SC/ST ಮೀಸಲಾತಿ ಹೆಚ್ಚಿಸಲು ಕಾಂಗ್ರೆಸ್ ಗೆ ಸಾಧ್ಯವಾಗಲಿಲ್ಲ: ಜನಸಂಕಲ್ಪ ಯಾತ್ರೆಯಲ್ಲಿ ಸಿಎಂ ಬೊಮ್ಮಾಯಿ ವಾಗ್ದಾಳಿ!

ಜನಸಂಕಲ್ಪ ಯಾತ್ರೆ ಪ್ರಾರಂಭಿಸಿರುವ ಭಾರತೀಯ ಜನತಾ ಪಕ್ಷದ ನಾಯಕರು ತಮ್ಮ ಸರ್ಕಾರದ 'ಎಸ್‌ಸಿ/ಎಸ್‌ಟಿ ಮೀಸಲಾತಿ ಹೆಚ್ಚಳ' ವಿಷಯವನ್ನು ತನ್ನ ಟ್ರಂಪ್ ಕಾರ್ಡ್‌ ಮಾಡಿಕೊಂಡಿದ್ದಾರೆ.
ಬಿಜೆಪಿ ಜನಸಂಕಲ್ಪ ಯಾತ್ರೆ
ಬಿಜೆಪಿ ಜನಸಂಕಲ್ಪ ಯಾತ್ರೆ

ರಾಯಚೂರು: ಜನಸಂಕಲ್ಪ ಯಾತ್ರೆ ಪ್ರಾರಂಭಿಸಿರುವ ಭಾರತೀಯ ಜನತಾ ಪಕ್ಷದ ನಾಯಕರು ತಮ್ಮ ಸರ್ಕಾರದ 'ಎಸ್‌ಸಿ/ಎಸ್‌ಟಿ ಮೀಸಲಾತಿ ಹೆಚ್ಚಳ' ವಿಷಯವನ್ನು ತನ್ನ ಟ್ರಂಪ್ ಕಾರ್ಡ್‌ ಮಾಡಿಕೊಂಡಿದ್ದಾರೆ.

ರಾಯಚೂರು ತಾಲೂಕಿನ ಗಿಲ್ಲೇಸೂಗೂರು ಗ್ರಾಮದಿಂದ ಆರಂಭವಾಗಿರುವ ಜನಸಂಕಲ್ಪ ಯಾತ್ರೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ, ವಿವಿಧ ವಿಷಯಗಳಲ್ಲಿ ತಮ್ಮ ಸರ್ಕಾರದ ಕಾರ್ಯಗಳನ್ನು ಸಮರ್ಥಿಸಿಕೊಂಡರು. ಇನ್ನೊಂದೆಡೆ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಪಕ್ಷ ದಲಿತರ ಮತ್ತು ತುಳಿತಕ್ಕೊಳಗಾದವರ ಚಾಂಪಿಯನ್ ಎಂದು ಹೇಳಿಕೊಳ್ಳುತ್ತದೆ. ಹಾಗಿದ್ದಲ್ಲಿ ಅಧಿಕಾರದಲ್ಲಿದ್ದಾಗ ಎಸ್‌ಸಿ/ಎಸ್‌ಟಿ ಸಮುದಾಯದ ಬೇಡಿಕೆಗೆ ಏಕೆ ಸ್ಪಂದಿಸಿಲ್ಲ. ಆದರೆ ನಾವು ಮೀಸಲಾತಿ ಹೆಚ್ಚಿಸುವ ಅಗತ್ಯವನ್ನು ಪರಿಗಣಿಸಿ ನಾವು ಅದನ್ನು ಅತ್ಯಂತ ನಮ್ರತೆಯಿಂದ ಮಾಡಿದ್ದೇವೆ. ಇದಕ್ಕೆ ವಿರೋಧ ಪಕ್ಷಗಳು ಸೇರಿದಂತೆ ಎಲ್ಲರೂ ಸಂತಸ ವ್ಯಕ್ತಪಡಿಸಿದ್ದಾರೆ ಎಂದರು. ಸಿದ್ದರಾಮಯ್ಯ ಅವರು ಸಮಾಜದ ಕಟ್ಟಕಡೆಯ ವರ್ಗದವರಿಗೂ 'ಭಾಗ್ಯ'ಗಳ ಸರಮಾಲೆ ನೀಡಿದ್ದೇನೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಇದನ್ನು ಮಾಡದಿದ್ದು ದೌರ್ಭಾಗ್ಯ ಎಂದು ಬೊಮ್ಮಾಯಿ ಹೇಳಿದರು. ಮಾಜಿ ಸಿಎಂನ ಕೆಲವು ಅನುಯಾಯಿಗಳು ಸಿದ್ದರಾಮಯ್ಯ ಅವರನ್ನು ಸಮಾಜವಾದಿ ಎಂದು ಕರೆಯುತ್ತಾರೆ. ಆದರೆ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ನಂತರ ಜಾತ್ಯತೀತತೆಯನ್ನು ಕಳೆದುಕೊಂಡರು ಎಂದರು.

ಬೊಂಬೆ ಯಾರು?
ನನ್ನನ್ನು ಆರ್‌ಎಸ್‌ಎಸ್‌ನ ಕೈಗೊಂಬೆ ಎಂದು ಸಿದ್ದರಾಮಯ್ಯ ಕರೆಯುತ್ತಾರೆ. ನಾನು ಆರ್‌ಎಸ್‌ಎಸ್ ಅನ್ನು ಮೆಚ್ಚುತ್ತೇನೆ. ಅದರ ಅನುಯಾಯಿಯಾಗಿದ್ದೇನೆ. ಏಕೆಂದರೆ ಆರ್‌ಎಸ್‌ಎಸ್ ದೇಶದ ಉನ್ನತಿಗಾಗಿ ಮತ್ತು ದೀನದಲಿತರನ್ನು ಮುಖ್ಯವಾಹಿನಿಗೆ ತರಲು ಬದ್ಧವಾಗಿರುವ ಸಂಘಟನೆಯಾಗಿದೆ. ಆದರೆ ಸಿದ್ದರಾಮಯ್ಯ ಏನು ಮಾಡುತ್ತಿದ್ದಾರೆ ಎಂದು ಬೊಮ್ಮಾಯಿ ಪ್ರಶ್ನಿಸಿದರು. ಇನ್ನು ಚಿಕ್ಕ ಹುಡುಗ(ರಾಹುಲ್ ಗಾಂಧಿ) ಆದೇಶವನ್ನು ಅನುಸರಿಸುತ್ತಿದ್ದಾರೆ. ಕುಳಿತುಕೊಳ್ಳಲು ಹೇಳಿದರೆ ಸಿದ್ದರಾಮಯ್ಯ ಕುಳಿತುಕೊಳ್ಳುತ್ತಾರೆ, ನಿಲ್ಲಲು ಕೇಳಿದರೆ ನಿಲ್ಲುತ್ತಾರೆ. ಜೊತೆಯಲ್ಲಿ ಓಡು ಎಂದು ಓಡುತ್ತಾರೆ. ಸಿದ್ದರಾಮಯ್ಯ ಆತ್ಮಗೌರವ ಮರೆತಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.

ಪಿಎಸ್‌ಐ, ಸಿಇಟಿ ಹಗರಣವನ್ನು ಸಿಐಡಿಗೆ ವಹಿಸಿದ್ದು ನನ್ನ ಸರ್ಕಾರ, ಹಗರಣದಲ್ಲಿ ಎಡಿಜಿಪಿ ಸೇರಿದಂತೆ ಅಧಿಕಾರಿಗಳನ್ನು ಬಂಧಿಸಿದ್ದು ನನ್ನ ಸರ್ಕಾರ, ಶಿಕ್ಷಕರ ನೇಮಕಾತಿ ಹಗರಣದಲ್ಲಿ ಆಗಿನ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಏನು ಮಾಡಿದೆ. ಕೆಲವರನ್ನು ರಕ್ಷಿಸಲಿಲ್ಲವೇ ಎಂದು ಬೊಮ್ಮಾಯಿ ಪ್ರಶ್ನಿಸಿದರು. ಇನ್ನು ಕಾಂಗ್ರೆಸ್ ಪಕ್ಷವನ್ನು ಮುಳುಗುವ ದೋಣಿ ಎಂದು ಹೋಲಿಸಿದ ಅವರು, ಅನೇಕ ನಾಯಕರು ಬಿಜೆಪಿ ಸೇರಲು ಕಾಯುತ್ತಿದ್ದಾರೆ ಎಂದರು.

ಸಾಧನೆಗಳು
ನನ್ನ ಸರ್ಕಾರವು ರೈತರು, ರೈತರ ಮಕ್ಕಳು ಮತ್ತು ನೇಕಾರರು, ಬಡಗಿಗಳು ಮುಂತಾದ ಹಲವಾರು ವರ್ಗದ ಜನರಿಗೆ ಅನೇಕ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದೆ. ನಾನು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರ ಹಾದಿಯಲ್ಲಿ ನಡೆಯುತ್ತಿದ್ದೇನೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com