ಮಡಿಕೇರಿ: ಕೇರಳದಿಂದ ಪ್ರವಾಸಕ್ಕೆ ಬಂದಿದ್ದ ದಂಪತಿ, ತಮ್ಮ ಮಗಳನ್ನು ಕೊಂದು ಬಳಿಕ ತಾವೂ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಶನಿವಾರ ಮಡಿಕೇರಿ ತಾಲೂಕಿನ ಕಡಗದಾಳು ಹೋಮ್ಸ್ಟೇನಲ್ಲಿ ನಡೆದಿದೆ.
ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಕೇರಳದ ಕೊಲ್ಲಂ ನಿವಾಸಿ ವಿನೋದ್ ಬಾಬುಸೇನನ್, ಅವರ ಪತ್ನಿ ಜಿಬಿ ಅಬ್ರಹಾಂ ಮತ್ತು ದಂಪತಿಯ 10 ವರ್ಷದ ಮಗಳು ಮೃತ ದುರ್ದೈವಿಗಳು.
ಶುಕ್ರವಾರ ಸಂಜೆ 6 ಗಂಟೆಗೆ ಈ ದಂಪತಿ ತಮ್ಮ ಮಗಳೊಂದಿಗೆ ಹೋಂಸ್ಟೇಗೆ ತೆರಳಿದ್ದರು. ರಾತ್ರಿ ಮಲಗುವ ಮುನ್ನ ಸ್ವಲ್ಪ ಹೊತ್ತು ಕೇರಂ ಆಡುತ್ತಿದ್ದರೂ ಮತ್ತು ಕುಟುಂಬ ಲವಲವಿಕೆಯಿಂದ ಇತ್ತು ಎಂದು ಹೋಂಸ್ಟೇ ಆಡಳಿತ ಮಂಡಳಿ ತಿಳಿಸಿದೆ.
ಆದರೆ ಇಂದು ಬೆಳಗ್ಗೆ 10 ಗಂಟೆಗೆ ಸಿಬ್ಬಂದಿ ಬಾಗಿಲು ತಟ್ಟಿದರೂ ಸ್ಪಂದಿಸದ ಕಾರಣ ಕಿಟಕಿಯ ಮೂಲಕ ಕೊಠಡಿಯೊಳಗೆ ಇಣುಕಿ ನೋಡಿದಾಗ ದಂಪತಿ ನೇಣು ಬಿಗಿದ ಸ್ಥಿತಿಯಲ್ಲಿದ್ದರು. ಸಿಬ್ಬಂದಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದು, ಮೃತರ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಕೊಲ್ಲಂನಿಂದ ಸಂತ್ರಸ್ತರ ಸಂಬಂಧಿಕರ ಆಗಮನಕ್ಕಾಗಿ ಪೊಲೀಸರು ಕಾಯುತ್ತಿದ್ದಾರೆ.
Advertisement