ಬೆಂಗಳೂರು: ತಬಸ್ಸುಮ್ ಶೇಕ್, ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 600ಕ್ಕೆ 593 ಅಂಕ ಗಳಿಸಿ ರಾಜ್ಯಕ್ಕೆ ಅಗ್ರಸ್ಥಾನ ಪಡೆದಿರುವ ವಿದ್ಯಾರ್ಥಿನಿ, ತನ್ನ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟದಲ್ಲಿ ಹಿಜಾಬ್ ವಿರುದ್ಧ ಹೋರಾಟ ನಡೆಸಿ ಈ ಯಶಸ್ಸು ಸಿಕ್ಕಿತು ಎಂದು ಸ್ಮರಿಸಿಕೊಳ್ಳುತ್ತಿದ್ದಾಳೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ನೊಂದಿಗೆ ಮಾತನಾಡಿದ ಬೆಂಗಳೂರಿನ ಎನ್ಎಂಕೆಆರ್ವಿ ಪಿಯು ಕಾಲೇಜಿನ ತಬಸ್ಸುಮ್, ನನ್ನ ಸಾಧನೆ ಬಗ್ಗೆ ಹೆಮ್ಮೆಯೆನಿಸುತ್ತಿದೆ, ಆದರೆ ಹಿಜಾಬ್ ಧರಿಸಿ ಸಾಧನೆಯನ್ನು ಬಿಂಬಿಸಲು ಸಾಧ್ಯವಾಗಲಿಲ್ಲ ಎಂದು ವಿಷಾದವಾಗುತ್ತಿದೆ ಎಂದಿದ್ದಾರೆ. ನನ್ನ ಪಿಯುಸಿ ಮೊದಲ ವರ್ಷ ಸುಗಮವಾಗಿ ಸಾಗಿತ್ತು. ವರ್ಷದ ಅಂತ್ಯದ ವೇಳೆಗೆ ಬಹಳಷ್ಟು ತೊಂದರೆಗಳು ಮತ್ತು ಅನಿಶ್ಚಿತತೆಗಳು ಇದ್ದವು. ಹಿಜಾಬ್ ಮತ್ತು ಬುರ್ಖಾ ಧರಿಸಿ ಕಾಲೇಜಿಗೆ ಹೋಗಲು ಸಾಧ್ಯವಾಗಲಿಲ್ಲ ಎಂಬ ಬೇಸರವಿದೆಯಂತೆ.
ಹಿಜಾಬ್ ತೆಗೆಯಲು ಮನಸ್ಸಾಗುತ್ತಿರಲಿಲ್ಲ. ಆದರೆ ನಂತರ ತರಗತಿಯೊಳಗೆ ಹಿಜಾಬ್ ಧರಿಸಿಕೊಂಡು ಹೋಗಬಾರದು ಎಂಬ ನಿಯಮ ಬಂತು. ಪಾಲಿಸಲೇಬೇಕಾಯಿತು ಎನ್ನುತ್ತಾರೆ.
ಈಕೆಯ ತಂದೆ ಅಬ್ದುಲ್ ಖೌಮ್ ಶೇಕ್, ಎಲೆಕ್ಟ್ರಿಕಲ್ ಇಂಜಿನಿಯರ್ ಮತ್ತು ತಾಯಿ ಪರ್ವೀನ್ ಮೋದಿ ಗೃಹಿಣಿ. ಹಿಜಾಬ್ ವಿವಾದವು ಭುಗಿಲೆದ್ದಾಗ ನಾನು ನನ್ನ ಧರ್ಮ ಮತ್ತು ಶಿಕ್ಷಣದ ನಡುವೆ ಆಯ್ಕೆ ಮಾಡಬೇಕಾಯಿತು. ಇದು ನನ್ನ ಗುರುತು ಮತ್ತು ಧರ್ಮದ ಅವಿಭಾಜ್ಯ ಅಂಗವಾಗಿದೆ, ಹೆಸರಿಗೆ ಜಾತ್ಯತೀತ ದೇಶ, ಆದರೆ ಇಲ್ಲಿ ಕೆಲವೊಂದು ತರ್ಕಬದ್ಧವಲ್ಲದ ವಾದಗಳಿವೆ. ಹಿಜಾಬ್ ವಿವಾದ ಭುಗಿಲೆದ್ದ ಸಮಯದಲ್ಲಿ ಕಾಲೇಜಿಗೆ ಹೋಗುತ್ತಿರಲಿಲ್ಲ ಎನ್ನುತ್ತಾಳೆ ತಬಸ್ಸುಮ್.
ಹಿಜಾಬ್ ವಿವಾದದಿಂದಾಗಿ ಅನೇಕ ಹೆಣ್ಣು ಮಕ್ಕಳು ಕಾಲೇಜಿನಿಂದ ಹೊರಗುಳಿದಿದ್ದಾರೆ, ಕರೆಸ್ಪಾಂಡೆನ್ಸ್ ಕೋರ್ಸ್ ತೆಗೆದುಕೊಳ್ಳಲು ಅಥವಾ ಮುಕ್ತ ವಿವಿಗಳನ್ನು ಸೇರುತ್ತಿದ್ದಾರೆ ಎಂದು ಅವರು ಹೇಳಿದರು. “ನನ್ನ ಶಿಕ್ಷಣವನ್ನು ಮುಂದುವರಿಸುವುದು ಮುಖ್ಯ ಎಂದು ನನ್ನ ಪೋಷಕರು ನನಗೆ ವಿವರಿಸಿದರು. ನಾನು ಕಷ್ಟಪಟ್ಟು ಓದಿದರೆ, ಈ ಅನ್ಯಾಯದ ವಿರುದ್ಧ ಏನಾದರೂ ಮಾಡಬಹುದು ಎನ್ನುತ್ತಾಳೆ ತಬಸ್ಸುಮ್.
ಹಿಜಾಬ್ ಇಲ್ಲದೆ ಕಾಲೇಜಿಗೆ ಹೋಗುತ್ತಿದ್ದಾಗ ನನಗೆ ಮುಜುಗರವಾಗುತ್ತಿದ್ದಾಗ, ಸಮಸ್ಯೆಯಾಗುತ್ತಿದ್ದಾಗ ಸ್ನೇಹಿತರು ಸಹಾಯ ಮಾಡುತ್ತಿದ್ದರು ಎನ್ನುತ್ತಾಳೆ.
ಮನಃಶಾಸ್ತ್ರದಲ್ಲಿ ಪದವಿ ಮುಂದುವರಿಸಲು ತಬಸ್ಸುಮ್ ಈಗಾಗಲೇ ಆರ್ವಿ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದಿದ್ದಾಳೆ. ನಾನು ಮನೋವಿಜ್ಞಾನವನ್ನು ಅಧ್ಯಯನ ಮಾಡಿ ಮಾನಸಿಕ ಆರೋಗ್ಯದಲ್ಲಿ ವೃತ್ತಿಯನ್ನು ಮಾಡಲು ಬಯಸುತ್ತೇನೆ. ನನ್ನ ಪದವಿ ನಂತರ, ಸ್ನಾತಕೋತ್ತರ ಪದವಿಯನ್ನು ಮುಂದುವರಿಸಲು ಬಯಸುತ್ತೇನೆ, ಕ್ಲಿನಿಕಲ್ ಸೈಕಾಲಜಿಯಲ್ಲಿ ಪರಿಣತಿ ಹೊಂದಲು ಬಯಸುತ್ತೇನೆ ಎನ್ನುವ ತಬಸ್ಸುಮ್ ಅಣ್ಣ ಎಂ ಟೆಕ್ ಪದವಿ ಗಳಿಸುತ್ತಿದ್ದಾರೆ.
Advertisement