ಯಾವಾಗಲಾದರೂ ನಿಜವಾಗಿಯೂ ಬಾಂಬ್ ಇಡಬಹುದು, ಯಾವುದನ್ನೂ ಕಡೆಗಣಿಸೋಕೆ ಆಗಲ್ಲ: ಡಿಸಿಎಂ ಡಿ ಕೆ ಶಿವಕುಮಾರ್
ಬೆಂಗಳೂರು: ನಗರದ ಸದಾಶಿವನಗರದಲ್ಲಿರುವ ನೀವ್ ಅಕಾಡೆಮಿ, ಬಸವೇಶ್ವರ ನಗರ, ಯಲಹಂಕ ವ್ಯಾಪ್ತಿಯಲ್ಲಿ ಸುಮಾರು 15 ಶಾಲೆಗಳಿಗೆ ಬಾಂಬ್ ಇಟ್ಟಿರುವುದಾಗಿ ಶುಕ್ರವಾರ ಬೆಳ್ಳಂಬೆಳಗ್ಗೆ ಬೆದರಿಕೆ ಇಮೇಲ್ ಗಳು ಬಂದವು.
ಈ ವಿಚಾರ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಡಿಸಿಎಂ ಡಿಕೆ ಶಿವಕುಮಾರ್ ಆತಂಕಗೊಂಡು ತಮ್ಮ ಮನೆ ಸದಾಶಿವನಗರದ ಪಕ್ಕದಲ್ಲಿರುವ ನೀಟ್ ಅಕಾಡೆಮಿಗೆ ಬೇಬಿ ಸಿಟ್ಟಿಂಗ್ ಗೆ ಆಗಮಿಸಿದರು. ಶಾಲೆಗೆ ಬಂದು ಸ್ಥಳ ಪರಿಶೀಲನೆ ಮಾಡಿ ಬೆದರಿಕೆ ಬಂದ ಇ ಮೇಲ್ ಕೂಡ ಪರಿಶೀಲಿಸಿದರು.
ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿ ಕೆ ಶಿವಕುಮಾರ್, ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ, ಟಿವಿಯಲ್ಲಿ ವಿಷಯ ತಿಳಿದು ಗಾಬರಿ ಆದೆ. ಇದೊಂದು ಹುಸಿ ಕರೆ ಅಂತ ಮೇಲ್ನೋಟಕ್ಕೆ ಗೊತ್ತಾಗ್ತಿದೆ. 8-10 ಬಾರಿ ಹೀಗೆ ಹುಸಿ ಕರೆ ಮಾಡ್ತಾರೆ ಯಾವಗಲಾದರೂ ನಿಜವಾಗಿಯೂ ಬಾಂಬ್ ಇಡಬಹುದು ಯಾವುದನ್ನೂ ಕಡೆಗಣಿಸೋಕೆ ಆಗಲ್ಲ ಎಂದರು.
ಇಂತಹ ಬೆದರಿಕೆ ಇಮೇಲ್ ಎಲ್ಲಿಂದ ಬರುತ್ತವೆ, ಯಾಕಾಗಿ ಬರುತ್ತವೆ ಎಂದು ತನಿಖೆ ಮಾಡಬೇಕು. ಪೊಲೀಸರು ಈಗಾಗಲೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ಮಾಡಿ ಇದೊಂದು ಹುಸಿ ಬಾಂಬ್ ಬೆದರಿಕೆ ಇಮೇಲ್ ಎಂದು ಗೊತ್ತಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ಕ್ರಮ ವಹಿಸಬೇಕು ಎಂದರು.
ಶಾಲೆಗಳಿಗೆ ರಜೆ ಘೋಷಣೆ: ಸದಾಶಿವ ನಗರ ಮಾತ್ರವಲ್ಲ ನೀವ್ ಶಾಲೆಯ ಐದು ಶಾಲೆಗಳಲ್ಲೂ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಬಂದಿದೆ. ಬೆಳಗ್ಗೆ 6 ಗಂಟೆಗೆ ಶಾಲೆಯ ಇಮೇಲ್ ಗೆ ಮೆಸೇಜ್ ಬಂದಿದೆ. ಸದಾಶಿವನಗರ, ವೈಟ್ ಫೀಲ್ಡ್, ಕೋರಮಂಗಲ ಸೇರಿದಂತೆ ಐದು ಶಾಲೆಗಳಿಗೆ ಬೆದರಿಕೆ ಹಾಕಲಾಗಿದೆ. ಸದಾಶಿವನಗರದ ನೀವ್ ಶಾಲೆಯಲ್ಲಿ ಒಟ್ಟು 150 ಮಕ್ಕಳು ಓದುತ್ತಿದ್ದಾರೆ. ಬೆದರಿಕೆ ಬಳಿಕ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ