ಡಾ. ವಿವೇಕ್ ಮೂರ್ತಿ ಅವರ ಕನಸಿನ 'ಮದರ್ ಆಫ್ ಅರ್ಥ್' ಪ್ರಾಜೆಕ್ಟ್ ಮಂಡ್ಯದಲ್ಲಿ ನಿರ್ಮಾಣ!

ಅಮೆರಿಕಾದ ಪ್ರಸಿದ್ಧ ಸರ್ಜನ್ ಜನರಲ್ ವಿವೇಕ್ ಮೂರ್ತಿ ಅವರ ಕುಟುಂಬವು ಮಂಡ್ಯ ಜಿಲ್ಲೆಯ ಹಲ್ಲೇಗೆರೆ ಗ್ರಾಮದಲ್ಲಿ ಆಧ್ಯಾತ್ಮಿಕ ಕೇಂದ್ರವಾದ "ಭೂಮಿ ತಾಯಿ" ನಿರ್ಮಿಸುವ ಯೋಜನೆಯನ್ನು ರೂಪಿಸಿದೆ.
ಡಾ.ವಿವೇಕ್ ಮೂರ್ತಿ
ಡಾ.ವಿವೇಕ್ ಮೂರ್ತಿ

ಬೆಂಗಳೂರು: ಅಮೆರಿಕಾದ ಪ್ರಸಿದ್ಥ ಸರ್ಜನ್ ಜನರಲ್ ವಿವೇಕ್ ಮೂರ್ತಿ ಅವರ ಕುಟುಂಬವು ಮಂಡ್ಯ ಜಿಲ್ಲೆಯ ಹಲ್ಲೇಗೆರೆ ಗ್ರಾಮದಲ್ಲಿ ಆಧ್ಯಾತ್ಮಿಕ ಕೇಂದ್ರವಾದ "ಭೂಮಿ ತಾಯಿ" ನಿರ್ಮಿಸುವ ಯೋಜನೆಯನ್ನು ರೂಪಿಸಿದೆ.

ಏಕತೆಯ ಸಂಕೇತ ಎಂದು ಕರೆಯಲಾಗುವ ಈ ಯೋಜನೆಯು ಪ್ರಪಂಚದಲ್ಲೇ ಮೊದಲನೆಯದಾಗಿದೆ, ಏಕೆಂದರೆ ಜಗತ್ತಿನ ಯಾವುದೇ ಭಾಗದಿಂದ ಯಾವುದೇ ವ್ಯಕ್ತಿ ಇದರೊಂದಿಗೆ ಸಂಪರ್ಕ ಸಾಧಿಸಬಹುದು ಮತ್ತು ಸಂಬಂಧ ಹೊಂದಬಹುದಾಗಿದೆ. 70 ಕೋಟಿ ವೆಚ್ಚದಲ್ಲಿ 12 ಎಕರೆ ಭೂಮಿಯಲ್ಲಿ ಮದರ್ ಆಫ್ ಅರ್ಥ್ ನಿರ್ಮಾಣವಾಗಲಿದೆ.

ಸ್ಕೋಪ್ ಫೌಂಡೇಶನ್‌ನಿಂದ ಧನಸಹಾಯ ಪಡೆದ ಈ ಪ್ರಾಜೆಕ್ಟ್ ನಲ್ಲಿ 11 ಅಡಿ ಎತ್ತರದ "ಮದರ್ ಆಫ್ ಅರ್ಥ್" ಪ್ರತಿಮೆಯನ್ನು ಒಂದೇ ಬಂಡೆಯಿಂದ ಕೆತ್ತಲಾಗುತ್ತದೆ. ನೀರು ಮತ್ತು ಅಲೆಗಳ ಚಿಹ್ನೆಗಳಿರುತ್ತವೆ, ಇದನ್ನು ನೀಲಿ ಗ್ರಾನೈಟ್ ಮತ್ತು ವೈಟ್ ಸ್ಟೋನ್ ನಿಂದ ನಿರ್ಮಾಣ ಮಾಡಲಾಗುವುದು ಎಂದು ವಿವರಿಸಿದ್ದಾರೆ.

ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಕೆತ್ತಿದ್ದ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರನ್ನು ಸಂಪರ್ಕಿಸಿರುವ ಡಾ. ವಿವೇಕ್ ಮೂರ್ತಿ ಅವರ ತಂದೆ ಲಕ್ಷಿ ನರಸಿಂಹ ಮೂರ್ತಿ ಈ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡುವ ಸಂಬಂಧ ಚರ್ಚಿಸಿದ್ದಾರೆ.

ಯೋಜನೆಯನ್ನು ಕಾರ್ಯಗತಗೊಳಿಸಲು ಪ್ರಮುಖ ವಾಸ್ತುಶಿಲ್ಪಿಗಳು ಮತ್ತು ವಿನ್ಯಾಸಕಾರರನ್ನು ಸಹ ಸಂಪರ್ಕಿಸಲಾಗಿದೆ. ಈ ಆಧ್ಯಾತ್ಮಿಕ ಕೇಂದ್ರದಲ್ಲಿ ಸಾಕ್ರಟೀಸ್‌ನಿಂದ ಸ್ವಾಮಿ ವಿವೇಕಾನಂದರವರೆಗಿನ 64 ದಾರ್ಶನಿಕರ ಪ್ರತಿಮೆಗಳು ಇರಲಿವೆ ಎಂದು ಮಾಹಿತಿ ನೀಡಿದ್ದಾರೆ.

13 ದೇಶಗಳಲ್ಲಿರುವ ಪ್ರತಿಷ್ಠಾನದ ಸ್ವಯಂಸೇವಕರೊಂದಿಗೆ ನರಸಿಂಹ ಮೂರ್ತಿ ಸಭೆ ನಡೆಸಿದ್ದಾರೆ.  ಡಿಸೆಂಬರ್ ಅಂತ್ಯದ ವೇಳೆಗೆ ನಡೆಯಲಿರುವ ಭೂಮಿಪೂಜೆ ಸಮಾರಂಭಕ್ಕೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಅವರ ಪತ್ನಿ ಮಿಚೆಲ್ ಒಬಾಮಾ ಅವರನ್ನು ಆಹ್ವಾನಿಸಲು ಅವರು ನಿರ್ಧರಿಸಿದ್ದಾರೆ.

ಎಂಟು ಎಕರೆ ಜಾಗದಲ್ಲಿ ನಿರ್ಮಾಣವಾಗಲಿರುವ ಯೋಗ ಮತ್ತು ಧ್ಯಾನ ಸಾತ್ವಿಕ ಕೇಂದ್ರದ ಶಂಕುಸ್ಥಾಪನೆಗೆ ಟಿಬೆಟಿಯನ್ ಆಧ್ಯಾತ್ಮಿಕ ಗುರು ದಲೈಲಾಮಾ ಅವರನ್ನು ಆಹ್ವಾನಿಸಲು ಪ್ರತಿಷ್ಠಾನವು ಯೋಜಿಸಿದೆ.

ಮದರ್ ಆಫ್ ಅರ್ಥ್ ಪರಿಕಲ್ಪನೆಯನ್ನು ಜನಪ್ರಿಯಗೊಳಿಸುವ ವಾಕಥಾನ್ ಕಾರ್ಯಕ್ರಮವನ್ನು ಯುಎಸ್ ನ ಪ್ರಥಮ ಮಹಿಳೆ ಜಿಲ್ ಬಿಡೆನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್  ಸೆಪ್ಟೆಂಬರ್ 10 ರಂದು ವಾಷಿಂಗ್ಟನ್ ಡಿಸಿಯಲ್ಲಿ ಉದ್ಘಾಟಿಸಲಿದ್ದಾರೆ. ವಿದೇಶದ ಬೇರೆ ಬೇರೆ ನಗರಗಳಲ್ಲಿಯೂ ಸಹ ಇದೇ ರೀತಿಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದು ನರಸಿಂಹ ಮೂರ್ತಿ ಮಾಹಿತಿ ನೀಡಿದ್ದಾರೆ.

ನಮ್ಮ ಕುಟುಂಬವು ಹಲವಾರು ಚಾರಿಟಿ ಚಟುವಟಿಕೆಗಳಿಗೆ ಹಣ ನೀಡಿದೆ. ಈಗ ಇಡೀ ಯೋಜನೆಗೆ ಸುಮಾರು 100 ಕೋಟಿ ರೂಪಾಯಿ ಬೇಕಾಗಿರುವುದರಿಂದ ನಾವು ಕೆಲವು ದಾನಿಗಳನ್ನು ಸಂಪರ್ಕಿಸಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com