ಉತ್ತರ ಕನ್ನಡ: ದೇವಸ್ಥಾನಕ್ಕೆ ಭೂಮಿ ದಾನ ಮಾಡದ ಕುಟುಂಬಕ್ಕೆ ಬಹಿಷ್ಕಾರ; ಆರ್ ದೇಶಪಾಂಡೆ ಕ್ಷೇತ್ರದಲ್ಲಿ ಹೀನ ಕೃತ್ಯ!

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಸಮೀಪದ ನೀರಲಗಿ ಗ್ರಾಮದ ಕುಟುಂಬವೊಂದು ತಮ್ಮ ಒಂದು ಎಕರೆ ಜಮೀನನ್ನು ಸ್ಥಳೀಯ ದೇವಸ್ಥಾನಕ್ಕೆ 'ದಾನ' ನೀಡಲು ನಿರಾಕರಿಸಿದ್ದಕ್ಕೆ ಭಾರೀ ಬೆಲೆ ತೆತ್ತಿದೆ.
ಬಹಿಷ್ಕಾರಕ್ಕೊಳಗಾದ ಕುಟುಂಬ
ಬಹಿಷ್ಕಾರಕ್ಕೊಳಗಾದ ಕುಟುಂಬ
Updated on

ಹಳಿಯಾಳ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಸಮೀಪದ ನೀರಲಗಿ ಗ್ರಾಮದ ಕುಟುಂಬವೊಂದು ತಮ್ಮ ಒಂದು ಎಕರೆ ಜಮೀನನ್ನು ಸ್ಥಳೀಯ ದೇವಸ್ಥಾನಕ್ಕೆ 'ದಾನ' ನೀಡಲು ನಿರಾಕರಿಸಿದ್ದಕ್ಕೆ ಭಾರೀ ಬೆಲೆ ತೆತ್ತಿದೆ. ಕಳೆದ ಐದು ವರ್ಷಗಳಿಂದ ಕುಟುಂಬವನ್ನು ಬಹಿಷ್ಕರಿಸಲಾಗಿದೆ ಮತ್ತು ಅವರ ಸಂಪರ್ಕಕ್ಕೆ ಬಂದವರನ್ನೂ ಟಾರ್ಗೆಟ್ ಮಾಡಲಾಗಿದೆ.

ಯಲ್ಲಾರಿ ಮಜನಪ್ಪ ಕದಂ ಅವರು 2012ರಲ್ಲಿ 16 ಸಾವಿರ ರೂಪಾಯಿ ಕೊಟ್ಟು ದುಡಿದ ಹಣದಲ್ಲಿ ಒಂದು ಎಕರೆ ಜಮೀನು ಖರೀದಿಸಿದ್ದರು. ತಮ್ಮ ಕುಟುಂಬದ ಭವಿಷ್ಯ ಭದ್ರವಾಗಲಿ ಎಂಬ ಆಶಾಭಾವನೆಯಿಂದ ಜಮೀನಿನಲ್ಲಿ ಮಾವಿನ ಗಿಡಗಳನ್ನು ಬೆಳೆಸಿದ್ದಾರೆ.

2017ರಲ್ಲಿ ಗ್ರಾಮದಲ್ಲಿರುವ ಹಿರಿಯರು ದೇವಸ್ಥಾನಕ್ಕೆ ಜಮೀನು ನೀಡುವಂತೆ ಹೇಳಿದ್ದರು. ದೇವಸ್ಥಾನದ ಅಧಿಕಾರಿಗಳು ವಾರ್ಷಿಕವಾಗಿ ಹೊರಡುವ ಕಾರ್ ಮೆರವಣಿಗೆಯ ಹಾದಿಯಲ್ಲಿ ಇವರ ಜಮೀನಿನನಲ್ಲಿ ಸಾಗುತ್ತದೆ. ಹೀಗಾಗಿ ಅವರು ಭೂಮಿಯನ್ನು ಖರೀದಿಸದೇ, ಉಚಿತವಾಗಿ ನೀಡಲು ಹೇಳುತ್ತಿದ್ದಾರೆ ಎಂದು ಕದಮ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

ಪಂಚರು ಒತ್ತಡ ಹೇರಲು ಆರಂಭಿಸಿದಾಗ ವಿಷಯ ಗಂಭೀರ ಸ್ವರೂಪ ಪಡೆಯಿತು. ಅವರು ಬಗ್ಗದಿದ್ದಾಗ ಕದಂ, ಅವರ ಪತ್ನಿ ಯಳವ್ವ ಮತ್ತು ಮಕ್ಕಳಾದ ಮಹೇಶ್ ಮತ್ತು ಮಂಜುನಾಥ್ ಅವರನ್ನು ಬಹಿಷ್ಕರಿಸಿದರು. ವಿಷಯ ಇಲ್ಲಿಗೇ ನಿಲ್ಲಲಿಲ್ಲ. "ನಾವು ಪೊಲೀಸರಿಗೆ ಲಿಖಿತ ದೂರು ನೀಡಿದ್ದೇವೆ, ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಪೊಲೀಸರು ಪ್ರಕರಣವನ್ನೂ ದಾಖಲಿಸಿಲ್ಲ,’’ ಎಂದು ಕದಂ ಹೇಳಿದರು.

ಬಹಿಷ್ಕರಕ್ಕೊಳಗಾದ ಕುಟುಂಬಕ್ಕೆ ಸಹಾಯ ಮಾಡಿದ ಅಥವಾ ಅವರನ್ನು ಭೇಟಿಯಾದ ಜನರನ್ನು ಸಹ ಬಹಿಷ್ಕರಿಸಿದಾಗ ವಿಷಯಗಳು ಹದಗೆಟ್ಟವು. ನಾವು ಶಾಸಕ ಆರ್‌ವಿ ದೇಶಪಾಂಡೆ ಮತ್ತು ಆಗಿನ ಎಂಎಲ್‌ಸಿ ಎಸ್‌ಎಲ್ ಘೋಟ್ನೇಕರ್ ಅವರನ್ನು ಭೇಟಿಯಾಗಿದ್ದೆವು. ಅವರು ಈ ವಿಷಯವನ್ನು ಪರಿಶೀಲಿಸಲು ನಿರಾಕರಿಸಿದರು ಮತ್ತು ಅದನ್ನು ಗ್ರಾಮದೊಳಗೆ ಪರಿಹರಿಸಬೇಕು ಎಂದು ಹೇಳಿದ್ದಾಗಿ ಕದಂ ತಿಳಿಸಿದ್ದಾರೆ.

ಬಹಿಷ್ಕಾರಗೊಂಡ ಕುಟುಂಬದವರಿಗೆ ಗ್ರಾಮದಲ್ಲಿ ಕಮ್ಮಾರರು ಮತ್ತು ಬಡಗಿಗಳ ಸೇವೆಯನ್ನು ಪಡೆಯುವುದನ್ನು ನಿಷೇಧಿಸಲಾಗಿದೆ. ಗ್ರಾಮದಲ್ಲಿ ದಿನಸಿ ಸಾಮಾನು ಕೊಳ್ಳಲೂ ಅವಕಾಶವಿಲ್ಲದೇ ಹಳಿಯಾಳಕ್ಕೆ ಹೋಗುವಂತೆ ಸೂಚಿಸಿದ್ದಾರೆ.

ಯಾರಾದರೂ ಸತ್ತರೆ, ನಮಗೆ ಸಿದ್ಗಿ (ಸಮುದಾಯ ದಹನಕ್ಕೆ ಬಳಸುವ ವಾಹನ) ಸಿಗುವುದಿಲ್ಲ. ಮಿರಾಶಿಗಳ (ಕುಣಬಿ ಸಮುದಾಯಕ್ಕೆ ಸೇರಿದ ಸ್ಥಳೀಯ ಅರ್ಚಕರ) ಸೇವೆಯನ್ನೂ ನಮಗೆ ನಿರಾಕರಿಸಲಾಗಿದೆ ಎಂದು ಬಹಿಷ್ಕಾರಕ್ಕೊಳಗಾದ ಕುಟುಂಬದೊಂದಿಗೆ ಮಾತನಾಡಿದ್ದಕ್ಕಾಗಿ ಬಹಿಷ್ಕರಿಸಲ್ಪಟ್ಟ ಕದಂ ಅವರ ಸಂಬಂಧಿ ಗಂಗವ್ವ ಹೇಳಿದರು.

ನನ್ನ ಹತ್ತಿರದ ಸಂಬಂಧಿಯೊಬ್ಬರು ಸ್ವಲ್ಪ ಸಮಯದ ಹಿಂದೆ ನಿಧನರಾದರು. ಈ ಬಹಿಷ್ಕಾರದಿಂದ ಯಾರೂ ಶವಸಂಸ್ಕಾರಕ್ಕೆ ಬರಲಿಲ್ಲ, ಎಂದು ಕದಂ ಸಂಬಂಧಿಯೊಬ್ಬರು ಹೇಳಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಿಕಟ್ಟಿ ಅವರನ್ನು ಸಂಪರ್ಕಿಸಿದಾಗ,ಈ ಸಂಬಂಧ ನನಗೆ ಮಾಹಿತಿಯಿಲ್ಲ, ನಾನು ಅದನ್ನು ಪರಿಶೀಲಿಸುತ್ತೇನೆ. ನಮ್ಮ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಅವರು ಗೌರವಯುತ ಜೀವನವನ್ನು ಪ್ರಾರಂಭಿಸುತ್ತಾರೆ ಎಂದು ಭರವಸೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com