ಮೈಸೂರು: ಪ್ರವಾಸಿಗರ ಕಾರಿನಿಂದ ಎರಡು ಲ್ಯಾಪ್ಟಾಪ್, ಐಫೋನ್ ದೋಚಿದ ದುಷ್ಕರ್ಮಿಗಳು
ಮೈಸೂರು: ಇತ್ತೀಚೆಗೆ ಮೈಸೂರಿಗೆ ಬಂದಿದ್ದ ಪ್ರವಾಸಿಗರೊಬ್ಬರ ಕಾರಿನಲ್ಲಿಟ್ಟಿದ್ದ ಎರಡು ಲ್ಯಾಪ್ಟಾಪ್ ಮತ್ತು ಐಫೋನ್ ಅನ್ನು ದುಷ್ಕರ್ಮಿಗಳು ಎಗರಿಸಿದ್ದಾರೆ. ಅಮೆಜಾನ್ನಲ್ಲಿ ಕೆಲಸ ಮಾಡುತ್ತಿರುವ ಟೆಕ್ಕಿಯಾಗಿರುವ ಬೆಂಗಳೂರಿನ ಹೆಬ್ಬಾಳ ನಿವಾಸಿ ರತ್ನ ಪ್ರಕಾಶ್ ಪಿಳ್ಳೈ (32) ಎರಡು ಲ್ಯಾಪ್ಟಾಪ್ ಮತ್ತು ಸೆಲ್ಫೋನ್ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಿಳ್ಳೈ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಮೈಸೂರಿಗೆ ಭೇಟಿ ನೀಡಿದ್ದರು. ಡಿ.27ರಂದು ಸಂಜೆ 5.30ರ ಸುಮಾರಿಗೆ ಸಿಪೈ ಗ್ರಾಂಡೆ ಹೊಟೇಲ್ನಲ್ಲಿ ಊಟ ಮಾಡಲೆಂದು ಎಂ.ಜಿ.ರಸ್ತೆಯ ಎಂ.ಪಿ.ನಾಗರಾಜ್ ಫಾರ್ಮ್ ಬಳಿ ಕಾರು ನಿಲ್ಲಿಸಿದ್ದರು. ಸಂಜೆ 6.45ರ ಸುಮಾರಿಗೆ ಹಿಂತಿರುಗಿ ನೋಡಿದಾಗ ಕಾರಿನ ಕಿಟಕಿ ಗಾಜು ಒಡೆದು ಕಾರಿನಲ್ಲಿದ್ದ ಲ್ಯಾಪ್ಟಾಪ್, ಐಫೋನ್ ಮತ್ತು ಹೆಡ್ಫೋನ್ ನಾಪತ್ತೆಯಾಗಿರುವುದು ಕಂಡು ಬಂದಿದೆ. ಈ ಸಂಬಂಧ ಕೆಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಲೀಕರ ಮನೆಯಿಂದ ಚಿನ್ನಾಭರಣ ಕದಿಯುತ್ತಿದ್ದ ಮಹಿಳೆ ಬಂಧನ: ಮತ್ತೊಂದೆಡೆ ಮನೆಯೊಂದರಲ್ಲಿ ನಗದು ಹಾಗೂ ಚಿನ್ನಾಭರಣ ಕಳವು ಮಾಡಿದ್ದ 35 ವರ್ಷದ ಮಹಿಳೆಯನ್ನು ಬಂಧಿಸಿರುವ ಘಟನೆ ಯರಗನಹಳ್ಳಿಯಲ್ಲಿ ನಡೆದಿದೆ. ಮಂಡ್ಯ ನಿವಾಸಿ ಪ್ರಿಯದರ್ಶಿನಿ (35) ಎಂಬಾಕೆಯನ್ನು ಬಂಧಿಸಿರುವ ಪೊಲೀಸರು ಆಕೆಯಿಂದ ರೂ.1.45 ಲಕ್ಷ ಮೌಲ್ಯದ 35 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಯರಗನಹಳ್ಳಿಯಲ್ಲಿ ಜ್ಯೋತಿ ಎಂಬುವವರ ಮನೆಯನ್ನು ಬಾಡಿಗೆಗೆ ಪಡೆದಿದ್ದರು. ಮಾಲೀಕನ ಮನೆಯ ಡ್ಯೂಪ್ಲಿಕೇಟ್ ಕೀ ತಯಾರಿಸಿ ಅಲ್ಮೇರಾದಲ್ಲಿಟ್ಟಿದ್ದ ಚಿನ್ನಾಭರಣಗಳನ್ನು ಕದ್ದಿದ್ದಳು. ದೂರಿನ ಆಧಾರದ ಮೇಲೆ ಆಲನಹಳ್ಳಿ ಪೊಲೀಸರು ಪ್ರಿಯದರ್ಶಿನಿಯನ್ನು ಬಂಧಿಸಿ ಕಳವು ಮಾಡಿದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ