ಇಂದು ಮಂಡ್ಯದಲ್ಲಿ ಅಭಿಷೇಕ್-ಅವಿವಾ ವಿವಾಹ ಬೀಗರ ಔತಣ ಕೂಟ: ಅಭಿಮಾನಿಗಳನ್ನು ಆಹ್ವಾನಿಸಿದ ನವಜೋಡಿ

ರೆಬೆಲ್ ಸ್ಟಾರ್ ಅಂಬರೀಷ್ ಮತ್ತು ಸಂಸದೆ ನಟಿ ಸುಮಲತಾ ಅಂಬರೀಷ್ ಅವರ ಏಕೈಕ ಪುತ್ರ ನಟ ಅಭಿಷೇಕ್ ಅಂಬರೀಷ್ ಅವರ ವಿವಾಹ, ಆರತಕ್ಷತೆ ಕಾರ್ಯಕ್ರಮ ಇತ್ತೀಚೆಗೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನೆರವೇರಿತ್ತು.
ಅಭಿಷೇಕ್-ಅವಿವಾ
ಅಭಿಷೇಕ್-ಅವಿವಾ

ಮಂಡ್ಯ/ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಷ್ ಮತ್ತು ಸಂಸದೆ ನಟಿ ಸುಮಲತಾ ಅಂಬರೀಷ್ ಅವರ ಏಕೈಕ ಪುತ್ರ ನಟ ಅಭಿಷೇಕ್ ಅಂಬರೀಷ್ ಅವರ ವಿವಾಹ, ಆರತಕ್ಷತೆ ಕಾರ್ಯಕ್ರಮ ಇತ್ತೀಚೆಗೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನೆರವೇರಿತ್ತು.

ಇದೀಗ ಮಂಡ್ಯ ಜನತೆಗಾಗಿ, ಅಂಬರೀಷ್ ಅಭಿಮಾನಿಗಳಿಗಾಗಿ ಅಲ್ಲಿನ ಸಂಸದೆಯೂ ಆಗಿರುವ ಸುಮಲತಾ ಬೀಗರ ಔಟಣ ಕೂಟವನ್ನು ಇಂದು ಏರ್ಪಡಿಸಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರು ಸಮೀಪದ ಗೆಜ್ಜಲಗೆರೆ ಕಾಲೋನಿ ಬಳಿಯ 15 ಎಕರೆ ಪ್ರದೇಶದಲ್ಲಿ ಈ ಬೀಗರ ಔತಣಕೂಟ ಇಂದು ಮಧ್ಯಾಹ್ನ 12 ಗಂಟೆಯಿಂದ ಏರ್ಪಡಲಿದೆ. ಈ ಬೀಗರ ಊಟಕ್ಕೆ ಸುಮಾರು 50 ಸಾವಿರದಿಂದ ಒಂದು ಲಕ್ಷ ಜನರು ಆಗಮಿಸುವ ನಿರೀಕ್ಷೆಯಿದ್ದು ಸುಮಲತಾ ಕುಟುಂಬ ಈಗಾಗಲೇ ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿಸಿದ್ದಾರೆ.

ಅಭಿಷೇಕ್ – ಅವಿವಾ ಅವರ ಮಂಡ್ಯದ ಬೀಗರ ಔತಣಕೂಟಕ್ಕೆ ರಾಜಕೀಯ ಹಾಗೂ ಸಿನಿಮಾ ರಂಗದ ಹಲವು ಗಣ್ಯರು ಭಾಗವಹಿಸುವ ಸಾಧ್ಯತೆ ಇದ್ದು ಹೀಗಾಗಿ ವಿಐಪಿಗಳಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ.

ಮೆನು ಏನೇನು: ಇಂದು ಮಧ್ಯಾಹ್ನದಿಂದ ಆರಂಭವಾಗಲಿರುವ ಔತಣಕೂಟದಲ್ಲಿ 5-6 ಟನ್ ಮಟನ್, 7 ಟನ್ ಚಿಕನ್ ಬಳಸಿ ಭರ್ಜರಿ ಬಾಡೂಟ ತಯಾರಿ ಮಾಡಲಾಗುತ್ತದೆ. ಮಂಡ್ಯ ಶೈಲಿಯಲ್ಲಿ ಬಾಡೂಟ ತಯಾರಿಯಾಗಲಿದ್ದು ಮಂಡ್ಯದ ಪ್ರಖ್ಯಾತ ಬಾಣಸಿಗರ ತಂಡದಿಂದ ಅಡುಗೆ ತಯಾರಿ ಕಾರ್ಯ ರಾತ್ರಿಯಿಂದಲೇ ನಡೆಯುತ್ತದೆ. ಬೀಗರ ಔತಣಕೂಟ ಮೆನು ಮುದ್ದೆ, ಮಟನ್ ಬಿರಿಯಾನಿ, ಬೋಟಿ ಗೊಜ್ಜು, ಮಟನ್, ಎರಡು ಬಗೆಯ ಚಿಕನ್, ಮೊಟ್ಟೆ, ರೈಸ್, ತಿಳಿ ಸಾಂಬಾರ್, ಮಜ್ಜಿಗೆ, ಬೀಡಾ, ಐಸ್ ಕ್ರೀಂ, ಬಾಳೆಹಣ್ಣು ಇರಲಿದೆ.

ಈಗಾಗಲೇ ಸಂಸದೆ ಸುಮಲತಾ ಸೋಷಿಯಲ್ ಮೀಡಿಯಾ ಮೂಲಕ ಮಂಡ್ಯ ಜನತೆಗೆ ಇಂದಿನ ಬೀಗರ ಔತಣ ಕೂಟಕ್ಕೆ ಆಹ್ವಾನ ಮಾಡಿದ್ದರು. ನಿನ್ನೆ ಸೋಷಿಯಲ್ ಮೀಡಿಯಾ ಮೂಲಕ ಅಭಿಷೇಕ್-ಅವಿವಾ ದಂಪತಿ ಕೂಡ ವಿಡಿಯೊ ಮೂಲಕ ಆಹ್ವಾನ ನೀಡಿ ಎಲ್ಲರೂ ಆಗಮಿಸಿ ತಮಗೆ ಹರಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಅಂಬಿ ಅಂದ್ರೆ ಮಂಡ್ಯ: 'ರೆಬೆಲ್ ಸ್ಟಾರ್' ಅಂಬರೀಶ್ ಅವರು ಮೂಲತಃ ಮಂಡ್ಯದವರು. ಅವರ ರಾಜಕೀಯ ಜೀವನಕ್ಕೆ ಮಂಡ್ಯದಿಂದಲೇ ದೊಡ್ಡ ತಿರುವು ಸಿಕ್ಕಿತ್ತು. ನಂತರ ಅವರ ನಿಧನದ ನಂತರ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಅವರು ಚುನಾವಣೆಗೆ ಸ್ಪರ್ಧಿಸಿ ಗೆಲುವು ಕಂಡರು. ಹಾಗಾಗಿ, ಮಂಡ್ಯದಲ್ಲಿಯೇ ಅಭಿಷೇಕ್ ಮತ್ತು ಅವಿವಾ ಅವರ ಬೀಗರೂಟವನ್ನು ಹಮ್ಮಿಕೊಳ್ಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com