'ತಂದೆ ನನ್ನ ಕೈಹಿಡಿದು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದರು; ಯಡಿಯೂರಪ್ಪ ಸಾಹೇಬ್ರು ನನ್ನ ರಾಜಕೀಯ ಗುರುಗಳು': ಬಸವರಾಜ ಬೊಮ್ಮಾಯಿ

ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಆರ್ ಬೊಮ್ಮಾಯಿಯವರ ಜನ್ಮಶತಮಾನೋತ್ಸವದ ಉದ್ಘಾಟನೆ ಮತ್ತು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಟಿಸಿದ ‘ದಿ ರಾಡಿಕಲ್ ಹ್ಯೂಮಾನಿಸ್ಟ್’ ಕಾಫಿ ಟೇಬಲ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಮ್ಮ ತಂದೆಯನ್ನು ನೆನೆದು ಭಾವುಕರಾದರು. 
ಎಸ್ ಆರ್ ಬೊಮ್ಮಾಯಿ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರಕಟಿಸಿರುವ ಪುಸ್ತಕ ಬಿಡುಗಡೆ
ಎಸ್ ಆರ್ ಬೊಮ್ಮಾಯಿ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರಕಟಿಸಿರುವ ಪುಸ್ತಕ ಬಿಡುಗಡೆ
Updated on

ಬೆಂಗಳೂರು: ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಆರ್ ಬೊಮ್ಮಾಯಿಯವರ ಜನ್ಮಶತಮಾನೋತ್ಸವದ ಉದ್ಘಾಟನೆ ಮತ್ತು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಟಿಸಿದ ‘ದಿ ರಾಡಿಕಲ್ ಹ್ಯೂಮಾನಿಸ್ಟ್’ ಕಾಫಿ ಟೇಬಲ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಮ್ಮ ತಂದೆಯನ್ನು ನೆನೆದು ಭಾವುಕರಾದರು. 

ನಾನು ಚಿಕ್ಕವನಾಗಿದ್ದಾಗ ನನ್ನ ತಂದೆ ನನ್ನ ಕೈ ಹಿಡಿದು ಶಾಲೆಗೆ ಕರೆದೊಯ್ಯುತ್ತಿದ್ದುದನ್ನು ನೆನಪಿಸಿಕೊಂಡರು. “ಹೊರಗೆ ಸಮಾಜದಲ್ಲಿ ಎತ್ತರದ ಸ್ಥಾನಕ್ಕೆ ಬೆಳೆದ ವ್ಯಕ್ತಿಯಾಗಿದ್ದರೂ ಮನೆಯಲ್ಲಿ ಸರಳವಾಗಿ ಇರುತ್ತಿದ್ದರು. ಮನೆಯಲ್ಲಿ ನಮಗೆ ಊಟದ ತುತ್ತನ್ನು ನೀಡುತ್ತಿದ್ದಾಗ ತಂದೆಯವರು ಸಮಾನತೆಯ ಮಹತ್ವದ ಬಗ್ಗೆ ಮೂಲಭೂತ ಪಾಠಗಳನ್ನು ಕಲಿಸುತ್ತಿದ್ದರು ಎಂದರು. 

ತಮ್ಮ ತಂದೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಸಿಎಂಗಳಾದ ಬಿಎಸ್ ಯಡಿಯೂರಪ್ಪ ಮತ್ತು ಎಸ್ ಎಂ ಕೃಷ್ಣ ಅವರ ನಡುವೆ ಒಂದು ಸಾಮ್ಯತೆ ಇದೆ ಎಂದು ಕೂಡ ಹೇಳಿದರು. ಯಾವುದೇ ಗಾಡ್‌ಫಾದರ್‌ಗಳಿಲ್ಲದೆಯೇ ಮೂವರು ರಾಜಕೀಯದಲ್ಲಿ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿದವರು. ಇದು ಅವರ ಹೋರಾಟ ಮತ್ತು ಶ್ರಮದಿಂದ ಮಾತ್ರ ಸಾಧ್ಯವಾಯಿತು ಎಂದರು. 

ವಿವಿಧ ಕಾಲಘಟ್ಟದ ನಾಯಕರ ಸಾಧನೆಯನ್ನು ಅಳೆಯಲು ಒಂದೇ ಅಳತೆಗೋಲು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟ ಬೊಮ್ಮಾಯಿ, ತಮ್ಮ ತಂದೆ ತೆಗೆದುಕೊಂಡ ಕೆಲವು ನಿರ್ಧಾರಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು. "ಅವರು ರಾಜಕೀಯದಲ್ಲಿದ್ದಾಗ ತಮ್ಮ ತತ್ವಗಳೊಂದಿಗೆ ರಾಜಿ ಮಾಡಿಕೊಂಡಿದ್ದರೆ ಅಧಿಕಾರದಲ್ಲಿ ಮುಂದುವರಿಯುತ್ತಿದ್ದರು, ಆದರೆ ಅವರು ಎಂದಿಗೂ ಹಾಗೆ ಮಾಡಲಿಲ್ಲ. ಎರಡನೇ ಬಾರಿ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿದಾಗ ಅದನ್ನು ನಯವಾಗಿ ತಿರಸ್ಕರಿಸಿ ನಾನು ಈಗಾಗಲೇ ಅಧಿಕಾರ ಅನುಭವಿಸಿದ್ದೇನೆ ಎಂದು ಇತರರಿಗೆ ದಾರಿ ಮಾಡಿಕೊಟ್ಟರು ಎಂದು ತಂದೆಯ ಉದಾತ್ತ ಮನೋಭಾವವನ್ನು ತೆರೆದಿಟ್ಟರು. 

ಯಡಿಯೂರಪ್ಪನವರು ನನ್ನ ರಾಜಕೀಯ ಗುರುಗಳು: ಇಂದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಶ್ಲಾಘಿಸಿದ ಬೊಮ್ಮಾಯಿ, ಯಡಿಯೂರಪ್ಪ ನನಗೆ ತಂದೆಯ ಸಮಾನ. ತಮ್ಮ ರಾಜಕೀಯ ಜೀವನದಲ್ಲಿ 'ಗುರು' ಎಂದು ಪರಿಗಣಿಸಿದ್ದೇನೆ. ನಾನು ಇಂದು ಏನೇ ಆಗಿದ್ದರು ಅದಕ್ಕೆ ಕಾರಣ ಬಿ.ಎಸ್.ಯಡಿಯೂರಪ್ಪ ಸಾಹೇಬರು. ಮನೆಯಲ್ಲಿ ಇದ್ದ ನನ್ನನ್ನು ಕೈ ಹಿಡಿದು ಕರೆದುಕೊಂಡು ಬಂದು ಸ್ಥಾನಮಾನ ನೀಡಿದ್ದು ಯಡಿಯೂರಪ್ಪ ಸಾಹೇಬರು ಎಂದು ಕಣ್ಣೀರು ಹಾಕಿದರು.

ಎಸ್ ಆರ್ ಬೊಮ್ಮಾಯಿಯವರ ಜನ್ಮ ಶತಮಾನೋತ್ಸವ ಸಂಬಂಧ ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಶೈಕ್ಷಣಿಕ ಮತ್ತು ಕಲ್ಯಾಣ ಪ್ರತಿಷ್ಠಾನವು ಬೊಮ್ಮಾಯಿ ಅವರ ಜನ್ಮಸ್ಥಳವಾದ ಹುಬ್ಬಳ್ಳಿ, ಬೆಂಗಳೂರು ಮತ್ತು ದೆಹಲಿಯಲ್ಲಿ ನಾಲ್ಕು ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸಲು ಯೋಜಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com