'ಲಿಂಗಾಯತ ಒಂದು ಜಾತಿ ಅಲ್ಲ; ನಾನು ದೇವಾಲಯಕ್ಕೆ ಹೋಗೋದು ಶಿಲ್ಪ ಸೌಂದರ್ಯ ನೋಡಲು, ದೇವರಿದ್ದಾನೆ ಎಂಬ ನಂಬಿಕೆಯಿಂದಲ್ಲ'

ನಾನು ಗುಡಿ ಗೋಪುರಗಳಿಗೆ ಹೋಗುವುದು ಶಿಲ್ಪದ ಸೌಂದರ್ಯ ನೋಡುವುದಕ್ಕೆ. ದೇವರಿದ್ದಾನೆ ಎಂಬ ನಂಬಿಕೆಯಿಂದಲ್ಲ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ದಾವಣಗೆರೆ: ನಾನು ಗುಡಿ ಗೋಪುರಗಳಿಗೆ ಹೋಗುವುದು ಶಿಲ್ಪದ ಸೌಂದರ್ಯ ನೋಡುವುದಕ್ಕೆ. ದೇವರಿದ್ದಾನೆ ಎಂಬ ನಂಬಿಕೆಯಿಂದಲ್ಲ. ದೇವಸ್ಥಾನಗಳ ಶಂಕುಸ್ಥಾಪನೆ, ಭೂಮಿ ಪೂಜೆ, ಕಳಶಾರೋಹಣ ಕಾರ್ಯಕ್ರಮಗಳಲ್ಲಿ  ಭಾಗವಹಿಸುವುದಿಲ್ಲ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ದಾವಣಗೆರೆ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳ ಸೇವಾ ದೀಕ್ಷೆ ಹಾಗೂ ಶರಣ ಚಿಂತನ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದ ಅವರು, ಲಿಂಗಾಯತ ಒಂದು ಜಾತಿ ಅಲ್ಲ, ಅದೊಂದು ತತ್ವ, ಸಿದ್ಧಾಂತ. ಯಾರು ಆ ತತ್ವಕ್ಕೆ ಅನುಗುಣವಾಗಿ ಅಂಗದ ಮೇಲೆ ಲಿಂಗ ಧರಿಸಿ ಪೂಜೆ ಮಾಡುತ್ತಾರೋ ಅವರು ಮಾತ್ರ ಲಿಂಗಾಯತರು. ಹುಟ್ಟಿನಿಂದ ಲಿಂಗಾಯತತನ ಬರುವುದಿಲ್ಲ.

ಅದು ಸಾಧನೆ ಹಾಗೂ ಅರಿವಿನ ಮೂಲಕ ಬರುತ್ತದೆ. ಹಾಗಾಗಿ ಆ ಅರಿವನ್ನು ಮೈಗೂಡಿಸಿಕೊಳ್ಳಬೇಕು, ನನ್ನ ತಂದೆ- ತಾಯಿ ಲಿಂಗಾಯತರು ಹಾಗಾಗಿ ನಾನು ಕೂಡ ಲಿಂಗಾಯತ ಅಂದರೆ ಆಗಲ್ಲ. ಲಿಂಗಸಾಧನೆ ಮೂಲಕ ಲಿಂಗಾಯತರು ಆಗಬೇಕು ಎಂದು ಹೇಳಿದರು. ಈ ಮೂಲಕ ಎಲ್ಲರೂ ಲಿಂಗಪೂಜೆ ಮತ್ತು ಲಿಂಗ ದೀಕ್ಷೆಯ ಅನುಸಾರ ತತ್ವ ಸಿದ್ದಾಂತದಂತೆ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಬಸವ ಪರಂಪರೆಯನ್ನು ಒಪ್ಪಿಕೊಳ್ಳುವವರು ವೈದಿಕ ಪರಂಪರೆಯಿಂದ ದೂರವಿರಬೇಕು. ಎರಡೂ ಬೇಕೆನ್ನುವುದನ್ನು ಶರಣ ತತ್ವ ಒಪ್ಪುವುದಿಲ್ಲ, ನಾನು ಗುಡಿ ಗೋಪುರಗಳಿಗೆ ಹೋಗುವುದು ಶಿಲ್ಪದ ಸೌಂದರ್ಯ ನೋಡುವುದಕ್ಕೆ. ದೇವರಿದ್ದಾನೆ ಎಂಬ ನಂಬಿಕೆಯಿಂದಲ್ಲ. ದೇವಸ್ಥಾನಗಳ ಶಂಕುಸ್ಥಾಪನೆ, ಭೂಮಿ ಪೂಜೆ, ಕಳಶಾರೋಹಣ ಕಾರ್ಯಕ್ರಮಗಳಲ್ಲಿ  ಭಾಗವಹಿಸುವುದಿಲ್ಲ. ಇದನ್ನು ಟೀಕಿಸುವವರು ಬಹಳಷ್ಟು ಮಂದಿ ಇದ್ದಾರೆ. ನಮಗೆ ಟೀಕೆ ಮುಖ್ಯವಲ್ಲ. ಬದ್ಧತೆ ಮುಖ್ಯ’ ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.

ಕೆಲ ವಚನಗಳಲ್ಲಿ ಅಡಕವಾಗಿರುವ ಸತ್ಯವನ್ನು ಬಿಡಿಸಿ ಹೇಳಿದರೆ ಬಹಳಷ್ಟು ಮಂದಿಯ ಕಣ್ಣು ಕೆಂಪಾಗುತ್ತದೆ. ಕಲ್ಲು ದೇವರು ದೇವರೇ ಅಲ್ಲ ಎಂಬುದು ಬಸವಣ್ಣನವರ ವಚನದ ಸಾರ. ಆದರೆ, ಬಹುಪಾಲು ಮಂದಿ ಕಲ್ಲು, ಮಣ್ಣು, ಮರದ ದೇವರನ್ನು ಪೂಜಿಸುತ್ತಾರೆ. ಶರಣ ತತ್ವದಲ್ಲಿ ನಂಬಿಕೆ ಇಟ್ಟುಕೊಂಡಿರುವವರು ಇಷ್ಟಲಿಂಗ ಪೂಜೆ ಮಾಡುವ ಭಾವನೆ ಬೆಳೆಸಿಕೊಳ್ಳಬೇಕು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com