ ಶ್ರೀರಾಮಪ್ಪ ಹಾಗೂ ಮಗ ಮನೋಜ್ ಮೃತ ದುರ್ದೈವಿಗಳು. ಮಗಳು ಅನ್ಯ ಜಾತಿಯ ಯುವಕನ ಜೊತೆ ಪರಾರಿಯಾಗಿದ್ದಕ್ಕೆ ಮನನೊಂದು ಸಾವಿನ ಹಾದಿ ಹಿಡಿದಿದ್ದಾರೆ.

26 ವರ್ಷದ ಮಗಳು ಅರ್ಚನಾ, ನಾರಾಯಣಸ್ವಾಮಿ ಎಂಬಾತನ ಜೊತೆ ಪರಾರಿಯಾಗಿದ್ದಾಳೆ. ಯುವಕ ಅನ್ಯಜಾತಿಯವನಾಗಿರುವುದರಿಂದ ಊರಿನವರಿಂದ ನಿಂದನೆ ಒಳಗಾಗಬಹುದು ಎಂದು ಹೆದರಿ ಮನೆಯಲ್ಲಿಯೇ ಸಾಮೂಹಿಕವಾಗಿ ವಿಷ ಸೇವಿಸಿ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಸಂಬಂಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಗೆ ನಿನ್ನೆಯಷ್ಟೇ ಪೋಷಕರು ದೂರು ನೀಡಿದರು. ಇದೇ ವಿಚಾರದಲ್ಲಿ ಮನನೊಂದಿದ್ದ ತಂದೆ, ತಾಯಿ ಹಾಗೂ ಮಗ ತಡರಾತ್ರಿ ವಿಷಕಾರಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ದಂಪತಿಗೆ ಮೂರು ಜನ ಮಕ್ಕಳಿದ್ದು ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬಾಕೆ ಹೆಣ್ಣು ಮಗಳಿದ್ದಳು. ಕಳೆದ ಭಾನುವಾರ ಇದೇ ಗ್ರಾಮದ ನಾರಾಯಣಸ್ವಾಮಿ ಎಂಬಾತನ ಜೊತೆ ಅರ್ಚನಾ ಮನೆ ಬಿಟ್ಟು ಹೋಗಿದ್ದಾಳೆ ಎಂದು ಪೋಷಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದೇ ವಿಚಾರದಲ್ಲಿ ತಡರಾತ್ರಿ ಮೊದಲು ದನಗಳ ದೊಡ್ಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಪ್ಲಾನ್ ಮಾಡಿದ್ದು ಪ್ಲಾನ್ ಪ್ಲಾಪ್ ಆಗಿ ತದನಂತರ ಮನೆಯ ಮುಂಭಾಗದಲ್ಲಿ ಮೂವರು ವಿಷದ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಳಗ್ಗೆ ಹಿರಿಯ ಮಗ ರಂಜಿತ್ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಚಿಂತಾಮಣಿ ಉಪವಿಭಾಗದ ಎಎಸ್‍ಪಿ ಕುಶಾಲ್ ಚೋಕ್ಸಿ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರು ಡೆತ್‍ನೋಟ್ ಬರೆದು ಆತ್ಮಹತ್ಯೆ ಶರಣಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com