ತುಮಕೂರು: ಸೂತಕದ ಸಂಪ್ರದಾಯಕ್ಕೆ ಮಗು ಬಲಿ; ಚಳಿಯಲ್ಲಿ ನಡುಗಿ ನಡುಗಿ ಪ್ರಾಣಬಿಟ್ಟ ಹಸುಗೂಸು!

ಸೂತಕವು ದೇವರಿಗೆ ಆಗಲ್ಲ ಎಂದು ಬಾಣಂತಿ, ಹಸುಗೂಸನ್ನೇ ಊರಿನಿಂದ ಹೊರಗಿಟ್ಟ ಕುಟುಂಬಸ್ಥರು ಇದೀಗ ಮೌಡ್ಯ ಆಚರಣೆಯಿಂದಾಗಿ ಮಗುವನ್ನೇ ಕಳೆದುಕೊಂಡಿದ್ದಾರೆ.
ತಾಯಿ ಮಗು ಇದ್ದ ಟೆಂಟ್
ತಾಯಿ ಮಗು ಇದ್ದ ಟೆಂಟ್

ತುಮಕೂರು: ಸೂತಕವು ದೇವರಿಗೆ ಆಗಲ್ಲ ಎಂದು ಬಾಣಂತಿ, ಹಸುಗೂಸನ್ನೇ ಊರಿನಿಂದ ಹೊರಗಿಟ್ಟ ಕುಟುಂಬಸ್ಥರು ಇದೀಗ ಮೌಡ್ಯ ಆಚರಣೆಯಿಂದಾಗಿ ಮಗುವನ್ನೇ ಕಳೆದುಕೊಂಡಿದ್ದಾರೆ. ತುಮಕೂರು ಸಮೀಪದ ಮಲ್ಲೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ಸಿದ್ದೇಶ್ ಮತ್ತು ವಸಂತ ದಂಪತಿಯ ಮಗು ವಿಪರೀತ ಶೀತದಿಂದ ಬಳಲಿ ಮೃತಪಟ್ಟಿದೆ.

ಶೀತ ಹೆಚ್ಚಾಗಿದ್ದರಿಂದ ಮಗುವನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಸುಗೂಸು ಜು.26ರಂದು ಪ್ರಾಣಬಿಟ್ಟಿದೆ. ತಮ್ಮ ದೇವರಿಗೆ ಸೂತಕ ಆಗಲ್ಲ ಎಂದು ಬಾಣಂತಿ, ಮಗುವನ್ನು ಕುಟುಂಬಸ್ಥರು ಊರ ಹೊರಗಿಟ್ಟಿದ್ದರು. ಮಳೆ, ಗಾಳಿಯಿದ್ದರೂ ತಾಯಿ, ಮಗು ಊರ ಹೊರಗಿನ ಚಿಕ್ಕ ಗುಡಿಸಲಿನಲ್ಲಿಯೇ ವಾಸವಿದ್ದರು. ಇದೀಗ ಮೌಡ್ಯತೆಯೇ ಮಗುವಿನ ಜೀವ ತೆಗೆದಿದೆ.

ತುಮಕೂರಿನ ಮಲ್ಲೇನಹಳ್ಳಿಯಲ್ಲಿ ತಾತ್ಕಾಲಿಕ
ಟೆಂಟ್‌ನಲ್ಲಿ ವಸಂತಾ ತನ್ನ ಮಗುವಿನೊಂದಿಗೆ

ವಿಪರೀತ ಗಾಳಿ, ಮಳೆ ಇದ್ದರೂ ಸಹ ಮಗು ಮತ್ತು ತಾಯಿಯನ್ನು ಊರ ಹೊರಗೆ ಇರಿಸಲಾಗಿತ್ತು. ಇದರಿಂದ ಮಗುವಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಗ್ರಾಮದ ಸಿದ್ದೇಶ್ ಮತ್ತು ವಸಂತಾ ದಂಪತಿಯ ಮಗು ಮೃತಪಟ್ಟಿದೆ.

ಗ್ರಾಮದ ಸಿದ್ದೇಶ್​​ ಅವರ ಪತ್ನಿ ವಸಂತ ಕಳೆದ ತಿಂಗಳು 22ರಂದು ಅವಳಿ‌ ಮಕ್ಕಳಿಗೆ ಜನ್ಮ ನೀಡಿದ್ದರು. ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ವಸಂತಗೆ ಹೆರಿಗೆ ಆಗಿತ್ತು. ಈ ವೇಳೆ ಒಂದು ಮಗು ಸಾವನ್ನಪ್ಪಿದ್ದರೆ, ಇನ್ನೊಂದು ಮಗು ಬದುಕುಳಿದಿತ್ತು. ಏಳು ತಿಂಗಳಿಗೆ ಹೆರಿಗೆ ಆಗಿದ್ದರಿಂದ ಪ್ರಿ-ಮ್ಯಾಚೂರ್ಡ್ ಬೇಬಿಯನ್ನು ಜಿಲ್ಲಾಸ್ಪತ್ರೆಯ ಐಸಿಯುನಲ್ಲಿಡಲಾಗಿತ್ತು. ಕಳೆದ ಜು.14 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು.

ಆಸ್ಪತ್ರೆಯಿಂದ ಬರುತ್ತಿದ್ದಂತೆ ಕುಟುಂಬಸ್ಥರು ತಾಯಿ ಮತ್ತು ಮಗುವನ್ನು ಊರಾಚೆ ಇರುವ ಗುಡಿಸಲಿಗೆ ರವಾನೆ ಮಾಡಿದ್ದರು. ಹೀಗಾಗಿ ಬಾಣಂತಿ ವಸಂತ ಮತ್ತು ಹಸುಗೂಸು ಉಸಿರುಗಟ್ಟಿಸುವಂತಹ ಸಣ್ಣ ಗುಡಿಸಲಿನಲ್ಲೇ ಹಗಲು, ರಾತ್ರಿ ಇರಬೇಕಾದ ಪರಿಸ್ಥಿತಿ ಎದುರಾಗಿತ್ತು. ಇದೀಗ ವಿಪರೀತ ಮಳೆ, ಗಾಳಿಗೆ ಮಗು ಅನಾರೋಗ್ಯಕೀಡಾಗಿ ಇದೀಗ ಪ್ರಾಣಬಿಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com