ಅರಮನೆ ಆವರಣದಲ್ಲಿ ಗಂಡು ಮರಿಗೆ ಜನ್ಮ ನೀಡಿದ ದಸರಾ ಆನೆ: 'ಲಕ್ಷ್ಮಿ' ಗರ್ಭಿಣಿ ಎಂಬುದು ಯಾರಿಗು ಗೊತ್ತೇ ಇರಲಿಲ್ಲ!

ದಸರಾ ಜಂಬೂ ಸವಾರಿಗೆ ತರಬೇತಿ ನೀಡುತ್ತಿರುವ 14 ಆನೆಗಳ ಪೈಕಿ 21 ವರ್ಷದ ಆನೆ ಲಕ್ಷ್ಮಿ ಮೊನ್ನೆ ಮಂಗಳವಾರ ರಾತ್ರಿ ಆರೋಗ್ಯವಂತ ಮರಿ ಆನೆಗೆ ಜನ್ಮ ನೀಡಿದೆ. ಮೈಸೂರು ಅರಮನೆ ಆವರಣದಲ್ಲಿ ಹೆರಿಗೆಯಾದ ಲಕ್ಷ್ಮಿ ಗರ್ಭಿಣಿ ಎಂಬುದು ರಣ್ಯ ಇಲಾಖೆ ಅಧಿಕಾರಿಗಳು, ಪಶುವೈದ್ಯರು ಅಥವಾ ಮಾವುತರಿಗೆ ಗೊತ್ತೇ ಇರಲಿಲ್ಲ ಎಂಬುದು ಅಚ್ಚರಿಯ ಸಂಗತಿ. 
ಗಂಡು ಮರಿ ಆನೆಗೆ ಜನ್ಮ ನೀಡಿದ ಲಕ್ಷ್ಮಿ
ಗಂಡು ಮರಿ ಆನೆಗೆ ಜನ್ಮ ನೀಡಿದ ಲಕ್ಷ್ಮಿ

ಮೈಸೂರು: ದಸರಾ ಜಂಬೂ ಸವಾರಿಗೆ ತರಬೇತಿ ನೀಡುತ್ತಿರುವ 14 ಆನೆಗಳ ಪೈಕಿ 21 ವರ್ಷದ ಆನೆ ಲಕ್ಷ್ಮಿ ಮೊನ್ನೆ ಮಂಗಳವಾರ ರಾತ್ರಿ ಆರೋಗ್ಯವಂತ ಮರಿ ಆನೆಗೆ ಜನ್ಮ ನೀಡಿದೆ. ಮೈಸೂರು ಅರಮನೆ ಆವರಣದಲ್ಲಿ ಹೆರಿಗೆಯಾದ ಲಕ್ಷ್ಮಿ ಗರ್ಭಿಣಿ ಎಂಬುದು ರಣ್ಯ ಇಲಾಖೆ ಅಧಿಕಾರಿಗಳು, ಪಶುವೈದ್ಯರು ಅಥವಾ ಮಾವುತರಿಗೆ ಗೊತ್ತೇ ಇರಲಿಲ್ಲ ಎಂಬುದು ಅಚ್ಚರಿಯ ಸಂಗತಿ. 

ಮೈಸೂರಿನಲ್ಲಿ ದಸರಾ ಜಂಬೂ ಸವಾರಿಗಾಗಿ ತರಬೇತಿ ನೀಡಲಾಗುತ್ತಿರುವ 14 ಆನೆಗಳಿಗೆ ಹೆಚ್ಚಿನ ಆರೈಕೆ ಮತ್ತು ಪೋಷಣೆಯನ್ನು ನೀಡಲಾಗಿದ್ದರೂ, ಅರಣ್ಯ ಅಧಿಕಾರಿಗಳು, ಪಶುವೈದ್ಯರು ಮತ್ತು ಮಾವುತರು ಅವುಗಳಲ್ಲಿ ಒಂದು ತುಂಬು ಗರ್ಭಿಣಿ ಎಂದು ತಿಳಿದುಕೊಳ್ಳುವಲ್ಲಿ ವಿಫಲರಾಗಿದ್ದರು. 2017 ರಲ್ಲಿ ಮೊದಲ ಬಾರಿಗೆ ದಸರಾಗೆ ಲಕ್ಷ್ಮಿಯನ್ನು ಕರೆತರಲಾಯಿತು, ಆ ಸಮಯದಲ್ಲಿ ಫಿರಂಗಿ ಗುಂಡು ಹಾರಿಸುವಾಗ ಭೀತಿಗೊಳಗಾಗಿದ್ದರಿಂದ ಜಂಬೂ ಸವಾರಿ ಮೆರವಣಿಗೆಯಿಂದ ಹೊರಗಿಡಲಾಗಿತ್ತು. 

ಅಕ್ಟೋಬರ್ ತಿಂಗಳಲ್ಲಿ  ನಡೆಯಲಿರುವ ವಿಶ್ವಪ್ರಸಿದ್ಧ ದಸರಾ ಕಾರ್ಯಕ್ರಮಕ್ಕೆ ಮುಂಚಿತವಾಗಿ ಈ ಆನೆಗಳಿಗೆ ಸಾಕಷ್ಟು ಪ್ರಚಾರ, ಪೋಷಣೆ ಮತ್ತು ವೈದ್ಯಕೀಯ ಆರೈಕೆಯನ್ನು ನೀಡಿದ್ದರೂ ಸಹ ಲಕ್ಷ್ಮಿಯ ಗರ್ಭಧಾರಣೆ ಪತ್ತೆಯಾಗದಿರುವುದು ಸೋಜಿಗದ ಸಂಗತಿ. ಇವುಗಳ ತರಬೇತಿಗಾಗಿ ಒಂಬತ್ತು ಜಂಬೋಸ್‌ಗಳ ಮೊದಲ ಬ್ಯಾಚ್‌ನಲ್ಲಿ ಲಕ್ಷ್ಮಿಯನ್ನು ಆಗಸ್ಟ್ 7 ರಿಂದ ಮೈಸೂರಿಗೆ ಕರೆತರಲಾಗಿತ್ತು. ಇದೀಗ ನಿರ್ಲಕ್ಷ್ಯ ತೋರಿಸಿದ ಮಾವುತರನ್ನು ಅಧಿಕಾರಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. 

ಮೊನ್ನೆ ಮಂಗಳವಾರ ಮಧ್ಯಾಹ್ನ 12.30 ರ ಸುಮಾರಿಗೆ ಮಾವುತರು ಮತ್ತು ಕಾವಾಡಿಗಳು ಲಕ್ಷ್ಮಿಯ ವರ್ತನೆಯಲ್ಲಿ ಬದಲಾವಣೆಗಳನ್ನು ಗಮನಿಸಿದರು, ಅಸ್ವಸ್ಥತೆ ತೋರಿಸಿತ್ತು. ಅರಣ್ಯಾಧಿಕಾರಿಗಳು ಹಾಗೂ ಪಶು ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ ಅವರು ಸ್ಥಳಕ್ಕೆ ಧಾವಿಸಿ ವೈದ್ಯಕೀಯ ತಪಾಸಣೆ ನಡೆಸಿದರು. ಆಗ ಲಕ್ಷ್ಮಿ ಗರ್ಭಿಣಿಯಾಗಿರಬಹುದು ಹೆರಿಗೆ ನೋವಿನಿಂದ ಬಳಲುತ್ತಿರಬಹುದು ಎಂದು ಗೊತ್ತಾಯಿತು.

ಅರಣ್ಯಾಧಿಕಾರಿಗಳು ಲಕ್ಷ್ಮಿಯ ಮೂತ್ರ ಮತ್ತು ಮಲದ ಮಾದರಿಗಳನ್ನು ಸಂಗ್ರಹಿಸಿ ಹೈದರಾಬಾದ್‌ನಲ್ಲಿರುವ ಲ್ಯಾಬ್‌ಗೆ ಗರ್ಭಧಾರಣೆಯ ಪತ್ತೆಗೆ ಕಳುಹಿಸಿದರು. ಇದೇ ವೇಳೆ ಮೈಸೂರು ಅರಮನೆಯ ಬ್ರಹ್ಮಪುರಿ ಗೇಟ್ ಬಳಿ ಇರುವ ಪ್ರತ್ಯೇಕ ಆವರಣಕ್ಕೆ ಆನೆಯನ್ನು ಸ್ಥಳಾಂತರಿಸಿ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸುವ ಮೂಲಕ ಆಕೆಯ ಆರೋಗ್ಯ ಮತ್ತು ನಡವಳಿಕೆಯ ಮೇಲೆ ನಿಗಾ ಇರಿಸಿದರು.

ಅದೇ ದಿನ ರಾತ್ರಿ 8.10ರ ಸುಮಾರಿಗೆ ಲಕ್ಷ್ಮಿ ಆರೋಗ್ಯವಂತ ಮರಿ ಆನೆಗೆ ಜನ್ಮ ನೀಡಿದ್ದಾಳೆ. ಉಪ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ವಿ ಕರಿಕಾಳನ್, ಪಶುವೈದ್ಯ ಮುಜೀಬ್-ಉರ್-ರೆಹಮಾನ್ ಮತ್ತು ವಲಯ ಅರಣ್ಯಾಧಿಕಾರಿ ಸಂತೋಷ್ ಹೂಗಾರ್ ಸೇರಿದಂತೆ ಸಿಬ್ಬಂದಿ, ಮಾವುತರು ಮತ್ತು ಕಾವಾಡಿಗಳು ಹೆರಿಗೆ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

ಕಾರ್ಯಕರ್ತರ ಆಕ್ರೋಶ: ಮೈಸೂರಿನ ಮಾಜಿ ವನ್ಯಜೀವಿ ವಾರ್ಡನ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಿಬ್ಬಂದಿ ಜೊತೆಗೆ ಮಾತನಾಡುತ್ತಾ, ಈ ಸಂದರ್ಭದಲ್ಲಿ, ಲಕ್ಷ್ಮಿಯನ್ನು ನಿರ್ವಹಿಸಿದ ಮಾವುತ ಮತ್ತು ಕಾವಾಡಿ ಇಬ್ಬರೂ ಗರ್ಭಧಾರಣೆಯನ್ನು ಪತ್ತೆಹಚ್ಚುವಲ್ಲಿ ತೀವ್ರ ನಿರ್ಲಕ್ಷ್ಯವನ್ನು ತೋರಿಸಿದ್ದಾರೆ. ದಸರಾ ಮೆರವಣಿಗೆಗೆ  ಆಯ್ಕೆ ಮಾಡುವ ಮೊದಲು ತಪಾಸಣೆಯ ಸಮಯದಲ್ಲಿ ಅದರ ಗರ್ಭಾವಸ್ಥೆಯ ಸ್ಥಿತಿಯನ್ನು ಕಂಡುಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ವಿಫಲರಾಗಿದ್ದಾರೆ ಎಂದು ಅವರು ಹೇಳಿದರು. ಪ್ರಾಣಿ ಸಂರಕ್ಷಣಾ ಕಾರ್ಯಕರ್ತೆ ಭಾಗ್ಯಲಕ್ಷ್ಮಿ, ಗರ್ಭಿಣಿ ಆನೆ ಫಿರಂಗಿ ಫೈರಿಂಗ್ ಡ್ರಿಲ್ ವೇಳೆ ತೀವ್ರ ಒತ್ತಡಕ್ಕೆ ಒಳಗಾಗಿತ್ತು. ಪಶುವೈದ್ಯರು ಆನೆಯಲ್ಲಿ ಗರ್ಭಧಾರಣೆಯನ್ನು ಪತ್ತೆಹಚ್ಚಲು ಏಕೆ ವಿಫಲರಾದರು ಎಂದು ತಿಳಿಯುತ್ತಿಲ್ಲ ಎಂದರು.

ಮೈಸೂರು ಅರಮನೆ ಮಂಡಳಿಯು ಮರಿ ಆನೆಗೆ  ‘ಗಣಪತಿ’ ಎಂದು ನಾಮಕರಣ ಮಾಡಲು ಚಿಂತನೆ ನಡೆಸುತ್ತಿದ್ದು, ಕಾರ್ಪೊರೇಟರ್ ಲೋಕೇಶ್ ಮತ್ತು ಕೆಲವು ಸಂಘ ಸಂಸ್ಥೆಗಳು ಮೈಸೂರು ರಾಜಮನೆತನದ ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಹೆಸರನ್ನು ‘ಶ್ರೀಕಂಠದತ್ತ’ ಎಂದು ನಾಮಕರಣ ಮಾಡುವಂತೆ ಒತ್ತಾಯಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com