ಪಿಎಫ್ಐ ಸಂಘಟನೆ ಬ್ಯಾನ್ ಮಾಡಿದ್ದೇಕೆ?: ಗೃಹ ಸಚಿವಾಲಯ ಹೊರಡಿಸಿರುವ ಗೆಜೆಟ್ ಅಧಿಸೂಚನೆಯಲ್ಲಿ ಏನಿದೆ?

ಭಯೋತ್ಪಾದಕ ಚಟುವಟಿಕೆಗಳು ಮತ್ತು ಇತರ ನಿಷೇಧಿತ ಭಯೋತ್ಪಾದಕ ಸಂಘಟನೆಗಳಾದ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (ಸಿಮಿ), ಜಮಾತ್-ಉಲ್‌ನೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಕೇಂದ್ರ ಸರ್ಕಾರವು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (UAPA act), 1967 ರ ಅಡಿಯಲ್ಲಿ ಐದು ವರ್ಷಗಳ ಕಾಲ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಿದೆ.
ಪಿಎಫ್ಐ ಧ್ವಜ
ಪಿಎಫ್ಐ ಧ್ವಜ

ಬೆಂಗಳೂರು: ಭಯೋತ್ಪಾದಕ ಚಟುವಟಿಕೆಗಳು ಮತ್ತು ಇತರ ನಿಷೇಧಿತ ಭಯೋತ್ಪಾದಕ ಸಂಘಟನೆಗಳಾದ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (ಸಿಮಿ), ಜಮಾತ್-ಉಲ್‌ನೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಕೇಂದ್ರ ಸರ್ಕಾರವು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (UAPA act), 1967 ರ ಅಡಿಯಲ್ಲಿ ಐದು ವರ್ಷಗಳ ಕಾಲ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಿದೆ.

ಪಿಎಫ್ಐ ಮುಜಾಹಿದೀನ್-ಬಾಂಗ್ಲಾದೇಶ (JMB) ಮತ್ತು ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ & ಸಿರಿಯಾ (ISIS) ಸಂಘಟನೆಗಳ ಜೊತೆ ಸಂಪರ್ಕ ಹೊಂದಿರುವ ಆರೋಪವಿದೆ.  ಯುಎಪಿಎ ಅಡಿಯಲ್ಲಿ ನಿಷೇಧಿಸಲಾದ ಇತರ ಸಂಘಟನೆಗಳೆಂದರೆ ರಿಹ್ಯಾಬ್ ಇಂಡಿಯಾ ಫೌಂಡೇಶನ್ (RIF), ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (CF), ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ (AIIC), ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್ (NCHRO), ನ್ಯಾಷನಲ್ ವುಮೆನ್ಸ್ ಫ್ರಂಟ್ ಮತ್ತು ಜೂನಿಯರ್ ಫ್ರಂಟ್ ಸಂಘಟನೆಗಳಾಗಿವೆ. 

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ(MHA) ಹೊರಡಿಸಿರುವ ಗೆಜೆಟ್ ಅಧಿಸೂಚನೆಯಲ್ಲಿ ಪಿಎಫ್‌ಐ ಸಂಘಟನೆ ಕೇರಳ ಮತ್ತು ಕರ್ನಾಟಕದಿಂದ ತಲಾ ನಾಲ್ಕು ಬಲಪಂಥೀಯ ಸದಸ್ಯರನ್ನು ಕೊಲೆ ಮಾಡಿದೆ ಎಂದು ಉಲ್ಲೇಖಿಸಲಾಗಿದೆ. ಉತ್ತರ ಪ್ರದೇಶ, ಕರ್ನಾಟಕ ಮತ್ತು ಗುಜರಾತ್ ರಾಜ್ಯ ಸರ್ಕಾರಗಳು ಪಿಎಫ್‌ಐ ನ್ನು ನಿಷೇಧಿಸಲು ಶಿಫಾರಸು ಮಾಡಿದೆ ಎಂದು ಗೆಜೆಟ್ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಕರ್ನಾಟಕದಲ್ಲಿ, ಆರೆಸ್ಸೆಸ್ ಕಾರ್ಯಕರ್ತರಾದ ರುದ್ರೇಶ್ ಅವರು 2016 ರ ಅಕ್ಟೋಬರ್‌ನಲ್ಲಿ ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ವ್ಯಾಪ್ತಿಯ ಕಾಮರಾಜ್ ರಸ್ತೆಯಲ್ಲಿ 'ಪಥ ಸಂಚಲನ' ಕಾರ್ಯಕ್ರಮದಿಂದ ಹಿಂತಿರುಗುತ್ತಿದ್ದಾಗ ಹಾಡಹಗಲೇ ಕೊಲೆಯಾಗಿದ್ದರು. ಪ್ರಕರಣದ ಆರಂಭದಲ್ಲಿ ನಗರ ಪೊಲೀಸರು ತನಿಖೆ ನಡೆಸಿದ್ದು, ಐವರು ಆರೋಪಿಗಳಾದ ಇರ್ಫಾನ್ ಪಾಷಾ (ಎ-1), ವಸೀಮ್ ಅಹ್ಮದ್ ಅಲಿಯಾಸ್ ವಾಸಿಂ (ಎ-2), ಮೊಹಮ್ಮದ್ ಸಾದಿಕ್ ಅಲಿಯಾಸ್ ಮೊಹಮ್ಮದ್ ಮಜರ್ ಅಲಿಯಾಸ್ ಮಜರ್ (ಎ-3), ಮೊಹಮ್ಮದ್ ಅವರನ್ನು ಬಂಧಿಸಲಾಗಿದೆ.

ನಂತರ ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸಲಾಯಿತು, ಎನ್ಐಎ ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದು, ಐವರು ಆರೋಪಿಗಳು ಪಿಎಫ್‌ಐ ಮತ್ತು ಅದರ ಅಂಗಸಂಸ್ಥೆ ಸಂಘಟನೆಯಾದ ಎಸ್‌ಡಿಪಿಐ ಸದಸ್ಯರು ಎಂದು ಉಲ್ಲೇಖಿಸಿದೆ. ಆರೋಪಿಗಳು ರುದ್ರೇಶ್ ಅವರನ್ನು ಗುರಿಯಾಗಿಸಿಕೊಂಡು “ಸಮಾಜದ ಒಂದು ವರ್ಗದ ಜನರಲ್ಲಿ ಭೀತಿ ಹುಟ್ಟಿಸಲು ಯತ್ನಿಸುತ್ತಿದೆ' ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ. ಈ ಹತ್ಯೆಯು ಜನರ ಮನಸ್ಸಿನಲ್ಲಿ ಭಯವನ್ನು ಹುಟ್ಟುಹಾಕುವ ಉದ್ದೇಶದಿಂದ ಭಯೋತ್ಪಾದನೆಯ ಸ್ಪಷ್ಟ ಕೃತ್ಯವಾಗಿದೆ ಮತ್ತು ಭಾರತದಲ್ಲಿ ಇಸ್ಲಾಮಿಕ್ ಧರ್ಮವನ್ನು ಸ್ಥಾಪಿಸುವ ಉದ್ದೇಶವಾಗಿದೆ ಎಂದು ಹೇಳಲಾಗಿದೆ. 

MHA ಉಲ್ಲೇಖಿಸಿರುವ ಕರ್ನಾಟಕದ ಎರಡನೇ ಕೊಲೆ ಪ್ರಕರಣವು RSS ಕಾರ್ಯಕರ್ತ ಮತ್ತು ಆಟೋರಿಕ್ಷಾ ಚಾಲಕ ಪ್ರವೀಣ್ ಪೂಜಾರಿ ಆಗಸ್ಟ್ 2016 ರಲ್ಲಿ ಕೊಡಗು ಜಿಲ್ಲೆಯಲ್ಲಿ ನಡೆದಿತ್ತು. ಪೊಲೀಸರು ಅಂದಿನ ಪಿಎಫ್‌ಐ ಜಿಲ್ಲಾ ಕಾರ್ಯದರ್ಶಿ ಟಿ.ಎ.ಹರೀಸ್, ಪಿಎಫ್‌ಐ ಕಾರ್ಯಕರ್ತರಾದ ಎಂ.ಎಚ್.ತುಫೈಲ್, ನಯಾಜ್, ಮೊಹಮ್ಮದ್ ಮುಸ್ತಫಾ, ಮುಜೀಬ್ ರೆಹಮಾನ್ ಮತ್ತು ಇರ್ಫಾನ್ ಅಹ್ಮದ್ ಸೇರಿದಂತೆ ಇತರರನ್ನು ಬಂಧಿಸಿದ್ದರು. ಮೂರನೇ ಕೊಲೆ ಪ್ರಕರಣ ಆರ್‌ಎಸ್‌ಎಸ್ ಕಾರ್ಯಕರ್ತ ಶರತ್ ಮಡಿವಾಳ 2017ರ ಜುಲೈ 7ರಂದು ಮಂಗಳೂರಿನಲ್ಲಿ ನಡೆದಿತ್ತು. ಪಿಎಫ್‌ಐ ಸದಸ್ಯನಾಗಿದ್ದ ಪ್ರಮುಖ ಆರೋಪಿ ಮೊಹಮ್ಮದ್ ಶರೀಫ್ ಸೇರಿದಂತೆ 17 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

ಕರ್ನಾಟಕದ ನಾಲ್ಕನೇ ಮತ್ತು ತೀರಾ ಇತ್ತೀಚಿನ ಕೊಲೆ ಪ್ರಕರಣ, ಇದರಲ್ಲಿ PFI ಭಾಗಿಯಾಗಿದೆ ಎಂದು ಹೇಳಲಾಗಿದ್ದು, ಜುಲೈ 26, 2022 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣವಾಗಿದೆ. ಪ್ರಕರಣದ ತನಿಖೆಯನ್ನು ರಾಜ್ಯ ಪೊಲೀಸರು ನಡೆಸಿದ್ದರು. ನಂತರ ಹೆಚ್ಚಿನ ತನಿಖೆಗೆ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಲಾಯಿತು. ಕರ್ನಾಟಕ ಪೊಲೀಸರು 10 ಆರೋಪಿಗಳನ್ನು ಬಂಧಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com