ಬೆಂಗಳೂರು: 2020 ರಲ್ಲಿ ನಡೆದ ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆಯಲ್ಲಿ ಭಾಗಿಯಾಗಿರುವ ಆರೋಪಿ ಇಮ್ರಾನ್ ಅಹ್ಮದ್ ಸಲ್ಲಿಸಿದ್ದ ಮೇಲ್ಮನವಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ. ನ್ಯಾಯಮೂರ್ತಿಗಳಾದ ಕೃಷ್ಣ ಎಸ್ ದೀಕ್ಷಿತ್ ಮತ್ತು ಪ್ರದೀಪ್ ಸಿಂಗ್ ಯೆರೂರ್ ಅವರ ವಿಭಾಗೀಯ ಪೀಠವು ಮನವಿಯನ್ನು ಅರ್ಹವಲ್ಲದ ಕಾರಣ ವಜಾಗೊಳಿಸಿದೆ.
ದೇಶದ್ರೋಹದಂತಹ ಗಂಭೀರ ಪ್ರಕರಣಗಳಲ್ಲಿ ಆರೋಪಿಗಳಿಗೆ ಜಾಮೀನಿನ ಕರುಣೆ ತೋರಲಾಗದು‘ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, 2020ರಲ್ಲಿ ಬೆಂಗಳೂರಿನಲ್ಲಿ ನಡೆದ ಡಿ.ಜೆ ಹಳ್ಳಿ ಕೆ.ಜಿ ಹಳ್ಳಿ ಪೊಲೀಸ್ ಠಾಣೆಗಳ ಮೇಲಿನ ಗಲಭೆಗೆ ಸಂಬಂಧಿಸಿದ ಆರೋಪಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.
ಜಾಮೀನು ಕೋರಿ ಪ್ರಕರಣದ 22ನೇ ಆರೋಪಿಯಾದ ಕೆ.ಜಿ.ಹಳ್ಳಿಯ ವಿನೋಬಾ ನಗರದ ಇಮ್ರಾನ್ ಆಹಮದ್ (40) ಸಲ್ಲಿಸಿದ್ದ ಅರ್ಜಿ ವಿಲೇವಾರಿ ಮಾಡಿರುವ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರು ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
ಸಂವಿಧಾನದ ಪ್ರಕಾರ ವೈಯಕ್ತಿಕ ಸ್ವಾತಂತ್ರ್ಯವಿದ್ದರೂ ಸಮಾಜದ ಹಿತದೃಷ್ಟಿ ಮತ್ತು ಸಾರ್ವಜನಿಕ ಸುರಕ್ಷೆಯ ಕಾರಣದಿಂದ ಇಂತಹ ಪ್ರಕರಣಗಳ ಆರೋಪಿಗಳಿಗೆ ಜಾಮೀನು ನೀಡಲಾಗದು. ದೇಶದ್ರೋಹದಂತಹ ಗಂಭೀರ ಸ್ವರೂಪದ ಅಪರಾಧಗಳನ್ನು ಹತ್ತಿಕ್ಕಲು ಸಂಸತ್ ಶಾಸನವನ್ನು ರೂಪಿಸಿರುವುದು ಪರಿಗಣಿಸಬೇಕಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣದಲ್ಲಿ ಹಲವು ಆರೋಪಿಗಳ ಜಾಮೀನು ಅರ್ಜಿಗಳನ್ನು ಇದೇ ಹೈಕೋರ್ಟ್ನ ಸಹವರ್ತಿ ನ್ಯಾಯಪೀಠಗಳು ವಜಾಗೊಳಿಸಿರುವ ಅಂಶ ಉಲ್ಲೇಖಿಸಿರುವ ನ್ಯಾಯಪೀಠ, ‘ಈ ಪ್ರಕರಣದಲ್ಲಿ ಆರೋಪಿಗಳಿಗೆ ತ್ವರಿತ ನ್ಯಾಯ ಕೇಳುವ ಎಲ್ಲಾ ಸಾಂವಿಧಾನಿಕ ಹಕ್ಕುಗಳಿವೆ. ಇದು ತ್ವರಿತ ವಿಚಾರಣೆಗೆ ಹೇಳಿ ಮಾಡಿಸಿದ ಪ್ರಕರಣ. ಸಾಧ್ಯವಾದರೆ ಪ್ರತಿದಿನ ವಿಚಾರಣೆ ನಡೆಸಬೇಕು‘ ಎಂದು ನಿರ್ದೇಶಿಸಿದೆ.
Advertisement