ಬೆಂಗಳೂರು: ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (K-RERA) ನ್ಯಾಯಾಲಯವು ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿರುವ 65 ಅಪಾರ್ಟ್ಮೆಂಟ್ ವಸತಿ ಯೋಜನೆಯ ನಿಜವಾದ ಪ್ರಮೋಟರ್ ಗಳೆಂದು ಮನೆ ಖರೀದಿದಾರರಿಗೆ ಅಧಿಕಾರ ನೀಡಿದೆ. ಆವರಣದೊಳಗೆ ಅವರು ನಿರ್ಮಿಸುತ್ತಿರುವ 10 ಅಪಾರ್ಟ್ಮೆಂಟ್ಗಳ ಮಾರಾಟದ ಮೊತ್ತವನ್ನು ಬಳಸಲು ಹಸಿರು ನಿಶಾನೆ ತೋರಿಸಿದೆ.
ರೇರಾ ಕೋರ್ಟ್ ನ ಅಧ್ಯಕ್ಷ ಎಚ್ಸಿ ಕಿಶೋರ್ ಚಂದ್ರ ಮತ್ತು ನೀಲಮಣಿ ಎನ್ ರಾಜು ಮತ್ತು ಗುರಿಜಾಲ ರವೀಂದ್ರನಾಥ ರೆಡ್ಡಿ ಅವರನ್ನೊಳಗೊಂಡ ಪೂರ್ಣ ಪೀಠವು ಸೋಮವಾರ ವಿವಾಂಸಾ ಔರಿಗಾ ಅಪಾರ್ಟ್ಮೆಂಟ್ ಮಾಲೀಕರ ಸಹಕಾರ ಸಂಘ ಲಿಮಿಟೆಡ್ ಪರವಾಗಿ ತೀರ್ಪು ನೀಡಿದೆ. ತಮ್ಮ ಯೋಜನೆಯನ್ನು ಬಿಲ್ಡರ್ ಕೈಬಿಟ್ಟ ನಂತರ ಮೂಲ ಪ್ರಮೋಟರ್, ವಿಜಿಕಾನ್ ಪ್ರಾಪರ್ಟೀಸ್, ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕ್ಗಳು ಸೇರಿದಂತೆ 21 ಮಂದಿ ಇತರರ ವಿರುದ್ಧ ಮನೆ ಖರೀದಿದಾರರು ಪ್ರಕರಣ ದಾಖಲಿಸಿದ್ದಾರೆ.
ಮನೆ ಖರೀದಿದಾರರ ಪರವಾಗಿ ಪ್ರದೀಪ್ ಕುಮಾರ್ ಪಿಕೆ ಮತ್ತು ಅಸೋಸಿಯೇಟ್ಸ್ ಪ್ರತಿನಿಧಿಸಿದ್ದು, ವಕೀಲ ಪ್ರದೀಪ್ ಕುಮಾರ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ-TNIE ಜೊತೆ ಮಾತನಾಡುತ್ತಾ, ಜೂನ್ 30, 2016 ರಂದು ಖರೀದಿದಾರರೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರಕಾರ, ಯೋಜನೆಯನ್ನು ಜುಲೈ 2017 ರೊಳಗೆ ಗ್ರಾಹಕರಿಗೆ ನೀಡಬೇಕಾಗಿತ್ತು. ಯೋಜನೆಗೆ ಪಾವತಿಸಬೇಕಾದ ಆರಂಭಿಕ ಶೇಕಡಾ 10ನ್ನು ಹೊರತುಪಡಿಸಿ, ಖರೀದಿದಾರರು ಮನೆಗಳನ್ನು ಹಸ್ತಾಂತರಿಸಿದ ನಂತರವೇ ಇಎಂಐ ಪಾವತಿಸಬೇಕಾಗಿತ್ತು. ಪ್ರತಿ 2 ಬಿಎಚ್ಕೆ ಮನೆಗೆ ಆ ಸಮಯದಲ್ಲಿ ಸುಮಾರು 40 ಲಕ್ಷ ರೂ. ಮಾರಾಟ ಬೆಲೆಯಿತ್ತು.
ಪ್ರಮೋಟರ್ ಗಳಲ್ಲಿ ಹಣದ ಕೊರತೆಯಿಂದ ಯೋಜನೆಯನ್ನು ಮಾರ್ಚ್ 2020 ರಿಂದ ಡಿಸೆಂಬರ್ 2022 ರವರೆಗೆ ಕೈಬಿಡಲಾಗಿತ್ತು. ಯೋಜನೆಯ ಶೇಕಡಾ 50 ಮಾತ್ರ ಪೂರ್ಣಗೊಂಡಿದೆ. ಬ್ಯಾಂಕ್ಗಳು ಸಬ್ವೆನ್ಶನ್ ಯೋಜನೆಯಡಿಯಲ್ಲಿ(Subvention scheme) ಹಣವನ್ನು ನೀಡುತ್ತವೆ. ಖರೀದಿದಾರರು ತೆಗೆದುಕೊಂಡ ಸಾಲವನ್ನು ನೇರವಾಗಿ ಬಿಲ್ಡರ್ಗೆ ಜಮಾ ಮಾಡುತ್ತವೆ. ಖರೀದಿದಾರರ ಪೂರ್ವ-ಇಎಂಐ ಅವಧಿಯನ್ನು ಪಾವತಿಸಲು ಅವರು ಎಲ್ಲವನ್ನೂ ಬಳಸಿ ಯೋಜನೆಯನ್ನು ಪೂರ್ಣಗೊಳಿಸಲು ಹಣವಿರಲಿಲ್ಲ ಎಂದರು.
ಸಾಲ ಮರುಪಾವತಿಸುವಂತೆ ಬ್ಯಾಂಕ್ಗಳು ಖರೀದಿದಾರರನ್ನು ಒತ್ತಾಯಿಸಲು ಪ್ರಾರಂಭಿಸಿದಾಗ ನಿಜವಾದ ಸಮಸ್ಯೆ ಆರಂಭವಾಗಿದೆ. “ಅನೇಕರು ಅನಿವಾಸಿ ಭಾರತೀಯರಾಗಿದ್ದರು. ದೆಹಲಿ, ಗುರಗಾಂವ್ ಮುಂತಾದೆಡೆ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶ ಹೊರಡಿಸಲಾಗಿದೆ. ನಾವು ರಕ್ಷಣೆಗಾಗಿ K-RERA ನ್ನು ಸಂಪರ್ಕಿಸಬೇಕಾಗಿತ್ತು. ಇದು ನಿಜವಾಗಿಯೂ ಖರೀದಿದಾರರ ರಕ್ಷಣೆಗೆ ಬಂದಿದೆ ಎಂದರು.
RERA ಸಲಹೆಯಂತೆ, ತಮ್ಮ ಹಣವನ್ನು ಸಂಪೂರ್ಣವಾಗಿ ಪಾವತಿಸಿದ ಅಥವಾ ಇಎಂಐಗಳನ್ನು ಸಮಯಕ್ಕೆ ಪಾವತಿಸುವ 30 ಮನೆ ಖರೀದಿದಾರರೊಂದಿಗೆ ಸಹಕಾರ ಸಂಘವನ್ನು ರಚಿಸಲಾಗಿದೆ. “ಪ್ರತಿಯೊಬ್ಬರೂ 9 ಲಕ್ಷಕ್ಕೂ ಹೆಚ್ಚು ಹಣವನ್ನು ಸಂಗ್ರಹಿಸಿದ್ದಾರೆ. ಸಂಬಂಧಿಸಿದ ನಾಗರಿಕ ಅಧಿಕಾರಿಗಳನ್ನು ಸಂಪರ್ಕಿಸುವ ಮೂಲಕ ಮಂಜೂರಾತಿ ಯೋಜನೆಯನ್ನು ಮಾರ್ಪಡಿಸಲಾಗಿದೆ. ಹತ್ತು ಫ್ಲಾಟ್ಗಳನ್ನು ಮಾರಾಟ ಮಾಡುವುದರಿಂದ ಯೋಜನೆ ಪೂರ್ಣಗೊಳಿಸಲು ಸಾಕಷ್ಟು ಹಣ ಸಿಗುತ್ತದೆ ಎಂದು ವಕೀಲರು ಹೇಳಿದರು.
Advertisement