ಬೆಂಗಳೂರು: ಜೀವನದಲ್ಲಿ ಒಂದ ಬಾರಿಯಾದರೂ ಕ್ಯಾಸಿನೋ ಆಡಬೇಕು ಎಂದು ಆಸೆ ಇಟ್ಟುಕೊಂಡಿದ್ದರು, ಅದರಂತೆ ಕ್ಯಾಸಿನೋ ಆಡಿ ಹಣ ಗೆದ್ದಿದ್ದಕ್ಕೆ ತಮ್ಮ ಅದೃಷ್ಟವನ್ನು ಶಪಿಸುತ್ತಿದ್ದಾರೆ.
32 ವರ್ಷದ ರಸ್ತೆ ಬದಿಯ ಟೀ ವ್ಯಾಪಾರಿ, ಟಿಎಂ ತಿಲಕ್ ಮಣಿಕಂಠ ತಮ್ಮ ಉಳಿತಾಯದ 4 ಲಕ್ಷ ಹಣವನ್ನು ಗೋವಾದ ಕ್ಯಾಸಿನೊದಲ್ಲಿ ಆಡಿ 25 ಲಕ್ಷ ರೂಪಾಯಿ ಗೆದ್ದಿದ್ದರು. ಆದರೆ ಈ ಸಂತೋಷ ಆತನಿಗೆ ಹೆಚ್ಚು ಸಮಯ ಉಳಿಯಲಿಲ್ಲ.
ಮಣಿಕಂಠ ಹಣ ಗೆದ್ದ ಸುದ್ದಿಯು ಅವರ ವಸತಿ ಪ್ರದೇಶವಾದ ತ್ಯಾಗರಾಜನಗರದ 6 ನೇ ಮೇನ್ನಲ್ಲಿ ಹರಡಿತು. ಈ ವಿಷಯ ತಿಳಿದ ವ್ಯಕ್ತಿಗಳ ಗುಂಪೊಂದು ಅವರನ್ನು ಅಪಹರಿಸಿ ಮಣಿಕಂಠನ ಫೋನ್ ಬಳಸಿ ತಮ್ಮ ಖಾತೆಗಳಿಗೆ 15 ಲಕ್ಷ ರೂ. ವರ್ಗಾವಣೆ ಮಾಡಿಕೊಂಡರು.
ನಂತರ ಆತನ ಮೊಬೈಲ್ ವಾಪಸ್ ನೀಡಿ, ಪೊಲೀಸರಿಗೆ ದೂರು ನೀಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿ ನಗರದ ಹೊರವಲಯದಲ್ಲಿ ಬಿಡುಗಡೆಗೊಳಿಸಿದರು. ಆಗಸ್ಟ್ 5ರ ಬೆಳಗ್ಗೆ 11ರಿಂದ ಆ.6 ರ ಬೆಳಗ್ಗೆ 8 ಗಂಟೆಯ ವರೆಗೆ ಈತ ನರಳಾಡಿದ್ದ. ಸಂಜೆ 5.10 ರ ಸುಮಾರಿಗೆ ಪೊಲೀಸರಿಗೆ ದೂರು ನೀಡಲಾಯಿತು.
ಮಣಿಕಂಠ ತನ್ನ ಸ್ನೇಹಿತರೊಂದಿಗೆ ಜುಲೈ 30 ರಂದು ಗೋವಾಕ್ಕೆ ಹೋಗಿದ್ದರು ಮತ್ತು ಪಣಜಿಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಸಂಕೀರ್ಣದ ಬಳಿಯ ಮಾಂಡೋವಿ ನದಿಯ ದಡದಲ್ಲಿರುವ ಮೆಜೆಸ್ಟಿಕ್ ಪ್ರೈಡ್ ಕ್ಯಾಸಿನೊಗೆ ಭೇಟಿ ನೀಡಿದರು.
25 ಲಕ್ಷ ಹಣವನ್ನು ಗೆದ್ದ ನಂತರ, ಅವರು ಆಗಸ್ಟ್ 4 ರಂದು ತಮ್ಮ ಸ್ನೇಹಿತರೊಂದಿಗೆ ಬೆಂಗಳೂರಿಗೆ ಮರಳಿದರು. ಮರುದಿನ ಬೆಳಿಗ್ಗೆ ಹನುಮಂತನಗರದ ಬೇಕರಿಯೊಂದರ ಮುಂದೆ ನಿಂತಿದ್ದಾಗ, ಕಾರಿನಲ್ಲಿ ಬಂದ ಗುಂಪೊಂದು ಆತನನ್ನು ಜ್ಞಾನಭಾರತಿ ಕ್ಯಾಂಪಸ್ ಬಳಿಯ ಪ್ರತ್ಯೇಕ ಸ್ಥಳಕ್ಕೆ ಬಲವಂತವಾಗಿ ಕರೆದೊಯ್ದರು.
ಮೈಸೂರು ರಸ್ತೆಯಿಂದ ಆನಂತರ ನೆಲಮಂಗಲದ ರೆಸಾರ್ಟ್ಗೆ ತೆರಳಿ ಅಲ್ಲಿ ರೂಂ ನಲ್ಲಿ ಬಂಧಿಸಿದ್ದರು. ನಂತರ ದೊಣ್ಣೆಯಿಂದ ಥಳಿಸಿ, 10 ಲಕ್ಷ ರೂಪಾಯಿ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ನಂತರ ಅವರ ಮೊಬೈಲ್ ಕಸಿದುಕೊಂಡು ಆನ್ಲೈನ್ನಲ್ಲಿ 15 ಲಕ್ಷ ರೂ.ಗಳನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದರು. ನಾವು ಆರೋಪಿಗಳ ಮಾಹಿತಿ ಪಡೆದಿದ್ದು, ಅವರನ್ನು ಕಾರ್ತಿಕ್, ಪಾಂಡು, ಈಶ್ವರ್ ಮತ್ತು ನಿಶ್ಚಲ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement