ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ 'ಅನ್ನ ಭಾಗ್ಯ'ಯೋಜನೆಯಲ್ಲಿ ಕಮಿಷನ್ ದಂಧೆ ಆರೋಪ!

ಗುತ್ತಿಗೆದಾರರಿಂದ ಕಮಿಷನ್, ಸರ್ಕಾರಿ ಅಧಿಕಾರಿಗಳ ವರ್ಗಾವಣೆಯಲ್ಲಿ ಲಂಚ ಆರೋಪದ ಬೆನ್ನಲ್ಲೇ ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮತ್ತೊಂದು ಗಂಭೀರ ಆರೋಪ ಎದುರಿಸುತ್ತಿದೆ. 
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
Updated on

ಮೈಸೂರು/ಬೆಂಗಳೂರು: ಗುತ್ತಿಗೆದಾರರಿಂದ ಕಮಿಷನ್, ಸರ್ಕಾರಿ ಅಧಿಕಾರಿಗಳ ವರ್ಗಾವಣೆಯಲ್ಲಿ ಲಂಚ ಆರೋಪದ ಬೆನ್ನಲ್ಲೇ ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮತ್ತೊಂದು ಗಂಭೀರ ಆರೋಪ ಎದುರಿಸುತ್ತಿದೆ. 

ಮಂಡ್ಯದಲ್ಲಿ ನಿನ್ನೆ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಾರ್ವಜನಿಕ ವಿತರಣಾ ವ್ಯವಸ್ಥೆ(PDS) ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಪ್ರತಿ ಪಡಿತರ ಚೀಟಿಗೆ ಪಿಡಿಎಸ್ ವಿತರಕರಿಂದ ಕಮಿಷನ್ ಪಡೆಯುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. 

ಹಲವು ಸ್ಥಳಗಳಲ್ಲಿ ಕಮಿಷನ್ ಪಡೆಯುವ ಬಗ್ಗೆ ರೇಟ್ ಕಾರ್ಡುಗಳಿವೆ. 500 ಕಾರ್ಡ್‌ಗಳನ್ನು ಹೊಂದಿರುವ ನ್ಯಾಯಬೆಲೆ ಅಂಗಡಿಗೆ (ಪಿಡಿಎಸ್ ವಿತರಣೆಗಾಗಿ) ವಿತರಕರು 3,000 ರೂಪಾಯಿಗಳನ್ನು ಅಧಿಕಾರಿಗೆ ಕಮಿಷನ್ ಆಗಿ ಪಾವತಿಸಬೇಕಾಗುತ್ತದೆ. 800-1.000 ಕಾರ್ಡ್‌ಗಳಿರುವ ಅಂಗಡಿಗಳಿಗೆ 4,000 ರೂಪಾಯಿ ನೀಡಬೇಕಾಗುತ್ತದೆ. ಉನ್ನತ ಅಧಿಕಾರಿಗಳು ತಮ್ಮ ಕೆಳ ಹಂತದ ಸಿಬ್ಬಂದಿಗೆ ಇಷ್ಟು ಟಾರ್ಗೆಟ್ ತಲುಪಬೇಕೆಂದು ಹೇಳುತ್ತಾರೆ ಎಂದರು. 

ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಕೃಷ್ಣಪ್ಪ ಆಗ್ರಹಿಸಿದರು. ಭ್ರಷ್ಟ ಅಧಿಕಾರಿಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪಿಡಿಎಸ್ ವಿತರಕರೊಂದಿಗೆ ಸಭೆ ನಡೆಸಿ ಮಾಹಿತಿ ನೀಡುವಂತೆ ಒತ್ತಾಯಿಸಿದರು. ಕಮಿಷನ್ ದಂಧೆ ತಡೆಯದಿದ್ದಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆ ದೊಡ್ಡ ವೈಫಲ್ಯವಾಗಿ ಪರಿಣಮಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕೃಷ್ಣಪ್ಪ ಅವರು ಪಾವಗಡದಲ್ಲಿ ನಡೆದ ಘಟನೆಯನ್ನು ಪ್ರಸ್ತಾಪಿಸಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಅದಕ್ಕೆ ಸಚಿವರು ತನಿಖೆಗೆ ಆದೇಶಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಆಹಾರ ಶಿರಸ್ತೇದಾರ್ ಕೃಷ್ಣಮೂರ್ತಿ ಮತ್ತು ಆಹಾರ ನಿರೀಕ್ಷಕ ಮಂಜುನಾಥ್ ಅವರು ವಿತರಕರಿಗೆ ನೀಡಬೇಕಾದ ಕಮಿಷನ್ ಮೊತ್ತವನ್ನು ಬಿಡುಗಡೆ ಮಾಡಲು ಪ್ರತಿ ವಿತರಕರಿಂದ ತಿಂಗಳಿಗೆ 2,000-3,000 ರೂಪಾಯಿಗಳನ್ನು ಸಂಗ್ರಹಿಸುತ್ತಿದ್ದಾರೆ ಎಂಬುದಕ್ಕೆ ನಮ್ಮ ಬಳಿ ಸಾಕ್ಷ್ಯವಿದೆ.

ಸರ್ಕಾರ ಬದಲಾದ ನಂತರವೂ ಭ್ರಷ್ಟಾಚಾರ ಮುಂದುವರಿದಿದೆ ಎಂದು ಕೃಷ್ಣಪ್ಪ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿಗೆ ತಿಳಿಸಿದ್ದಾರೆ. ವಿತರಕರಿಂದ ಲಂಚ ಪಡೆಯಲು ಅಧಿಕಾರಿಗಳು ಸರ್ಕಾರದ ಪ್ರಸ್ತಾವನೆಗಳ ಅನುಷ್ಠಾನವನ್ನು ವಿಳಂಬಗೊಳಿಸುವ ತಂತ್ರವನ್ನು ಅನುಸರಿಸುತ್ತಾರೆ.

ಪ್ರತಿ ಕ್ವಿಂಟಾಲ್ ಆಹಾರಧಾನ್ಯಕ್ಕೆ 24 ರೂಪಾಯಿಗಳನ್ನು ವಿತರಕರಿಗೆ ಹೆಚ್ಚುವರಿ ಕಮಿಷನ್ ರೂಪದಲ್ಲಿ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಹಲವಾರು ವರ್ಷಗಳಿಂದ ಒಂದೇ ಸ್ಥಳದಲ್ಲಿ ವಾಸವಾಗಿರುವವರನ್ನು ವರ್ಗಾವಣೆ ಮಾಡುವುದರ ಜೊತೆಗೆ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com