ಮಹಿಳೆಗೆ ಸಿಎಂ ಆಗುವ ಅವಕಾಶ, ಚಂದ್ರಯಾನ ಯಶಸ್ವಿ: ಜಗತ್ತಿನ ಸಾಮ್ರಾಟರಿಗೆ ತಲ್ಲಣ; ಕೋಡಿ ಶ್ರೀ ಭವಿಷ್ಯ

ಒಮ್ಮೆ ಮಹಿಳೆಯರಿಗೆ ರಾಜ್ಯದ ಮುಖ್ಯಮಂತ್ರಿಯಾಗುವ ಯೋಗ ಬರಲಿದೆ. ಅವರಿಗೂ ಅವಕಾಶ ಸಿಗಲಿ' ಎಂದು ಕೋಡಿಮಠದ ಡಾ.ಶಿವಾನಂದ ಸ್ವಾಮೀಜಿ ಹೇಳಿದರು.
ಕೋಡಿ ಮಠದ ಸ್ವಾಮೀಜಿ
ಕೋಡಿ ಮಠದ ಸ್ವಾಮೀಜಿ

ಬೆಳಗಾವಿ: ಒಮ್ಮೆ ಮಹಿಳೆಯರಿಗೆ ರಾಜ್ಯದ ಮುಖ್ಯಮಂತ್ರಿಯಾಗುವ ಯೋಗ ಬರಲಿದೆ. ಅವರಿಗೂ ಅವಕಾಶ ಸಿಗಲಿ' ಎಂದು ಕೋಡಿಮಠದ ಡಾ.ಶಿವಾನಂದ ಸ್ವಾಮೀಜಿ ಹೇಳಿದರು.

ಈ ರಾಜ್ಯಕ್ಕೆ ಮಹಿಳಾ ಮುಖ್ಯಮಂತ್ರಿ ಆಗುವ ಯೋಗ ಇದೆಯೇ?' ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಂದೆ ಮಹಿಳೆಯರಿಗೆ ಸಿಎಂ ಆಗುವ ಯೋಗ ಬರಲಿದೆ, ಅವರಿಗೂ ಅವಕಾಶ ಸಿಗಲಿದೆ, ಹಣದ ಹಿಂದೆ ಮನುಷ್ಯ ಹೋಗದೇ ದೈವದ ಹಿಂದೆ ಹೋಗಬೇಕು ಎಂದು ತಿಳಿವಳಿಕೆ ನೀಡಿದ್ದಾರೆ.

ಈ ಬಾರಿ ಚಂದ್ರಯಾನ-3 ಯಶಸ್ವಿಯಾಗಲಿದೆ ಎಂದ ಅವರು,  ಶ್ರಾವಣ ಮಾಸದ ಮಧ್ಯದಲ್ಲಿ ಜಾಗತಿಕ ಮಟ್ಟದಲ್ಲಿ ವಿಪರೀತ ಮಳೆಯಾಗಲಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಯುದ್ಧದ ಭೀತಿಯಿದೆ. ಭೂಕಂಪ, ಸುನಾಮಿಯಿಂದ ಹೆಚ್ಚಿನ ಜನರ ಸಾವು- ನೋವು ಸಂಭವಿಸಲಿವೆ. ವಿಷಾನಿಲ ಬೀಸುವ ಪ್ರಸಂಗವಿದೆ. ಅದು ಎಲ್ಲ ಕಡೆಯೂ ವ್ಯಾಪಿಸಲಿದೆ. ವಿಪರೀತ ಮಳೆಯಿಂದ ಒಂದೆರಡು ದೇಶ ನಾಶವಾಗಲಿವೆ. ಭಾರತದಲ್ಲಿ ಜಲಪ್ರಳಯ ಆಗುವ ಲಕ್ಷಣಗಳಿವೆ ಎಂದರು.

ದಕ್ಷಿಣ ಭಾರತದಲ್ಲಿ ಸಮೃದ್ಧಿಯ ಲಕ್ಷಣಗಳಿವೆ.‌‌ ಇಲ್ಲಿ ಯಾವುದೇ ತೊಂದರೆಯಿಲ್ಲ. ಆದರೆ, ಭೂಕಂಪದಿಂದ ದೊಡ್ಡ ದೊಡ್ಡ ನಗರಗಳಿಗೆ ಅಪಾಯವಿದೆ. ಇದ್ದಕ್ಕಿದ್ದಂತೆ ಜನರ ಸಾವನ್ನಪ್ಪುವ ಆತಂಕವಿದೆ. ಜಾಗತಿಕ ಮಟ್ಟದ ವಿಷಾನಿಲದ ಪರಿಣಾಮ ಭಾರತದ ಮೇಲೂ ಆಗಲಿದೆ. ಜಗತ್ತಿನ ಸಾಮ್ರಾಟರು ತಲ್ಲಣಗೊಳ್ಳುವ ಪ್ರಸಂಗವಿದೆ. ಅದರ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು‌ ಹೇಳಿದರು.

ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ ಹೇಳಲು ಇನ್ನೂ ಸಮಯವಿದೆ. ಅದನ್ನು ನೋಡಿ ಹೇಳುತ್ತೇವೆ' ಎಂದರು. ಮನುಷ್ಯನಿಗೆ ದೈವದ ಬಲ ಮುಖ್ಯವಾಗಿ ಬೇಕು. ಯಾರು ದೈವ ನಂಬುತ್ತಾರೆಯೋ, ಅವರಿಗೆ ತೊಂದರೆಯಿಲ್ಲ. ಇಲ್ಲದಿದ್ದರೆ ಆಪತ್ತು, ಸಾವು ಸಂಭವಿಸುತ್ತವೆ. ಕೆಲವರಿಗೆ ದೈವಬಲ ಇದ್ದರೂ ತೊಂದರೆಯಾಗುತ್ತದೆ. ಪ್ರಕೃತಿ ನಿಯಮವದು. ಪ್ರಾಕೃತಿಕ ದೋಷದಿಂದಲೇ ಸಾವು-ನೋವು ಹೆಚ್ಚುತ್ತಿವೆ ಎಂದು ಹೇಳಿದರು

ನಾವು ಸೇವಿಸುವ ಆಹಾರ ಪದ್ಧತಿ ಬದಲಾವಣೆಯಾಗಿದೆ. ಮೊದಲು ಸೀಮೆ ಗೊಬ್ಬರ, ದನದ ಗೊಬ್ಬರ ಹಾಕಿ ಬೆಳೆ ಬೆಳೆಯಲಾಗುತ್ತಿತ್ತು. ಈಗ ರಾಸಾಯನಿಕ ಸಿಂಪಡಣೆ ಹೆಚ್ಚುತ್ತಿದೆ. ಹಣ್ಣಿಗೂ ರಾಸಾಯನಿಕ ಬೆರೆಸಲಾಗುತ್ತಿದೆ. ವಿಷವನ್ನೇ ಬಿತ್ತಿ, ವಿಷವನ್ನೇ ಬೆಳೆದು, ವಿಷವನ್ನೇ ಉಣ್ಣುವಾಗ ಆರೋಗ್ಯ ವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಪ್ರಕೃತಿ ಕೂಡ ಮುನಿಸಿಕೊಳ್ಳುವ ಸ್ಥಿತಿ ಇದೆ. ಮರಗಳನ್ನು ಮನುಷ್ಯ ನಾಶ ಮಾಡುತ್ತಿದ್ದಾನೆ. ಈ ಪ್ರಕೃತಿಯ ದೋಷ ಮನುಕುಲಕ್ಕೆ ಇದೆ' ಎಂದ‌ ಅವರು, 'ಮೊದಲು ಅಂತರ್ಜಲ‌ ಮಟ್ಟ ಹೆಚ್ಚಿತ್ತು. 40 ಅಡಿಯವರೆಗೆ ಬಾವಿ ಕೊರೆಯಿಸಿದರೆ, ಶುದ್ಧ ನೀರು ಸಿಗುತ್ತಿತ್ತು. ನೀರಿನಲ್ಲಿ ಮಣ್ಣಿನ ಅಂಶ ಸೇರಿರುತ್ತಿತ್ತು. ಅದು ಮನುಷ್ಯನಿಗೆ ಅಗತ್ಯವಾಗಿ ಬೇಕಿತ್ತು. ಆದರೆ, ಈಗ ಸಾವಿರ ಅಡಿ ಕೊಳವೆಬಾವಿ ಕೊರೆಯಿಸಿ ನೀರು ಪಡೆಯುತ್ತಿದ್ದೇವೆ. ಅದನ್ನು ಸೇವಿಸುವುದರಿಂದ ಆರೋಗ್ಯ ಬಿಗಡಾಯಿಸುತ್ತಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com