ರಾಮನಗರ: ಬಿಜೆಪಿ ನಾಯಕ, ಮಾಜಿ ಸಚಿವ ಸಿಪಿ ಯೋಗೇಶ್ವರ್ ಅವರ ಬಾವ ಹಾಗೂ ಮೆಗಾಸಿಟಿ ನಿರ್ದೇಶಕ ಮಹದೇವಯ್ಯ ಅವರು ಅನುಮಾನಾಸ್ಪದವಾಗಿ ಕಾಣೆಯಾಗಿದ್ದಾರೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಚೆಕ್ಕೆರೆ ಗ್ರಾಮದ ತೋಟದ ಮನೆಯಲ್ಲಿ ತಂಗಿದ್ದ 62 ವರ್ಷದ ಮಹದೇವಯ್ಯ ಅವರು ಏಕಾಏಕಿ ನಾಪತ್ತೆಯಾಗಿದ್ದಾರೆ. ಉದ್ಯಮಿ ಹಾಗೂ ಮೆಗಾಸಿಟಿ ನಿರ್ದೇಶಕರಾಗಿರುವ ಮಹದೇವಯ್ಯ ಅವರು ಆಗಾಗ ತೋಟದ ಮನೆಗೆ ಬಂದು ತಂಗುತ್ತಿದ್ದರು. ಇಂದು ಇಂದು ಡಿಢೀರ್ ಕಾಣೆಯಾಗಿದ್ದಾರೆ.
ಮಹದೇವಯ್ಯ ಅವರನ್ನು ಯಾರೋ ಅಪಹರಣ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ತೋಟದ ಮನೆಗೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಳಗ್ಗೆಯಿಂದ ಮಹದೇವಯ್ಯ ಅವರ ಫೋನ್ ಸ್ವಿಚ್ ಆಫ್ ಆಗಿದ್ದು, ಕಾರು ಕೂಡಾ ನಾಪತ್ತೆಯಾಗಿದೆ. ಹೀಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಮಹದೇಶ್ವರ ಬೆಟ್ಟದಲ್ಲಿ ಟವರ್ ಲೊಕೇಶನ್ ಟ್ರೇಸ್ ಆಗಿದ್ದು, ಇತ್ತ ಮನೆಯಲ್ಲಿ ಬೀರು ಓಪನ್ ಆಗಿದ್ದು, ಬೆಡ್ ರೂಮ್ನಲ್ಲಿ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿರುವುದು ಕಂಡುಬಂದಿದೆ.
ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸಿಪಿ ಯೋಗೇಶ್ವರ್ ಅವರ ಸಹೋದರ ಸಿ.ಪಿ.ರಾಜೇಶ್ ಅವರು, ತೋಟದ ಮನೆಗೆ ಬಂದು ನೋಡಿದಾಗ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿ ಆಗಿತ್ತು. ಬೇರೆ ಬೇರೆ ಕಾರು ಓಡಾಡಿರುವ ಸಾಧ್ಯತೆ ಇದೆ. ಹೀಗಾಗಿ ಮಹದೇವಯ್ಯರನ್ನು ಅಪಹರಣ ಮಾಡಿರುವ ಅನುಮಾನ ಇದೆ. ಅದಕ್ಕೆ ನಾವು ಪೊಲೀಸರಿಗೆ ವಿಚಾರ ತಿಳಿಸಿದ್ದೇವೆ ಎಂದಿದ್ದಾರೆ.
Advertisement