ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಎನ್‌ಇಪಿ ಜಾರಿಯಾಗಿಲ್ಲ ಏಕೆ: ಡಿ ಕೆ ಶಿವಕುಮಾರ್

ಬಿಜೆಪಿ ಅಧಿಕಾರದಲ್ಲಿರುವ ಮಧ್ಯಪ್ರದೇಶ, ಉತ್ತರ ಪ್ರದೇಶ, ಹರಿಯಾಣ ಮತ್ತು ಗುಜರಾತ್‌ನಲ್ಲಿ ಎನ್‌ಇಪಿಯನ್ನು ಏಕೆ ಜಾರಿಗೆ ತರಲಿಲ್ಲ ಎಂದು ಸಹ ಡಿ ಕೆ ಶಿವಕುಮಾರ್ ಪ್ರಶ್ನಿಸಿದರು. 
ಡಿ ಕೆ ಶಿವಕುಮಾರ್
ಡಿ ಕೆ ಶಿವಕುಮಾರ್

ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (NEP) ರದ್ದುಗೊಳಿಸಿದ್ದಕ್ಕೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿರುವ ಕುರಿತು ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಎನ್‌ಇಪಿ ಬಿಜೆಪಿಯವರ ರಾಜಕೀಯ ಅಜೆಂಡಾ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಅದನ್ನು ಜಾರಿಗೆ ತಂದಿಲ್ಲ ಏಕೆ ಎಂದು ಪ್ರಶ್ನಿಸಿದರು. 

ಎನ್ ಇಪಿ ಜಾರಿ ಸಂಪೂರ್ಣ ರಾಜ್ಯ ಸರ್ಕಾರಗಳಿಗೆ ಸಂಬಂಧಪಟ್ಟ ವಿಷಯವಾಗಿದ್ದು ಇದು ಕೇಂದ್ರಕ್ಕೆ ಸಂಬಂಧಿಸಿದ್ದಲ್ಲ ಎಂದು ಕೂಡ ಹೇಳಿದರು. ಎನ್‌ಇಪಿ ಜಾರಿಗೊಳಿಸುವುದು ಕೇಂದ್ರ ಬಿಜೆಪಿಯ ನಿರ್ಧಾರ. ಶಿಕ್ಷಣ ನೀತಿ ಉತ್ತಮವಾಗಿದ್ದರೆ ನಾವು ಅದನ್ನು ಮರುಪರಿಶೀಲಿಸುತ್ತೇವೆ ಎಂದು ಮೊದಲಿನಿಂದಲೂ ಹೇಳುತ್ತಿದ್ದೇವೆ. ಮೂಲಸೌಕರ್ಯ ಕಲ್ಪಿಸದೆ ತರಾತುರಿಯಲ್ಲಿ ಏಕೆ ಅನುಷ್ಠಾನಗೊಳಿಸಲಾಗಿದೆ ಎಂದು ಕೇಳಿದರು. 

ಬಿಜೆಪಿ ಅಧಿಕಾರದಲ್ಲಿರುವ ಮಧ್ಯಪ್ರದೇಶ, ಉತ್ತರ ಪ್ರದೇಶ, ಹರಿಯಾಣ ಮತ್ತು ಗುಜರಾತ್‌ನಲ್ಲಿ ಎನ್‌ಇಪಿಯನ್ನು ಏಕೆ ಜಾರಿಗೆ ತರಲಿಲ್ಲ ಎಂದು ಸಹ ಡಿ ಕೆ ಶಿವಕುಮಾರ್ ಪ್ರಶ್ನಿಸಿದರು. 

ಬೆಂಗಳೂರು ಜ್ಞಾನದ ಆಗರ ನಗರ: ನಮ್ಮ ಜನರಲ್ಲಿ ಕಳವಳವಿದೆ. ಇಡೀ ಜಗತ್ತು ಬೆಂಗಳೂರನ್ನು ಐಟಿ ರಾಜಧಾನಿ, ಸಿಲಿಕಾನ್ ವ್ಯಾಲಿ, ಸ್ಟಾರ್ಟಪ್ ಹಬ್ ಮತ್ತು ಮೆಡಿಕಲ್ ಹಬ್ ಎಂದು ಒಪ್ಪಿಕೊಂಡಿದೆ. ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರದವರೆಗಿನ ನಮ್ಮ ಶಿಕ್ಷಣದ ಗುಣಮಟ್ಟವೇ ಇದಕ್ಕೆ ಕಾರಣ. ಹೀಗಿರುವಾಗ ಎನ್ಇಪಿ ಅಗತ್ಯವಿರಲಿಲ್ಲ. ಎನ್‌ಇಪಿಯಲ್ಲಿ ಉತ್ತಮ ಅಂಶಗಳಿದ್ದರೆ ಮರುಪರಿಶೀಲಿಸಲಾಗುವುದು ಎಂದರು. 

ಎನ್‌ಇಪಿಯಲ್ಲಿ ಯಾವುದು ಒಳ್ಳೆಯದು, ಅದನ್ನು ಖಂಡಿತವಾಗಿಯೂ ಪರಿಶೀಲಿಸಲಾಗುತ್ತದೆ. ಎನ್ ಇಪಿ ಒಂದು ರಾಜಕೀಯ ಕಾರ್ಯಸೂಚಿಯಾಗಿದೆ. ಇದು ನಾಗ್ಪುರ ಶಿಕ್ಷಣ ನೀತಿ. ಸಮಿತಿಯ ಸದಸ್ಯರಿಗೇ ಪರಿಕಲ್ಪನೆ ಅರ್ಥವಾಗಲಿಲ್ಲ ಮತ್ತು ದಾಖಲೆಗಳಿಗೆ ಸಹಿ ಹಾಕಲು ಕೇಳಲಾಯಿತು ಎಂದು ಟೀಕಿಸಿದರು. 

“ಕಳೆದ ಬಿಜೆಪಿ ಸರ್ಕಾರ ಅವಧಿಯಲ್ಲಿಯೇ ಜಾರಿಗೆ ತಂದಾಗ, ನಾವು ಅಧಿಕಾರಕ್ಕೆ ಬಂದರೆ ಅದನ್ನು ಮಾರ್ಪಡಿಸಿ ರಾಜ್ಯ ನೀತಿಯನ್ನು ಮಾಡಲಾಗುವುದು ಎಂದು ಹೇಳಿದ್ದೆವು. NEP ನ್ನು ಕರ್ನಾಟಕದಲ್ಲಿ ಮಾತ್ರ ಬಿಜೆಪಿ ಏಕೆ ಜಾರಿಗೆ ತಂದಿತು ರಾಜ್ಯವು ಯಾವಾಗಲೂ ಪ್ರಬಲವಾಗಿದೆ. ತಾಂತ್ರಿಕ ಅಥವಾ ವೈದ್ಯಕೀಯ ಶಿಕ್ಷಣದ ವಿಷಯದಲ್ಲಿ ಅದು ಮೊದಲ ಸ್ಥಾನದಲ್ಲಿದೆ. ರಾಜಕೀಯ ಲಾಭ ಪಡೆಯಲು ಮತ್ತು ಕೇಂದ್ರದ ನಾಯಕರನ್ನು ಮೆಚ್ಚಿಸಲು ಮಾತ್ರ ರಾಜ್ಯದಲ್ಲಿ ಎನ್‌ಇಪಿ ಜಾರಿಗೊಳಿಸಲಾಗಿದೆ ಎಂದು ಡಿಸಿಎಂ ಶಿವಕುಮಾರ್ ಟೀಕಿಸಿದರು. 

ಹಲವು ಜಿಲ್ಲೆಗಳಲ್ಲಿ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆಯೇ ಎಂದು ಕೇಳಿದ್ದಕ್ಕೆ ಅದರ ಬಗ್ಗೆ ಮಾಹಿತಿ ತರಿಸಿಕೊಳ್ಳುತ್ತೇನೆ, ಗೃಹಜ್ಯೋತಿಗೂ ಲೋಡ್ ಶೆಡ್ಡಿಂಗ್ ಗೂ ಸಂಬಂಧವಿಲ್ಲ, ಗೃಹಜ್ಯೋತಿಗೆ ರಾಜ್ಯ ಸರ್ಕಾರ ಹಣ ನೀಡುತ್ತಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ನನಗಿಲ್ಲ ಎಂದು ಡಿ ಕೆ ಶಿವಕುಮಾರ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com